ಅಮೃತ್ ಭಾರತ್ ರೈಲ್ವೆ ನಿಲ್ದಾಣ; ಕರ್ನಾಟಕದ 8 ನಿಲ್ದಾಣ ಆಯ್ಕೆ, ಪಟ್ಟಿ
ಬೆಂಗಳೂರು, ಆಗಸ್ಟ್ 04; ಭಾರತೀಯ ರೈಲ್ವೆ ಸಚಿವಾಲಯ 'ಅಮೃತ್ ಭಾರತ್ ಸ್ಟೇಷನ್' ಎಂಬ ಹೆಸರಿನಲ್ಲಿ ರೈಲು ನಿಲ್ದಾಣಗಳ ಆಧುನೀಕರಣಕ್ಕಾಗಿ ಹೊಸ ಯೋಜನೆ ಘೋಷಣೆ ಮಾಡಿದೆ. ಬಜೆಟ್ನಲ್ಲಿ ಪ್ರಕಟಿಸಿದ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 6ರಂದು ಯೋಜನೆಗೆ ಚಾಲನೆ ನೀಡಲಿದ್ದಾರೆ.
'ಅಮೃತ್ ಭಾರತ್ ಸ್ಟೇಷನ್' ಯೋಜನೆಯು ದೀರ್ಘಾವಧಿಯ ದೃಷ್ಟಿಯೊಂದಿಗೆ ರೈಲು ನಿಲ್ದಾಣಗಳ ಅಭಿವೃದ್ಧಿಯನ್ನು ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಈ ಯೋಜನೆಯಡಿಯಲ್ಲಿ ದೇಶದಾದ್ಯಂತ 508 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ.

ಈ ಯೋಜನೆಗೆ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ 6 ಮತ್ತು ಮೈಸೂರು ವಿಭಾಗದ 2 ನಿಲ್ದಾಣಗಳು ಆಯ್ಕೆಯಾಗಿವೆ. ಹುಬ್ಬಳ್ಳಿ ವಿಭಾಗದಲ್ಲಿ ಅಳ್ಳಾವರ, ಘಟಪ್ರಭಾ, ಗೋಕಾಕ್ ರೋಡ್, ಗದಗ, ಕೊಪ್ಪಳ ಮತ್ತು ಬಳ್ಳಾರಿ ಹಾಗೂ ಮೈಸೂರು ವಿಭಾಗದಲ್ಲಿ ಅರಸೀಕೆರೆ ಮತ್ತು ಹರಿಹರ ರೈಲು ನಿಲ್ದಾಣ ಅಭಿವೃದ್ಧಿಯಾಗಲಿದೆ.
ನಿಲ್ದಾಣದ ಅಭಿವೃದ್ಧಿ ವೆಚ್ಚ; ಯಾವ ನಿಲ್ದಾಣಗಳನ್ನು ಎಷ್ಟು ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಹುಬ್ಬಳ್ಳಿ ವಿಭಾಗದಲ್ಲಿ ಅಳ್ಳಾವರ ನಿಲ್ದಾಣ 17.2 ಕೋಟಿ, ಘಟಪ್ರಭಾ ನಿಲ್ದಾಣ 18.02 ಕೋಟಿ, ಗೋಕಾಕ್ ರೋಡ್ 17 ಕೋಟಿ, ಗದಗ 23.2 ಕೋಟಿ, ಕೊಪ್ಪಳ 21.1 ಕೋಟಿ ಮತ್ತು ಬಳ್ಳಾರಿ ನಿಲ್ದಾಣವನ್ನು 16.7 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಅರಸೀಕೆರೆ ನಿಲ್ದಾಣವನ್ನು 34.1 ಕೋಟಿ ಮತ್ತು ಹರಿಹರ ರೈಲು ನಿಲ್ದಾಣ 25.2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಈ ಯೋಜನೆಯಡಿ ಕರ್ನಾಟಕದಲ್ಲಿ 55 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಯೋಜಿಸಲಾಗಿದೆ.
ಇನ್ನು ಕೇಂದ್ರ ಸರ್ಕಾರ 2023ರ ಬಜೆಟ್ನಲ್ಲಿ ಯೋಜನೆಯಡಿಯಲ್ಲಿ ದೇಶದಾದ್ಯಂತ 1,275 ನಿಲ್ದಾಣಗಳನ್ನು ಪುನರಾಭಿವೃದ್ಧಿಗೊಳಿಸಲಾಗುವುದು ಎಂದು ಘೋಷಣೆ ಮಾಡಿತ್ತು. 'ಅಮೃತ್ ಭಾರತ್ ನಿಲ್ದಾಣ' ಯೋಜನೆಯಡಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ರೈಲ್ವೆ ನಿಲ್ದಾಣದ ನಿರಂತರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ.
