'ಸಿಡಿಯಲ್ಲಿರುವ ಧ್ವನಿ ನನ್ನದಲ್ಲ', ವರ್ತೂರು ಪ್ರಕಾಶ್ ಯೂಟರ್ನ್
ಕೋಲಾರ, ಏ. 28 : ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಸಿಡಿಯಲ್ಲಿರುವ ಧ್ವನಿ ತನ್ನದಲ್ಲ ಎಂದು ಹೇಳಿದ್ದಾರೆ. ಸಿಡಿ ಬಹಿರಂಗಗೊಂಡ ಸುಮಾರು ಒಂದು ತಿಂಗಳ ನಂತರ ಶಾಸಕರು ಈ ಕುರಿತು ಮಾತನಾಡಿದ್ದಾರೆ.
ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ವರ್ತೂರು ಪ್ರಕಾಶ್ ಅವರು, 'ದೂರವಾಣಿಯಲ್ಲಿರುವ ಧ್ವನಿ ನನ್ನದಲ್ಲ. ಮಿಮಿಕ್ರಿ ಕಲಾವಿದರ ಮೂಲಕ ಈ ಸಿಡಿಯನ್ನು ಸಿದ್ಧಪಡಿಸಲಾಗಿದೆ. ನನ್ನ ಮೇಲಿನ ಆರೋಪ ಸುಳ್ಳು' ಎಂದು ಹೇಳಿದರು. [ವರ್ತೂರು ವಿರುದ್ಧ ಲೋಕಾಯುಕ್ತ ತನಿಖೆ]

'ನಾನು ಜನರ ಸೇವೆ ಮಾಡಲು ಶಾಸಕನಾಗಿದ್ದೇನೆ. ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಲು ಅಲ್ಲ. ನನ್ನ ವಿರೋಧಿಗಳು ಈ ಸಿಡಿಯನ್ನು ಸೃಷ್ಟಿ ಮಾಡಿದ್ದಾರೆ. ಮರಳು ಗಣಿಗಾರಿಕೆಯವರ ಜೊತೆ ನಾನು ಶಾಮೀಲಾಗಿಲ್ಲ' ಎಂದು ಸ್ಪಷ್ಟನೆ ನೀಡಿದರು. [ಕುಮಾರಸ್ವಾಮಿ ಬಿಡುಗಡೆ ಮಾಡಿದ ಸಿಡಿಯಲ್ಲೇನಿದೆ?]
ಏನಿದು ಸಿಡಿ ವಿವಾದ : ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿನ ಪ್ರಕರಣದ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಿಡಿಯನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಶಾಸಕ ವರ್ತೂರು ಪ್ರಕಾಶ್ ಅಧಿಕಾರಿಗೆ ಮರಳು ಲಾರಿಯನ್ನು ಬಿಡಿಸುವಂತೆ ಕರೆ ಮಾಡಿ ಬೆದರಿಕೆ ಹಾಕುವ ಧ್ವನಿ ಇತ್ತು.
ಸದ್ಯದಲ್ಲೇ ಜಿಲ್ಲೆಗೆ ಹೊಸ ಡಿಸಿ ಬರುತ್ತಾರೆ ಎಂಬ ಧ್ವನಿಯೂ ಸಿಡಿಯಲ್ಲಿತ್ತು. ಶಾಸಕ ವರ್ತೂರು ಪ್ರಕಾಶ್ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಡಿಕೆ ರವಿ ಅವರನ್ನು ವರ್ಗಾವಣೆ ಮಾಡಿಸಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು.
ಈ ಸಿಡಿಯ ಆಧಾರದ ಮೇಲೆ ಕರ್ನಾಟಕ ರಣಧೀರ ಪಡೆ ಅಧ್ಯಕ್ಷ ಬಿ.ಹರೀಶ್ ಕುಮಾರ್ ವರ್ತೂರು ಪ್ರಕಾಶ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಪ್ರಕಾಶ್ ಅವರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.












Click it and Unblock the Notifications