ಹಿಜಾಬ್ ವಿವಾದ: ಮಕ್ಕಳಿಗೆ ಬುದ್ಧಿ ಹೇಳುವಂತೆ ಪೋಷಕರಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ
ಬೆಂಗಳೂರು, ಫೆಬ್ರವರಿ 8: ಕರ್ನಾಟಕದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಕ್ರಮೇಣ ತೀವ್ರ ಸ್ವರೂಪಕ್ಕೆ ತಿರುಗುತ್ತಿದೆ. ರಾಜ್ಯಾದ್ಯಂತ ವ್ಯಾಪಿಸುತ್ತಿರುವ ವಿವಾದಕ್ಕೆ ಕಾರಣವಾದವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಜ್ಞಾನವನ್ನು ಉದ್ದೀಪಿಸುವ ಶೈಕ್ಷಣಿಕ ಕೇಂದ್ರಗಳಲ್ಲಿ ಅಶಾಂತಿ ವಾತಾವರಣಕ್ಕೆ ಕಾರಣರಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಾಲಾ ಕಾಲೇಜುಗಳು ರಾಷ್ಟ್ರದ ಭಾವೈಕ್ಯತೆಯ ಕೇಂದ್ರ ಬಿಂದುಗಳಾಗಿವೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ರಾಷ್ಟ್ರದ ಆಸ್ತಿಯಾಗಬೇಕಾದ ವಿಧ್ಯಾರ್ಥಿಗಳು ಮತೀಯ ಶಕ್ತಿಗಳ ಕೈಯಲ್ಲಿ ಸಾಮಾಜಿಕ ಸ್ವಾಸ್ತ್ಯ ಕೆಡಿಸುವ ಅಸ್ತ್ರಗಳಾಗದಂತೆ ಪೋಷಕರು ಎಚ್ಚರ ವಹಿಸಬೇಕು. ಶೈಕ್ಷಣಿಕ ಕೇಂದ್ರ ಗಳು, ವಿದ್ಯೆ ಕಲಿಯುವ ಹಾಗೂ ಭೋದನೆಯ ದೇಗುಲಗಳಾಗಿಯೇ ಉಳಿಯಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೊರಡಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಕಾಲೇಜು ವಿದ್ಯಾರ್ಥಿಗಳಲ್ಲಿ ಗೃಹ ಸಚಿವರ ಮನವಿ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಎರಡು ವರ್ಷಗಳ ವ್ಯಾಸಂಗ ಅವಧಿ ಹಾಳಾಗಿದೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದೃಷ್ಟಿಯಿಂದ ಆಲೋಚನೆ ಮಾಡಬೇಕೇ ವಿನಃ ಬೇರೆ ಯಾವುದೂ ಇಲ್ಲಿ ಮುಖ್ಯವಲ್ಲ. ಈ ವರ್ಷ ತುಂಬಾ ಚೆನ್ನಾಗಿ ತರಗತಿಗಳು ನಡೆಯುತ್ತಿವೆ. ಕೆಲವೇ ತಿಂಗಳುಗಳಲ್ಲಿ ಪರೀಕ್ಷೆಗಳು ಎದುರಾಗಲಿದ್ದು, ಅವುಗಳಿಗೆ ವಿದ್ಯಾರ್ಥಿಗಳು ಅಣಿಯಾಗಬೇಕೇ ಹೊರತೂ ಮನಸ್ಸು ಹಾಳುಮಾಡಿಕೊಳ್ಳುವ ಕೆಲಸಕ್ಕೆ ಕೈ ಹಾಕಬೇಡಿ," ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮತೀಯ ಶಕ್ತಿಗಳ ಧಮನಕ್ಕೆ ಶಿಸ್ತುಕ್ರಮ:
ಹಿಜಾಬ್ ವರ್ಸಸ್ ಕೇಸರಿ ಶಾಲು ಎಂಬ ವಿವಾದಕ್ಕೆ ಕಾರಣವಾಗಿರುವ ಮತೀಯ ಶಕ್ತಿಗಳ ಧಮನಕ್ಕೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು. ನಾವೆಲ್ಲ ರಾಷ್ಟ್ರದ ಮಕ್ಕಳು ಎನ್ನುವ ಬಗ್ಗೆ ಆಲೋಚಿಸಬೇಕು. ಸೌಹಾರ್ದತೆ ಮತ್ತು ಸಹಕಾರದಿಂದ ನಾವೆಲ್ಲರೂ ಒಂದಾಗುವ ಅಗತ್ಯವಿದೆ. ಸಮವಸ್ತ್ ಎನ್ನುವುದು ಸಮಾನತೆ ಸಂಕೇತವಾಗಿದೆ. ಅದೂ ಕೂಡ ನಮ್ಮ ಪಾಠವಾಗಿದೆ. ಶಾಲೆಯು ನಮ್ಮ ಸಂಪ್ರದಾಯವನ್ನು ಆಚರಿಸುವುದಕ್ಕೆ ಇರುವುದಲ್ಲ. ಪೊಲೀಸ್ ಪಡೆಯನ್ನು ಬಳಸಿಕೊಳ್ಳುವಂತಾ ಸ್ಥಿತಿ ನಿರ್ಮಾಣವಾಗುವುದಕ್ಕೆ ಯಾರೂ ಅವಕಾಶ ನೀಡಬಾರದು.
ಷಕರಿಗೆ ಅರಗ ಜ್ಞಾನೇಂದ್ರ ಮನವಿ:
"ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಬೇಕಿದೆ. ಪೋಷಕರು ತಮ್ಮ ಮಕ್ಕಳಿಗೆ ಬುದ್ಧ ಹೇಳಿ ಮನೆಗೆ ಕರೆಸಿಕೊಳ್ಳಬೇಕು. ಶಾಂತಿಯುತವಾಗಿ ಶಾಲಾ ಕಾಲೇಜುಗಳು ನಡೆಯುವುದಕ್ಕೆ ಅವಕಾಶ ನೀಡಬೇಕು ಎಂದು ಪೋಷಕರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ," ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಕಾಲೇಜುಗಳಿಗೆ ರಜೆ ಘೋಷಣೆ:
ಮಂಗಳವಾರ ಉಡುಪಿ, ಮಂಡ್ಯ, ಮಡಿಕೇರಿ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಕಾಲೇಜುಗಳ ಮೇಲೆ ಕಿಡಿಗೇಡಿಗಳ ಗುಂಪು ಕಲ್ಲುತೂರಾಟ ನಡೆಸಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಸ್ ಮೇಲೆ ಕಲ್ಲು ತೂರಲಾಗಿದೆ. ಅದೇ ರೀತಿ ಬಾಗಲಕೋಟೆಯ ರಬಕವಿ ಬನಹಟ್ಟಿ ಪಟ್ಟಣದಲ್ಲೂ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳ ನಡುವೆ ಸಂಘರ್ಷಕ್ಕೆ ಕಾರಣವಾದ ಕಾಲೇಜುಗಳಿಗೆ ಒಂದು ದಿನ ರಜೆ ಘೋಷಿಸಲಾಗಿದೆ.












Click it and Unblock the Notifications