ರೈಲು ನಿಲ್ದಾಣದ ಪ್ರವೇಶ ದ್ವಾರ, ಸಂಚಾರ ಪ್ರದೇಶ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಶೌಚಾಲಯ, ದಿವ್ಯಾಂಗ ಪ್ರಯಾಣಿಕರಿಗೆ ಅನುಕೂಲವಾಗುವ ಲಿಫ್ಟ್ ಮತ್ತು ಎಸ್ಕಲೇಟರ್, ನಿಲ್ದಾಣದ ಸ್ವಚ್ಛತೆ, ಉಚಿತ ವೈ-ಫೈ, ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು 'ಒಂದು ನಿಲ್ದಾಣ ಒಂದು ಉತ್ಪನ್ನ' ಮಳಿಗೆ ಮೂಲಕ ಪ್ರಯಾಣಿಕರನ್ನು ತಲುಪುವ ವ್ಯವಸ್ಥೆ, ಎಕ್ಸಿಕ್ಯೂಟಿವ್ ಲೌಂಜ್, ರಿಟೈಲ್ ಮಳಿಗೆಗಳಿಗೆ ಸ್ಥಳ, ನಿಲ್ದಾಣದ ವಿನ್ಯಾಸ ಸೇರಿದಂತೆ ಅನೇಕ ಸೌಕರ್ಯಗಳನ್ನು ಒದಗಿಸಲಾಗುತ್ತದೆ.
ಯೋಜನೆಯಡಿ ನಿಲ್ದಾಣದ ಕಟ್ಟಡವನ್ನು ಆಧುನಿಕ ವಾಸ್ತುವಿನ್ಯಾಸದೊಂದಿಗೆ ಸುಧಾರಣೆ ಮಾಡಲಾಗುತ್ತದೆ. ನಿಲ್ದಾಣದ ಎರಡೂ ಬದಿಗಳನ್ನು ನಗರದೊಂದಿಗೆ ಸಂಪರ್ಕಿಸುವ ವ್ಯವಸ್ಥೆ, ಸುಸ್ಥಿರ ಮತ್ತು ಪರಿಸರಸ್ನೇಹಿ ಅಭಿವೃದ್ಧಿ, ಜೆಲ್ಲಿಕಲ್ಲು ರಹಿತ ಟ್ರ್ಯಾಕ್ಗಳ ನಿರ್ಮಾಣ, ನಿಲ್ದಾಣಗಳನ್ನು ನಗರ ಕೇಂದ್ರಗಳನ್ನಾಗಿ (ಸಿಟಿ ಸೆಂಟರ್) ರೂಪಿಸುವ ಗುರಿಯೂ ಇದೆ.
ಈ ಯೋಜನೆಯಡಿ ರೈಲು ನಿಲ್ದಾಣವನ್ನು ಹೇಗೆ ಅಭಿವೃದ್ಧಿಗೊಳಿಸಬಹುದು ಎಂದು ಜನರು ಸಹ ಸಲಹೆ ಕೊಡಬಹುದು. ಭಾರತೀಯ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗಾಗಿ ನಾಗರಿಕರಿಂದಲೂ ಸಲಹೆಗಳನ್ನು ಆಹ್ವಾನಿಸಿದೆ. ಆಸಕ್ತರು ವೆಬ್ಸೈಟ್ ಗೆ ಭೇಟಿ ನೀಡಿ ತಮ್ಮ ಅಭಿಪ್ರಾಯ ನೀಡಬಹುದಾಗಿದೆ.
https://indianrailways.gov.in/railwayboard/FeedBackForm/index.jsp
ಈ ಯೋಜನೆಯು ರೈಲು ನಿಲ್ದಾಣಗಳ ಕನಿಷ್ಠ ಅಗತ್ಯ ಸೌಕರ್ಯಗಳು ಸೇರಿದಂತೆ ವಿವಿಧ ಸೌಲಭ್ಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಹೊಸ ಸೌಕರ್ಯಗಳ ಪರಿಚಯದ ಜೊತೆ ಅಸ್ತಿತ್ವದಲ್ಲಿರುವ ಸೌಕರ್ಯಗಳ ಉನ್ನತೀಕರಣವನ್ನು ಸಹ ಮಾಡಲಾಗುತ್ತದೆ. ಹಂತ-ಹಂತವಾಗಿ ಮಾಸ್ಟರ್ ಪ್ಲ್ಯಾನ್ನ ಅನುಷ್ಠಾನಗೊಳಿಸುವ ಮೂಲಕ ನಿಲ್ದಾಣವನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿ ಮಾಡಲಾಗುತ್ತದೆ.












Click it and Unblock the Notifications