ಕೊಪ್ಪಳದ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ; ಸರ್ಕಾರದಿಂದ ಶೀಘ್ರದಲ್ಲೇ ಘೋಷಣೆ
ಕೊಪ್ಪಳ, ಫೆಬ್ರವರಿ 21: ದೇಶದಾದ್ಯಂತ ಪೂಜೆ ಸಲ್ಲಿಸುವ ರಾಮಭಕ್ತ ಹನುಮನ ಜನ್ಮಸ್ಥಳದ ಬಗ್ಗೆ ಇತ್ತೀಚೆಗೆ ಭಾರೀ ಚರ್ಚೆ ನಡೆಯುತ್ತಿದೆ. ಆಂಜನೇಯನ ಜನ್ಮಸ್ಥಳದ ಬಗ್ಗೆ ತಿರುಪತಿ ತಿರುಮಲ ದೇವಸ್ಥಾನ ಸಮಿತಿಯವರು (ಟಿಟಿಡಿ) ವಿವಾದ ಹುಟ್ಟು ಹಾಕಿದ್ದಾರೆ.
ಕಳೆದ ವರ್ಷ ಟಿಟಿಡಿಯು ಆಂಜನೇಯನ ಜನ್ಮ ಸ್ಥಳವು ತಿರುಪತಿಯಲ್ಲಿನ ಆಕಾಶಗಂಗಾ ಪ್ರದೇಶದ ಕಿಷ್ಕಿಂಧೆ ಎಂದು ಹೇಳಿ ವಿವಾದ ಹುಟ್ಟು ಹಾಕಿದೆ. ಈ ವಿವಾದಕ್ಕೆ ದಾಖಲೆ ಸಮೇತ ಉತ್ತರ ನೀಡಲು ಕೊಪ್ಪಳ ಜಿಲ್ಲಾಡಳಿತವು ಈಗ ಸಿದ್ದತೆ ನಡೆಸಿದೆ. ಈ ಭಾಗದಲ್ಲಿರುವ ಐತಿಹಾಸಿಕ, ಪೌರಾಣಿಕ ಹಾಗೂ ಧಾರ್ಮಿಕ ಪ್ರದೇಶಗಳ ಕುರುಹುಗಳ ಕುರಿತು ತಜ್ಞರ ವರದಿ ತಯಾರಿಸಿದೆ.
ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಹನುಮ ಕರ್ನಾಟಕದಲ್ಲಿ ಹುಟ್ಟಿದ್ದಾನೆ ಎಂದು ಘೋಷಿಸಲು ಸಿದ್ಧತೆ ನಡೆಸಿದ್ದು, ಪುರಾತನ ಕಾಲದಿಂದಲೂ ಕೊಪ್ಪಳ ಜಿಲ್ಲೆಯ ಹನುಮನಳ್ಳಿಯ ಬಳಿಯಲ್ಲಿರುವ ಅಂಜನಾದ್ರಿ ಹಾಗೂ ಸಾಣಾಪುರ ಬಳಿಯಲ್ಲಿರುವ ಬಾಲಾಂಜನೇಯ ದೇವಸ್ಥಾನಗಳು ಆಂಜನೇಯನ ಜನ್ಮಸ್ಥಳವೆಂದು ನಂಬಿಕೊಂಡು ಬರಲಾಗಿದೆ.

ಆಂಜನೇಯ ಹುಟ್ಟಿದ್ದು ತಿರುಪತಿಯಲ್ಲಿ ಎಂದಿರುವ ಟಿಟಿಡಿ
ಕಳೆದ ವರ್ಷ ತಿರುಪತಿ ತಿರುಮಲ ದೇವಸ್ಥಾನವು 16ನೇ ಶತಮಾನದಲ್ಲಿ ದಾಖಲಾಗಿರುವ ಸಾಹಿತ್ಯವನ್ನು ಆಧಾರವಾಗಿಟ್ಟುಕೊಂಡು ಆಂಜನೇಯ ಹುಟ್ಟಿದ್ದು ತಿರುಪತಿಯಲ್ಲಿ ಎಂದು ಹೇಳಿ ಅಲ್ಲಿ ಫೆಬ್ರವರಿ 16ರಂದು ಆಕಾಶ ಗಂಗಾ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದೆ.
