ಕೊರೊನಾಗೆ ಹಿಂದಿನ 'ಮರ್ಯಾದೆ' ಈಗಿಲ್ಲ: ಜನರ ಈ ಡೋಂಟ್ ಕೇರ್ ಗೆ 6 ಕಾರಣಗಳು
ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ದಿನವೊಂದಕ್ಕೆ ನೂರು, ಐನೂರಲ್ಲಿದ್ದ ಹೊಸ ಸೋಂಕಿತರ ಸಂಖ್ಯೆ, ಸಾವಿರ ದಾಟಿ ಕೆಲವು ತಿಂಗಳುಗಳೇ ಆಗಿ ಹೋದವು. ಇನ್ನು, ಕರ್ನಾಟಕದಲ್ಲೂ ಅದೇ ಕಥೆ.
Recommended Video
ಮೊದಮೊದಲು ಕೊರೊನಾ ವಿಶ್ವವ್ಯಾಪಿ ಪಟ್ಟಿಯಲ್ಲಿ ಎಲ್ಲೋ ಮೂಲೆಯಲ್ಲಿದ್ದ ಭಾರತ, ಈಗ ಎರಡನೇ ಸ್ಥಾನಕ್ಕೆ ಬಂದು ಕೂತಿದೆ. ಬ್ರೆಜಿಲ್ ಅನ್ನು ಕೆಳಕ್ಕೆ ತಳ್ಳಿ, ಈಗ ಅಮೆರಿಕಾದ ಜೊತೆಗೆ ಮೊದಲ ಸ್ಥಾನಕ್ಕೆ ಪೈಪೋಟಿಯಲ್ಲಿದೆ.
Infographics: 70 ಲಕ್ಷ ಕೊವಿಡ್ ಸಕ್ರಿಯ ಕೇಸ್, 2 ಕೋಟಿ ಮಂದಿ ಚೇತರಿಕೆ
ಇದೇ ವೇಗದಲ್ಲಿ ಸಾಗಿದರೆ, ಮೊದಲ ಸ್ಥಾನದಲ್ಲಿ ಭಾರತ ಕಾಣಿಸಿಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ. ಅದಕ್ಕೆ ಕೇಂದ್ರ ಮತ್ತು ರಾಜ್ಯ ಆರೋಗ್ಯ ಇಲಾಖೆ ನೀಡುವ ಕಾರಣ, ತಪಾಸಣೆ ವೇಗವನ್ನು ಪಡೆದುಕೊಂಡಿರುವುದು ಎಂದು. ಅಲ್ಲಲ್ಲಿ, ಮನೆಮನೆಗೆ ಆರೋಗ್ಯ ಇಲಾಖೆಯವರು/ಆಶಾ ಕಾರ್ಯಕರ್ತೆಯರು ತಪಾಸಣೆಗೆ ಬರುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ ಕೂಡಾ.
ಕರ್ನಾಟಕದಲ್ಲಿ ಭಾನುವಾರ 9319 ಮಂದಿಗೆ ಕೊವಿಡ್-19 ಪಾಸಿಟಿವ್
ಆದರೆ, ಮಾರ್ಚ್/ಏಪ್ರಿಲ್ ತಿಂಗಳಲ್ಲಿ ಕೊರೊನಾ ಮೇಲೆ ಜನರಿಗಿದ್ದ ಭಯ ಅಥವಾ ಹುಟ್ಟಿಸಲಾದ ಭಯ, ಕಾಲಕ್ರಮೇಣ ಕ್ಷೀಣಿಸುತ್ತಾ ಸಾಗುತ್ತಿದೆ ಎನ್ನುವುದಕ್ಕೆ ದೈನಂದಿನ ಜೀವನ, ದಿನೇದಿನೇ ಮಾಮೂಲು ಸ್ಥಿತಿಗೆ ಬರಲಾರಂಭಿಸಿರುವುದು. ಇದಕ್ಕೆ ಕೊಡಬಹುದಾದ ಆರು ಕಾರಣಗಳು ಇಂತಿದೆ:
