ಊಬ್ಲೋ ವಾಚ್ ಪ್ರಕರಣ: ಸಿದ್ದರಾಮಯ್ಯಗೆ ಎಸಿಬಿ ಕ್ಲೀನ್ ಚಿಟ್
ಬೆಂಗಳೂರು, ಮಾರ್ಚ್. 14 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಟ್ಟಿ ಕಾಡಿದ್ದ ವಜ್ರ ಖಚಿತ ಊಬ್ಲೋ ವಾಚ್ ಪ್ರಕರಣದಲ್ಲಿ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕ್ಲೀನ್ ಚಿಟ್ ನೀಡಿದೆ.
ಊಬ್ಲೋ ವಾಚ್ ಅನ್ನು ಸಿದ್ದರಾಮಯ್ಯನವರಿಗೆ ನಾನೇ ನೀಡಿರುವುದಾಗಿ ಅವರ ಸ್ನೇಹಿತ ಡಾ.ಗಿರೀಶ್ಚಂದ್ರ ವರ್ಮ ಎಸಿಬಿಗೆ ಹೇಳಿರುವುದರಿಂದ ಈ ಪ್ರಕರಣ ಇತ್ಯರ್ಥಗೊಂಡಿದೆ.
ತನಿಖೆ ಎಸಿಬಿ ತನಿಖೆ ವೇಳೆ ದುಬೈ ವೈದ್ಯ ಡಾ.ಗಿರೀಶ್ಚಂದ್ರ ವರ್ಮ ಅವರು 70 ಲಕ್ಷ ರೂ. ಬೆಲೆಬಾಳುವ ಊಬ್ಲೋ ವಾಚನ್ನು ಮುಖ್ಯಮಂತ್ರಿಗಳಿಗೆ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ.[ಊಬ್ಲೋ ವಾಚ್ ವಾರ್ : ಎಚ್ಡಿಕೆಯಿಂದ ಕಾಗೋಡು ತಿಮ್ಮಪ್ಪ ತನಕ!]
ಸ್ನೇಹಿತರೇ ಒತ್ತಾಯಪೂರ್ವಕವಾಗಿ ಉಡುಗೊರೆಯಾಗಿ ನೀಡಿರುವುದು ಕಾನೂನಿನ ಪ್ರಕಾರ ಅಪರಾಧವಲ್ಲ. ಹೀಗಾಗಿ ಈ ಪ್ರಕರಣವನ್ನು ಇತ್ಯರ್ಥಗೊಳಿಸುತ್ತಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ನಟರಾಜ ಶರ್ಮ ಅವರಿಂದ ದೂರು
ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಬೇಕೆಂದು ಈ ಹಿಂದೆ ರಾಜ್ಯಪಾಲರ ವಿ.ಆರ್.ವಾಲಾ ಅವರಿಗೆ ಸಾಮಾಜಿಕ ಕಾರ್ಯಕರ್ತ ನಟರಾಜ ಶರ್ಮ ಎಂಬುವರು ದೂರು ನೀಡಿದ್ದರು. ರಾಜ್ಯಪಾಲರು ಇದನ್ನು ತಿರಸ್ಕರಿಸಿದ್ದರು. ಬಳಿಕ ನಟರಾಜ ಶರ್ಮ, ವಕೀಲ ಟಿ.ಜೆ.ಅಬ್ರಹಾಂ, ಆರ್ಟಿಇ ಕಾರ್ಯಕರ್ತ ರಾಮಮೂರ್ತಿಗೌಡ ಎಂಬುವರು ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು ದಾಖಲಿಸಿದ್ದರು.

ಕುಮಾರಸ್ವಾಮಿ ಅವರಿಂದ ಜಗಜ್ಜಾಹೀರು
ನನ್ನ ಬಳಿ ಇರುವುದು ಕೇವಲ 5 ಲಕ್ಷ ರೂ. ಮೌಲ್ಯದ ವಾಚು ಎಂದು ಸಿದ್ದರಾಮಯ್ಯ ಅವರು ವಾದಿಸಿದ್ದರು. ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ದಾಖಲೆಗಳ ಸಮೇತ ಇದು 70 ಲಕ್ಷ ಬೆಲೆಬಾಳುವ ಊಬ್ಲೋ ವಾಚ್ ಎಂಬುದನ್ನು ಜಗಜ್ಜಾಹೀರು ಮಾಡಿದ್ದರು.[ದುಬಾರಿ ವಾಚ್ ಪ್ರಕರಣ : ಸಿದ್ದರಾಮಯ್ಯಗೆ ಬಿಗ್ ರಿಲೀಫ್!]

ಭಾರೀ ಸುದ್ದಿ ಮಾಡಿದ್ದ ಊಬ್ಲೋ ವಾಚ್
ಸ್ವಚ್ಛ ರಾಜಕಾರಣಿ ಎಂದೇ ಬಿಂಬಿತವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಾಚ್ ವೊಂದು ಅವರನ್ನು ಇರಿಸು-ಮುರಿಸು ಉಂಟುಮಾಡಿತ್ತು. ಈ ಊಬ್ಲೋ ವಾಚ್ ರಾಜ್ಯದ್ಯಾಂತ ಬೃಹತ್ ಪ್ರಮಾಣದ ಸುದ್ದಿ ಮಾಡಿತ್ತು. ಅಷ್ಟೇ ಅಲ್ಲದೆ ಈ ಪ್ರಕರಣ ಕಾಂಗ್ರಸ್ ಹೈಕಮಾಂಡ್ ಅಂಗಳಕ್ಕೂ ಹೋಗಿತ್ತು.

ವಾಚನ್ನು ಸರ್ಕಾರಕ್ಕೆ ಒಪ್ಪಿಸಿದ ಸಿದ್ದರಾಮಯ್ಯ
ಊಬ್ಲೋ ವಾಚ್ ಪ್ರಕರಣವನ್ನು ಪ್ರತಿಪಕ್ಷ ಬಿಜೆಪಿ ಅಧಿವೇಶನದಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸುವಂತೆ ಭಾರೀ ಪ್ರತಿಭಟನೆಗಳನ್ನು ಮಾಡಿದ್ದವು. ಬಳಿಕ ಸಿದ್ದರಾಮಯ್ಯ ಅವರು ವಜ್ರ ಖಚಿತ ಊಬ್ಲೋ ವಾಚ್ ಅನ್ನು ಮಾರ್ಚ್ 2ರಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರ ಮಾಡಿದ್ದರು.












Click it and Unblock the Notifications