ಕರ್ನಾಟಕ ಲಾಕ್ ಡೌನ್ ಸಂದರ್ಭದಲ್ಲಿ ಬಾಲ್ಯವಿವಾಹಗಳೇ ಹೆಚ್ಚು!
ಬೆಂಗಳೂರು, ಆಗಸ್ಟ್.28: ದೇಶಾದ್ಯಂತ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಆತಂಕ ಸೃಷ್ಟಿಸುತ್ತಿದ್ದರೆ, ಕರ್ನಾಟಕದಲ್ಲಿ ಲಾಕ್ ಡೌನ್ ಮತ್ತು ಮಹಾಮಾರಿ ಭೀತಿ ನಡುವೆ ಬಾಲ್ಯವಿವಾಹಗಳೇ ಹೆಚ್ಚಾಗಿರುವ ವಿಚಾರ ಇದೀಗ ಬಯಲಾಗಿದೆ.
Recommended Video
ಕಳೆದ ಏಪ್ರಿಲ್, ಮೇ, ಜೂನ್ ಮತ್ತು ಜುಲೈ ತಿಂಗಳಿನಲ್ಲೇ ಅತಿಹೆಚ್ಚು ಬಾಲ್ಯವಿವಾಹಗಳು ನಡೆದಿರುವ ಬಗ್ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಮಾಹಿತಿ ನೀಡಿದೆ. ಕಳೆದ ವರ್ಷ 12 ತಿಂಗಳಿನಲ್ಲಿ 156 ಬಾಲ್ಯವಿವಾಹ ಪ್ರಕರಣಗಳು ಪತ್ತೆಯಾಗಿದ್ದರೆ, ಈ ವರ್ಷ ಕೇವಲ ನಾಲ್ಕೇ ತಿಂಗಳಿನಲ್ಲಿ 107 ಬಾಲ್ಯವಿವಾಹ ಪ್ರಕರಣಗಳು ಪತ್ತೆಯಾಗಿವೆ.
ಮೈಸೂರಿನಲ್ಲಿ ಇನ್ನು ಜೀವಂತವಿದೆ ಬಾಲ್ಯ ವಿವಾಹ: ಪ್ರಕರಣ ದಾಖಲು
ರಾಜ್ಯಾದ್ಯಂತ ಆಡಳಿತ ಮಂಡಳಿ ಮತ್ತು ಸರ್ಕಾರಿ ಅಧಿಕಾರಿಗಳು ಕೊವಿಡ್-19 ವಿರುದ್ಧ ಹೋರಾಡುವಲ್ಲಿ ನಿರತರಾಗಿದ್ದರು. ಮಹಾಮಾರಿ ಕಡಿವಾಣಕ್ಕೆ ಅಧಿಕಾರಿಗಳು ಶ್ರಮಿಸುತ್ತಿದ್ದರೆ ಪೋಷಕರು ಇದೇ ಸಂದರ್ಭವನ್ನು ಬಳಸಿಕೊಂಡು ತಮ್ಮ ಮಕ್ಕಳಿಗೆ ಮದುವೆ ಮಾಡಲು ಮುಂದಾಗಿದ್ದರು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಚೇರ್ಮನ್ ಸೆಬಾಸ್ಟಿಯನ್ ಆಂಟೋನಿ ತಿಳಿಸಿದ್ದಾರೆ.
ರಾಜ್ಯ ಲಾಕ್ ಡೌನ್ ಸಂದರ್ಭದಲ್ಲೇ ಬಾಲ್ಯವಿವಾಹ
ಕರ್ನಾಟಕ ಲಾಕ್ ಡೌನ್ ಸಂದರ್ಭವೇ ತಮ್ಮ ಮಕ್ಕಳ ಮದುವೆಗೆ ಸೂಕ್ತ ಸಮಯ ಎಂದು ಪೋಷಕರು ಭಾವಿಸಿದ್ದರು. ಅಧಿಕಾರಿಗಳೆಲ್ಲ ಕೊವಿಡ್-19 ನಿಯಂತ್ರಣದ ವಿರುದ್ಧ ಹೋರಾಡುತ್ತಿದ್ದ ಸಂದರ್ಭದಲ್ಲಿ ಬಾಲ್ಯವಿವಾಹಗಳ ಮೇಲೆ ಹೆಚ್ಚಾಗಿ ಗಮನ ಹರಿಸುವುದಿಲ್ಲ. ಇದನ್ನೇ ಬಳಸಿಕೊಂಡು ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯವಿವಾಹ ಮಾಡಿದ ಪ್ರಕರಣಗಳು ಹೆಚ್ಚಾಗಿವೆ ಎಂದು ಅವರು ತಿಳಿಸಿದ್ದಾರೆ.
