ಮತ್ತೊಬ್ಬ ಡಿಕೆ ರವಿ? ಅನುರಾಗ್ ತಿವಾರಿ ಸಾವಿನಲ್ಲೂ ರಾಜಕೀಯ
ಕೊಲೆ ಸಾಧ್ಯತೆ, ದೇಹದ ಮೇಲಿನ ಗಾಯದ ಗುರುತು, ಉತ್ತರ ನೀಡದ ಮರಣೋತ್ತರ ಪರೀಕ್ಷೆಯ ವರದಿ, ಹಗರಣಗಳ ಆರೋಪ, ಹಿರಿಯ ಅಧಿಕಾರಿಗಳಿಂದ ಒತ್ತಡ ಹೀಗೆ ಅನುರಾಗ್ ತಿವಾರಿ ಸಾವಿನ ಸುತ್ತಾ ಓಡಾಡುತ್ತಿರುವ ಗಾಳಿ ಸುದ್ದಿಗಳಿಗೆ ಲೆಕ್ಕವೇ ಇಲ್ಲ.
ಬೆಂಗಳೂರು, ಮೇ 19: ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಶಂಕಾಸ್ಪದ ಸಾವು ಕರ್ನಾಟಕ ಜನರು ಹಾಗೂ ರಾಜಕಾರಣಿಗಳಲ್ಲಿ ಅನುಮಾನದ ಅಲೆ ಎಬ್ಬಿಸಿದೆ. ತಿವಾರಿ ಸಾವಿನ ಎರಡು ದಿನಗಳ ನಂತರ ಸಾವಿನ ಕಾರಣಗಳ ಬಗ್ಗೆ ಗಾಳಿ ಸುದ್ದಿಗಳು ಭರ್ಜರಿಯಾಗಿ ಓಡಾಡುತ್ತಿವೆ.
ಕೊಲೆ ಸಾಧ್ಯತೆ, ಅನುಮಾನ ಹುಟ್ಟು ಹಾಕಿದ ಗಾಯದ ಗುರುತು, ಸಾವಿಗೆ ಸರಿಯಾದ ಕಾರಣ ನೀಡದ ಮರಣೋತ್ತರ ಪರೀಕ್ಷೆಯ ವರದಿ, ಹಗರಣಗಳ ಆರೋಪ, ಹಿರಿಯ ಅಧಿಕಾರಿಗಳಿಂದ ಒತ್ತಡ ಹೀಗೆ ಅನುರಾಗ್ ತಿವಾರಿ ಸಾವಿನ ಸುತ್ತಾ ಓಡಾಡುತ್ತಿರುವ ಸುದ್ದಿಗಳಿಗೆ ಲೆಕ್ಕವೇ ಇಲ್ಲ.[ತಿವಾರಿ ಸಾವಿನ ಕೇಸ್, ಶೋಭಾ ಮನವಿ ಪುರಸ್ಕರಿಸಿದ ಸಿಎಂ ಯೋಗಿ]
ಒಟ್ಟಾರೆ ಇದನ್ನೆಲ್ಲಾ ನೋಡುತ್ತಿದ್ದರೆ 2015ರಲ್ಲಿ ಸಾವಿಗೀಡಾಗಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಸಾವನ್ನೇ ಇದು ನೆನಪಿಸುತ್ತಿದೆ.

ಸಾವಿನ ಸುತ್ತ ರಾಜಕೀಯ
ಗುರುವಾರ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಯೋಗಿ ಆದಿತ್ಯನಾಥ್ ಸಂಪುಟದ ಸಚಿವ ಸುರೇಶ್ ಕುಮಾರ್ ಖನ್ನಾ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರಕಾರದ ಕೋಟಿ ಕೋಟಿಯ ಹಗರಣವನ್ನು ಬಯಲಿಗೆಳೆಯಲು ಅನುರಾಗ್ ತಿವಾರಿ ಸಜ್ಜಾಗಿದ್ದರು ಎಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಇದೀಗ ಭಾರೀ ವಿವಾದ ಹುಟ್ಟು ಹಾಕಿದೆ.[ಆಯುಕ್ತ ಅನುರಾಗ್ ತಿವಾರಿ ಸಾವು; ಏನು ಹೇಳ್ತಾರೆ ಪೊಲೀಸರು?]

ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ
ಡಿಕೆ ರವಿ ಪ್ರಕರಣದಂತೆ ಅನುರಾಗ್ ತಿವಾರಿ ಸಾವಿನ ಪ್ರಕರಣದಲ್ಲೂ ಸಿಬಿಐ ತನಿಖೆ ನಡೆಸುವಂತೆ ಬಿಜೆಪಿ ಒತ್ತಾಯಿಸಿದೆ. ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದು ತ್ವರಿತ ಹಾಗೂ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಯೋಗಿ ಆದಿತ್ಯನಾಥ್ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಅಗತ್ಯ ಬಿದ್ದರೆ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.[ಡಿಕೆ ರವಿ ಆತ್ಮಹತ್ಯೆ: ಸಿಬಿಐ ನೀಡಿದ ಸ್ಫೋಟಕ ವರದಿಯಲ್ಲೇನಿದೆ?]

ಸಿಬಿಐ ತನಿಖೆಗೆ ನೀಡಿ -ಬಿಎಸ್ವೈ
"ಅನುರಾಗ್ ತಿವಾರಿ ಆಹಾರ ತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿನ 2,000 ಕೋಟಿಯ ಹಗರಣ ಬಯಲಿಗೆಳೆಯಲು ಹೊರಟಿದ್ದರು ಎಂದು ಅವರ ಸಹೋದರ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿ ತೆಗೆದುಕೊಂಡು ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಇಲ್ಲದಿದ್ದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಈ ಕೆಲಸ ಮಾಡಲಿದ್ದಾರೆ," ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಹೇಳಿದ್ದಾರೆ.

ಯಾವುದೇ ತನಿಖೆಗೆ ಸಿದ್ಧ
ಎಲ್ಲಾ ಆರೋಪಗಳ ಮಧ್ಯೆ ಅನುರಾಗ್ ತಿವಾರಿ ಸಾವಿಗೆ ಕಾರಣವಾಗಿರಬಹುದಾದ ಅಂಶಗಳನ್ನು ಪತ್ತೆ ಹಚ್ಚಲು ಇಬ್ಬರು ಅಧಿಕಾರಿಗಳನ್ನು ಕರ್ನಾಟಕ ಸರಕಾರ ಉತ್ತರ ಪ್ರದೇಶಕ್ಕೆ ಕಳುಹಿಸಿಕೊಟ್ಟಿದೆ.
ಇನ್ನು ತಿವಾರಿ ಸಾವಿನ ಕುರಿತು ಪ್ರತಿಕ್ರಿಯೆ ನೀಡಿರುವ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯುಟಿ ಖಾದರ್ ಯಾವುದೇ ತನಿಖೆಗೆ ಸಿದ್ದ ಎಂದಿದ್ದಾರೆ.
ಅವರ ಸಾವಿಗೆ ಕಾರಣಗಳನ್ನು ಯಾರೇ ಪತ್ತೆ ಹಚ್ಚಿದರೂ ಸ್ವಾಗತ ಎಂದು ಖಾದರ್ ಹೇಳಿದ್ದಾರೆ. ಜತೆಗೆ ಇಲಾಖೆಯಲ್ಲಿ ಹಗರಣ ನಡೆದಿರುವುದನ್ನು ಅವರು ತಳ್ಳಿ ಹಾಕಿದ್ದಾರೆ.
ಇನ್ನು ಯಾವುದೇ ಸಂಸ್ಥೆಯಿಂದ ತನಿಖೆ ನಡೆದರೂ ನಾವು ಅದಕ್ಕೆ ಪೂರ್ತಿ ಬೆಂಬಲ ನೀಡಲಿದ್ದೇವೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಡಿಕೆ ರವಿ ಪ್ರಕರಣದ ವೇಳೆಯೂ ಸಿದ್ದರಾಮಯ್ಯ ಇದೇ ರೀತಿ ಸಾರ್ವಜನಿಕರಿಂದ ಒತ್ತಡ ಎದುರಿಸಿದ್ದರು. ಕೊನೆಗೆ ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.