ಈ ಬಗ್ಗೆ ಕೊಪ್ಪಳ ಜಿಲ್ಲಾಡಳಿತ ಹಾಗೂ ರಾಜ್ಯದ ಹನುಮನ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಭಾಗದ ಹಂಪಿಯಲ್ಲಿರುವ ಸೀತೆ ಸೆರಗು, ಕಿಷ್ಕಿಂಧೆ ಹಾಗೂ ಪಂಪಾ ಸರೋವರ ಬಳಿಯಲ್ಲಿನ ಶಬರಿ ಗುಹೆ ಹೀಗೆ ಹಲವಾರು ಕುರುಹುಗಳನ್ನು ಈ ಪ್ರದೇಶ ಹೊಂದಿರುವದರಿಂದ ಇಲ್ಲಿಯೇ ಆಂಜನೇಯ ಜನಿಸಿದ್ದಾನೆ ಎಂದು ಜನತೆ ಹೇಳುತ್ತಿದ್ದಾರೆ.

ಅಂಜನಾದ್ರಿಯೇ ಆಂಜನೇಯನ ಜನ್ಮ ಸ್ಥಳ
ಇವುಗಳ ಮಧ್ಯೆ ಕ್ರಿಸ್ತ ಪೂರ್ವ 5000 ವರ್ಷಗಳ ಹಿಂದಿನ ರಾಮಾಯಣದಲ್ಲಿಯೂ ಕಿಷ್ಕಿಂಧಾ ಕಾಂಡ ಹಾಗೂ ಸುಂದರ ಕಾಂಡದಲ್ಲಿ ಈ ಭಾಗದಲ್ಲಿರುವ ಕುರುಹುಗಳ ಹೊಲುವಂತಿರುವ ಇದೇ ಭಾಗ ಕಿಷ್ಕಿಂಧೆ ಎಂದು ಹೇಳಿದೆ. ಅಲ್ಲದೆ ಬೇರೆ ಬೇರೆ ಸಾಹಿತ್ಯ, ಶಾಸನಗಳಲ್ಲಿಯೂ ಈ ಕುರಿತು ದಾಖಲಾಗಿದೆ. ಇಲ್ಲಿಯ ಇತಿಹಾಸ ತಜ್ಞರು ಸಹ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ಹೇಳುತ್ತಿದ್ದಾರೆ. ಇಷ್ಟೆಲ್ಲಾ ದಾಖಲೆಗಳು ಇದ್ದರೂ ಕರ್ನಾಟಕ ಸರಕಾರ ತಿರುಪತಿ ಆಂಜನೇಯನ ಜನ್ಮಸ್ಥಳವೆಂದು ಘೋಷಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿಲ್ಲ.