ಮೊದಲ ಲಾಕ್ ಡೌನ್ ಅನ್ನು ಪ್ರಧಾನಿಯವರೇ ಉದ್ದೇಶಿಸಿ ಘೋಷಿಸಿದ್ದರು
1. ಕೊರೊನಾ ಮೊದಲ ಲಾಕ್ ಡೌನ್ ಅನ್ನು ಖುದ್ದು ಪ್ರಧಾನಿಯವರೇ ದೇಶದ ಜನರನ್ನು ಉದ್ದೇಶಿಸಿ ಘೋಷಿಸಿದ್ದರು. ಇದಾದ ಮೇಲೂ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಇದಾದ ನಂತರ, ಕೇಂದ್ರ ಅನ್ ಲಾಕ್ ಆರಂಭಿಸಿತು. "ಮಾಸ್ಕ್ ಧರಿಸಿ, ಸಾಮಾನ್ಯ ಅಂತರ ಕಾಪಾಡಿಕೊಂಡು, ಕೊರೊನಾ ಜೊತೆ ಬದುಕುವುದನ್ನು ಕಲಿಯಬೇಕು, ಮಾಮೂಲಿ ಜೀವನ ಆರಂಭಿಸಬೇಕು" ಎಂದು ಪ್ರಧಾನಿಗಳು ಹೇಳುವ ಮೂಲಕ, ಈ ವೈರಸಿನ ಉಪಟಳವನ್ನು ಇನ್ನಷ್ಟು ದಿನ ತಪ್ಪಿಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದರು. ಇದು ಆರ್ಥಿಕ ಚಟುವಟಿಕೆ ಆರಂಭವಾಗಲು ಬುನಾದಿಯಾಯಿತು ಎಂದು ಹೇಳಬಹುದು.
ಯುಗಾದಿಯ ಮುನ್ನಾ ದಿನದಂದು ಲಾಕ್ ಡೌನ್ ಘೋಷಣೆಯಾಯಿತು
2. ಯುಗಾದಿಯ ಮುನ್ನಾ ದಿನದಂದು (ಮಾರ್ಚ್ 24) ಲಾಕ್ ಡೌನ್ ಘೋಷಣೆಯಾಯಿತು. ಬಹುತೇಕ ಇಂದಿಗೆ ಬರೋಬ್ಬರಿ 160 ದಿನಗಳ ಮೇಲಾಗಿ ಹೋದವು. ಕೆಲವೊಂದು ಚಟುವಟಿಕೆಗಳಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಹಲವರ ಜೀವನ ಬೀದಿಗೆ ಬಂತು, ಜನ ಗುಳೇ ಹೋದರು. ಆದರೆ, ಎಷ್ಟು ದಿನಾಂತಾ ಮನೆಯೊಳಗೆ ಇರಲು ಸಾಧ್ಯ, ಹೊಟ್ಟೆಪಾಡಿಗೆ ಮನೆಯಲ್ಲೇ ಕೂರಲು ಸಾಧ್ಯವೇ ಎಂದು ಜನರು ಮತ್ತೆ ತಮ್ಮ ದಾರಿಯತ್ತ ಮುಖ ಮಾಡುತ್ತಿರುವುದು ಬಹುತೇಕ ಕಾಣಬಹುದಾಗಿದೆ. ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಜನ ಬಂದಿಳಿಯುತ್ತಿರುವುದು ಇದಕ್ಕೆ ಕೊಡಬಹುದಾದ ಉದಾಹರಣೆ.
ಕೊರೊನಾ ವೈರಸ್ ಗೆ ಮಾಧ್ಯಮಗಳು ಕೊಡುತ್ತಿದ್ದ ರಂಗುರಂಗಿನ ಪ್ರಚಾರ
3. ಕೊರೊನಾ ಆರಂಭದಿಂದ, ಇಂದಿನಿಂದ ಒಂದು ತಿಂಗಳಿನ ಹಿಂದಿನವರೆಗೆ, ಕೊರೊನಾ ವೈರಸ್ ಗೆ ಮಾಧ್ಯಮಗಳು ಕೊಡುತ್ತಿದ್ದ ರಂಗುರಂಗಿನ ಪ್ರಚಾರ, ಜನರು ಭಯ ಬೀಳಲು ಕಾರಣವಾಗಿರುವ ಅಂಶ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಜನರು ಮಾಧ್ಯಮದವರ ಸುದ್ದಿಗೆ ಭಯ ಪಡುವುದನ್ನು ಬಿಟ್ಟರೋ ಅಥವಾ ಮಿಡಿಯಾದವರು ಬೇರೆ ವಿಚಾರದತ್ತ ಉರುಳಿದರೋ, ಒಟ್ಟಿನಲ್ಲಿ ಜನ ನಿರ್ಭೀತಿಯತ್ತ ಸಾಗುತ್ತಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಡುಗಡೆಯಾಗುತ್ತಿರುವವರ ಸಂಖ್ಯೆ
4. ಎಲ್ಲದಕ್ಕಿಂತ ಹೆಚ್ಚಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಡುಗಡೆಯಾಗುತ್ತಿರುವವರ ಸಂಖ್ಯೆ. ಉದಾಹರಣೆಗೆ ಶನಿವಾರ (ಸೆ 5) ಒಂದೇ ದಿನ ದಾಖಲೆಯ 9,102 ಸೋಂಕಿತರು ಬಿಡುಗಡೆ ಹೊಂದಿರುವುದು. ಆ ಮೂಲಕ ರಾಜ್ಯವೊಂದರಲ್ಲೇ ಬಿಡುಗಡೆಯಾದವರ ಸಂಖ್ಯೆ 2.8 ಲಕ್ಷದ ಆಸುಪಾಸಿನಲ್ಲಿದೆ. ಜೊತೆಗೆ, ಚೇತರಿಕೆ ಪ್ರಮಾಣ ಶೇ. 72.8ರಷ್ಟಿದೆ. ಇದು, ಜನರಲ್ಲಿ ಪಾಸಿಟೀವ್ ಎನರ್ಜಿ ತುಂಬುವಲ್ಲಿ ಸಹಾಯಕವಾಗಿದೆ.
ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿಕೊಳ್ಳಿ ಎಂದು ವೈದ್ಯರು ಹೇಳುತ್ತಿರುವುದು
5. ಕೊರೊನಾದ ಆರಂಭಿಕ ಹಾವಳಿಯ ನಂತರ, ವೈದ್ಯಲೋಕ ಈ ವಿಚಾರದಲ್ಲಿ ಪಾಸಿಟೀವ್/ನೆಗೆಟೀವ್ ಎರಡನ್ನೂ ಜನರಿಗೆ ತುಂಬುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ವೈದ್ಯರು ಹಲವು ವೇದಿಕೆಯ ಮೂಲಕ ಜನಜಾಗೃತಿ ಮಾಡಿಸುತ್ತಿದ್ದಾರೆ. ಇದೊಂದು ಸಾಮಾನ್ಯ ವೈರಸ್, ಭಯ ಪಡುವ ಅವಶ್ಯಕತೆಯಿಲ್ಲ. ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿಕೊಳ್ಳಿ ಎಂದು ಜನರಿಗೆ ಹೇಳುತ್ತಿರುವುದು, ನಿಧಾನವಾಗಿ, ಕೊರೊನಾ ಬಗ್ಗೆ ಜನರು ಡೋಂಟ್ ಕೇರ್ ಅನ್ನಲು ಕಾರಣವಾಗಿದೆ.
ಬೆಡ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಡದೇ ಇರುವುದು
6. ಜನರು ಹಿಂದಿನಂತೆ ಭಯ ಪಡದೇ ಇರಲು ಇನ್ನೊಂದು ಕಾರಣವೆಂದರೆ, ಬೆಡ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಡದೇ ಇರುವುದು. ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ಎಡ್ಮಿಟ್ ಮಾಡಿಕೊಳ್ಳುತ್ತಿಲ್ಲ ಎನ್ನುವ ಸುದ್ದಿ, ಜನರನ್ನು ಭಯಭೀತರನ್ನಾಗಿಸಿರುವುದಂತೂ ಹೌದು. ಸರಕಾರದ ಸತತ ಎಚ್ಚರಿಕೆಯ ನಂತರ, ಕೆಲವು ಅಪವಾದಗಳನ್ನು ಹೊರತು ಪಡಿಸಿದರೆ, ಬೆಡ್ ಸಮಸ್ಯೆ ಸದ್ಯಕ್ಕೆ ಕಾಡುತ್ತಿಲ್ಲ. ಹಾಗಾಗಿ, ಕೊರೊನಾಗೆ ಹಿಂದಿನ ಮರ್ಯಾದೆ ಸಿಗದೇ ಇರುವುದಕ್ಕೆ ಇದೂ ಒಂದು ಕಾರಣವಾಗಿದೆ.