ರೋಧಿಸುತ್ತಿರುವ ಕುಟುಂಬಸ್ಥರು
ಅನುರಾಗ್ ತಿವಾರಿ ಸಾವಿಗೆ ಕುಟುಂಬಸ್ಥರು ರೋಧಿಸುತ್ತಿದ್ದಾರೆ. ದಕ್ಷ, ಪ್ರಮಾಣಿಕರಾಗಿದ್ದಕ್ಕೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. ತಿವಾರಿ ದೇಹದ ಮೇಲಿನ ಗಾಯದ ಹಿನ್ನಲೆಯಲ್ಲಿ ಅವರ ಸಾವಿನ ಬಗ್ಗೆ ಸಹೋದರ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದರ ಜತೆಗೆ ಅನುರಾಗ್ ಪೋಷಕರು ಮಾತನಾಡಿದ್ದು, ಅವರ ಮೇಲೆ ಹಿರಿಯ ಅಧಿಕಾರಿಗಳು ಒತ್ತಡ ಹೇರಿದ್ದರು ಮತ್ತು ಅವರನ್ನು ಟಾರ್ಗೆಟ್ ಮಾಡಿದ್ದರು ಎಂದು ಹೇಳಿದ್ದಾರೆ. ಕುಟುಂಬಸ್ಥರು ತಿವಾರಿ ಸಾವಿಗೆ ರೋಧಿಸುತ್ತಿದ್ದರೆ, ಅವರ ಸಾವಿನ ಸುತ್ತಾ ರಾಜಕೀಯದ ಬೇಳೆಯೂ ಬೇಯುತ್ತಿದೆ.[ಡಿಕೆ ರವಿ ಆತ್ಮಹತ್ಯೆ ಕಾರಣ? ತನಿಖೆಯೇ ಅನುಮಾನ!]

ಖಿನ್ನತೆಯಿಂದ ಬಳಲುತ್ತಿದ್ದ ಅನುರಾಗ್ ತಿವಾರಿ
ಸಹೋದ್ಯೋಗಿಗಳ ಪ್ರಕಾರ ತಿವಾರಿ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮದುವೆಯಾದ ಬೆನ್ನಿಗೆ ತಿವಾರಿ ವೈವಾಹಿಕ ಜೀವನ ವಿಚ್ಛೇದನದಲ್ಲಿ ಅಂತ್ಯವಾಗಿತ್ತು. ಅವರು ಬೆಂಗಳೂರು ಬಿಡುವಾಗ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಅವರ ಆಪ್ತರು ಹೇಳಿದ್ದಾರೆ. ಕೊನೆಯ ಬಾರಿಗೆ ಅವರು ತಮ್ಮ ಬ್ಯಾಚ್ ಮೇಟ್ ಗಳೊಂದಿಗೆ ಗೆಸ್ಟ್ ಹೌಸ್ ನಲ್ಲಿ ಸಿಕ್ಕಿದ್ದರು. ಇದರಿಂದ ಇದೀಗ ಉತ್ತರ ಪ್ರದೇಶ ಪೊಲೀಸರು ಅವರ ಬ್ಯಾಚ್ ಮೇಟ್ ಗಳನ್ನು ತನಿಖೆ ನಡೆಸುತ್ತಿದ್ದಾರೆ.
{promotion-urls}












Click it and Unblock the Notifications