ರಾಜ್ಯ ಸರಕಾರದಿಂದ ಅಧಿಕೃತ ಘೋಷಣೆಗೆ ಆಗ್ರಹ
ಇನ್ನು ಟಿಟಿಡಿ ಕ್ಯಾತೆಗೆ ಕಿಡಿಕಾರಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಅವರು ಆಧಾರ ರಹಿತವಾಗಿ ಹೇಳುತ್ತಿದ್ದಾರೆ. ಆದರೆ ನಮ್ಮ ಪೂರ್ವಿಕರು ಅಂಜನಾದ್ರಿಯಲೇ ಆಂಜನೇಯ ಹುಟ್ಟಿದ ಸ್ಥಳವೆಂದು ಹೇಳುತ್ತಿದ್ದರು. ಇನ್ನು ರಾಮ- ಸೀತೆ ಇರುವ ಸೀತೆ ಸೆರಗು, ಮಾಲ್ಯವಂತ ಅನ್ನುವ ಸ್ಥಳ ಈಗಲೂ ಹಂಪಿಯಲ್ಲಿದೆ. ಇತಿಹಾಸ ತಿರುಚಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

ಅಂಜನಾದ್ರಿಯಲ್ಲೆ ಆಂಜನೇಯ ಹುಟ್ಟಿದ್ದು ಘೋಷಿಸಲು ಚಿಂತನೆ
ರಾಜ್ಯ ಸರ್ಕಾರವು ಅಂಜನಾದ್ರಿಯಲ್ಲೇ ಆಂಜನೇಯ ಹುಟ್ಟಿದ್ದು ಎಂದು ಘೋಷಣೆ ಮಾಡಲು ಮುಂದಾಗಿದೆ. ಅಷ್ಟೇ ಅಲ್ಲ ಬಜೆಟ್ನಲ್ಲಿ ರಾಮ ಮಂದಿರದ ಮಾದರಿಯಲ್ಲೇ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಹಣ ಮೀಸಲಿಡಲು ಮುಂದಾಗಿದೆ. ಅದಕ್ಕಾಗಿ ಮುಜರಾಯಿ ಇಲಾಖೆಯು ಸಹ ಆಂಜನೇಯನ ಜನ್ಮಸ್ಥಳ ಕೊಪ್ಪಳ ಜಿಲ್ಲೆ ಎಂಬುವುದನ್ನು ದಾಖಲೆಗಳನ್ನು ಸಂಗ್ರಹಿಸಿ ಕಳುಹಿಸಲು ಕೊಪ್ಪಳ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಮುಂಬರುವ ಬಜೆಟ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, 13 ಎಕರೆ ಪ್ರದೇಶದಲ್ಲಿ ಅಂಜನಾದ್ರಿ ಪರ್ವತವನ್ನು ಅಭಿವೃದ್ಧಿ ಮಾಡಲು ಅನುದಾನ ಘೋಷಿಸುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ರಾಜ್ಯ ಸರ್ಕಾರ ಅಂಜನಾದ್ರಿಯಲ್ಲೇ ಆಂಜನೇಯ ಹುಟ್ಟಿದ್ದು ಎಂದು ಅಧಿಕೃತವಾಗಿ ಘೋಷಣೆ ಮಾಡಿದರೆ, ಹನುಮನ ಭಕ್ತರು ಹರ್ಷಗೊಳ್ಳಲಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಟಿಟಿಡಿ ಯಾವ ರೀತಿ ವಿವಾದ ಶುರು ಮಾಡಲಿದೆ ಕಾದು ನೋಡಬೇಕಿದೆ.
ಈ ಮಧ್ಯೆ ವಿಧಾನ ಪರಿಷತ್ನಲ್ಲಿ ತುಂಗಭದ್ರಾ ನದಿಯ ದಡದಲ್ಲಿರುವ ಅಂಜನಾದ್ರಿ ಆಂಜನೇಯನ ಜನ್ಮಸ್ಥಳ ಕುರಿತು ವಿಧಾನ ಪರಿಷತ್ ಸದಸ್ಯರಾದ ಶಶಿಲ ನಮೋಶಿ ಹಾಗೂ ಪಿ.ಎಚ್. ಪೂಜಾರ ಸಹ ಶೂನ್ಯ ವೇಳೆಯಲ್ಲಿ ಚರ್ಚಿಸಲು ಪ್ರಶ್ನೆ ಹಾಕಿದ್ದಾರೆ. ಸಂಸದ ಸಂಗಣ್ಣ ಕರಡಿ ಸಹ ಜಿಲ್ಲೆಯ ಇತಿಹಾಸ ಸಂಶೋಧಕರ ಸಭೆಯ ನಡೆಸಿ ಅಧಿಕೃತ ಮಾಹಿತಿಯನ್ನು ನೀಡಿ, ಮುಖ್ಯಮಂತ್ರಿಗಳಿಂದ ಘೋಷಣೆ ಮಾಡಿಸಲು ವರದಿ ತಯಾರಿಸುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications