ಬಿಜೆಪಿಯಲ್ಲಿ ಮೂಲೆಗುಂಪಾದ ಅಸ್ನೋಟಿಕರ್ ಸವಾರಿ ಯಾವ ಪಕ್ಷದತ್ತ
ಕಾರವಾರ, ಜನವರಿ 04 : ಮಾಜಿ ಸಚಿವ ಆನಂದ ಅಸ್ನೋಟಿಕರ್ ಯಾವ ಪಕ್ಷ ಸೇರಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. 5 ವರ್ಷಗಳಿಂದ ಅವರು ರಾಜಕೀಯದಿಂದ ದೂರವುಳಿದಿದ್ದಾರೆ. ಕಾರವಾರ ಕ್ಷೇತ್ರದಿಂದ ಅವರು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಕಾರವಾರದಲ್ಲಿ ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಆನಂದ ಅಸ್ನೋಟಿಕರ್, 'ಭೇಟಿಯಾಗಲು ಸಮಯಾವಕಾಶ ಕೇಳಿದರೆ ಬಿಜೆಪಿ ನಾಯಕರು ಸ್ಪಂದಿಸುತ್ತಿಲ್ಲ. ಬಿಜೆಪಿಯಲ್ಲಿ 110 ಶಾಸಕರು ಇದ್ದಾಗ ಸರ್ಕಾರ ರಚನೆಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷವನ್ನು ಬೆಂಬಲಿಸಿದ್ದೆ. ಆದರೆ, ಪಕ್ಷ ನನ್ನನ್ನು ಮರೆತಿದೆ' ಎಂದು ದೂರಿದರು.
ಜೆಡಿಎಸ್ ಸೇರಲಿದ್ದಾರೆ ಆನಂದ್ ಅಸ್ನೋಟಿಕರ್
'ಆರ್.ವಿ.ದೇಶಪಾಂಡೆ ಅವರು ನಮ್ಮ ಕುಟುಂಬದ ಹಿತೈಷಿ. ಹಾಗೆಯೇ ಕುಮಾರಸ್ವಾಮಿ ಮತ್ತು ಮಧು ಬಂಗಾರಪ್ಪ ಅವರು ಸಂಪರ್ಕದಲ್ಲಿದ್ದಾರೆ. ಯಾವ ಪಕ್ಷ ಸೇರುವೆ ಎಂದು ಜನವರಿ 10ರೊಳಗೆ ಪ್ರಕಟಿಸುವೆ' ಎಂದು ಆನಂದ ಅಸ್ನೋಟಿಕರ್ ಹೇಳಿದರು.
ರಾಜಕೀಯಕ್ಕೆ ಮರಳಿದ್ದಾರೆ ಅಸ್ನೋಟಿಕರ್
ಈಗಾಗಲೇ ಮಧು ಬಂಗಾರಪ್ಪ ಮತ್ತು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನಾಯ್ಕ್ ಆನಂದ ಅಸ್ನೋಟಿಕರ್ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಅವರು ಯಾವ ಪಕ್ಷ ಸೇರಿದರೂ ಬೆಂಬಲಿಸುತ್ತೇವೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಕಳೆದ ಚುನಾವಣೆಯಲ್ಲಿ ಸೋತಿದ್ದರು
2013ರ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಿಂದ ಆನಂದ ಅಸ್ನೋಟಿಕರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 44,847 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ನಂತರ ರಾಜಕೀಯದಿಂದ ದೂರವಾಗಿದ್ದರು.
ಉದ್ಯಮದತ್ತ ವಾಲಿದ್ದರು
2013ರ ಚುನಾವಣೆಯಲ್ಲಿ ಸೋತ ಬಳಿಕ ಆನಂದ ಅಸ್ನೋಟಿಕರ್ ರಾಜಕೀಯದಿಂದ ದೂರವಾಗಿದ್ದರು. ಉದ್ಯಮದತ್ತ ವಾಲಿದ್ದರು, ಬಿಜೆಪಿಯ ಚಟುವಟಿಕೆಗಳಲ್ಲಿಯೂ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ.
ಅಭಿಮಾನಿಗಳ ಒತ್ತಾಯ
ಆನಂದ ಅಸ್ನೋಟಿಕರ್ ಅವರ ಅಭಿಮಾನಿಗಳು ಅವರ ಮನೆಗೆ ಮುತ್ತಿಗೆ ಹಾಕಿ ರಾಜಕೀಯಕ್ಕೆ ಬರಬೇಕು ಎಂದು ಒತ್ತಾಯಿಸಿದ್ದರು. 2017ರ ನವೆಂಬರ್ನಲ್ಲಿ ಅಭಿಮಾನಿಗಳ ಜೊತೆ ಅವರು ಸರಣಿ ಸಭೆ ನಡೆಸಿದ್ದರು.
ಕ್ಷೇತ್ರದ ಶಾಸಕರು ಯಾರು?
ಕಾರವಾರ ಕ್ಷೇತ್ರದ ಹಾಲಿ ಶಾಸಕರು ಸತೀಶ್ ಸೈಲ್ (ಪಕ್ಷೇತರ). 'ಕ್ಷೇತ್ರದಲ್ಲಿ 1600 ಕೋಟಿ ಕೆಲಸವಾಗಿದೆ ಎಂದು ಶಾಸಕರು ಹೇಳುತ್ತಾರೆ. ಆದರೆ, 150 ಕೋಟಿಯ ಕೆಲಸವೂ ಆಗಿಲ್ಲ' ಎಂದು ಅಸ್ನೋಟಿಕರ್ ವಾಗ್ದಾಳಿ ನಡೆಸಿದ್ದಾರೆ.
ಕ್ಷೇತ್ರದ ಫಲಿತಾಂಶ
ಕಳೆದ ಚುನಾವಣೆಯಲ್ಲಿ ಸತೀಶ್ ಸೈಲ್ 80,727 ಮತಗಳನ್ನು ಪಡೆದು ಕ್ಷೇತ್ರದಲ್ಲಿ ಗೆದಿದ್ದರು. ಆನಂದ ಅಸ್ನೋಟಿಕರ್ 44,847 (ಬಿಜೆಪಿ) ಮತ ಪಡೆದಿದ್ದರು. ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ರಮಾನಂದ ಬೊಮ್ಮಯ್ಯ ನಾಯಕ್ 12,756 ಮತ ಪಡೆದಿದ್ದರು. ಜೆಡಿಎಸ್ನ ಡಾ.ಸಂಜುನಾಯಕ್ 1,568 ಮತ ಪಡೆದಿದ್ದರು.