ಈ ಜಿಲ್ಲೆಗಳಲ್ಲೇ ಅತಿಹೆಚ್ಚು ಬಾಲ್ಯವಿವಾಹ ಪ್ರಕರಣ
ಕರ್ನಾಟಕದಲ್ಲಿ ಲಾಕ್ ಡೌನ್ ನಡುವೆಯೂ ಅತಿಹೆಚ್ಚು ಬಾಲ್ಯವಿವಾಹಗಳು ನಡೆದಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಬಳ್ಳಾರಿ, ಮೈಸೂರು, ಬಾಗಲಕೋಟೆ, ಬೆಳಗಾವಿ, ಧಾರವಾಡ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿವೆ.
ಬಾಲ್ಯವಿವಾಹ ತಡೆಯಲು 181 ಸಹಾಯವಾಣಿಗೆ ಕರೆ ಮಾಡಿ
ಕಳೆದ ವರ್ಷದ ಬಾಲ್ಯವಿವಾಹ ಪ್ರಕರಣಗಳನ್ನು ಈ ವರ್ಷಕ್ಕೆ ತಾಳೆಹಾಕಿ ನೋಡಿದಾಗ ಬಹುತೇಕ ಎರಡು ಪಟ್ಟು ಪ್ರಕರಣಗಳು ಹೆಚ್ಚಾಗಿವೆ. ಬಾಲ್ಯವಿವಾಹಕ್ಕೆ ಕಡಿವಾಣ ಹಾಕಲು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 181 ಸಹಾಯವಾಣಿಯನ್ನು ಆರಂಭಿಸಲಾಗಿದೆ. ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಕ್ಷಣ ಈ ಸಹಾಯವಾಣಿಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ್ ತಿಳಿಸಿದ್ದಾರೆ.
ಲಾಕ್ ಡೌನ್ ನಿಂದ ಕಡಿಮೆ ಖರ್ಚಿನಲ್ಲಿಯೇ ಮದುವೆ
ಕೊರೊನಾವೈರಸ್ ಭೀತಿ ಮತ್ತು ಲಾಕ್ ಡೌನ್ ನಿಂದಾಗಿ ಕಡಿಮೆ ಖರ್ಚಿನಲ್ಲಿಯೇ ಮಕ್ಕಳ ಮದುವೆ ಮಾಡುವುದಕ್ಕೆ ಪೋಷಕರು ಆಲೋಚಿಸುತ್ತಿದ್ದಾರೆ. ಸಾಮಾನ್ಯವಾಗಿ ಹೆಣ್ಣಿನ ಕಡೆಯವರಿಗೆ ಮದುವೆಯ ಖರ್ಚು ಬಲು ದುಬಾರಿ ಎನಿಸುತ್ತದೆ. ಮಧ್ಯಮ ಮತ್ತು ಬಡವರ್ಗದ ಜನರು ಮಕ್ಕಳ ಮದುವೆಗಾಗಿ ಸಾಲ ಮಾಡಿಕೊಳ್ಳುವಂತಾ ಸ್ಥಿತಿಯಿದೆ. ಇದರ ನಡುವೆ ಕಡಿಮೆ ಖರ್ಚಿನಲ್ಲಿ ಸರಳವಾಗಿ ಮದುವೆ ಮಾಡುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಇದನ್ನೇ ಅವಕಾಶವಾಗಿ ತೆಗೆದುಕೊಂಡ ಹಲವರು 18 ವರ್ಷಕ್ಕಿಂತ ಚಿಕ್ಕವಯಸ್ಸಿನ ಮಕ್ಕಳಿಗೂ ಮದುವೆ ಮಾಡಿರುವುದು ಬೆಳಕಿಗೆ ಬಂದಿದೆ. ಅದಾಗ್ಯೂ ಸೀಮಿತ ಸಿಬ್ಬಂದಿಯನ್ನು ಬಳಸಿಕೊಂಡು ದೂರುಗಳ ಆಧಾರದಲ್ಲಿ ಹಲವು ಬಾಲ್ಯವಿವಾಹಗಳನ್ನು ತಡೆಯುವಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಯಶಸ್ವಿಯಾಗಿದೆ ಎಂದು ಚೇರ್ಮನ್ ಸೆಬಾಸ್ಟಿಯನ್ ಆಂಟೋನಿ ತಿಳಿಸಿದ್ದಾರೆ.