‘ರೆಬಲ್ ಸ್ಟಾರ್’ಗೆ ಅಖಿಲ ಭಾರತ ಅಂಬರೀಶ್ ಅಭಿಮಾನ ಸಂಘ ಸ್ಥಾಪನೆ
ಬೆಂಗಳೂರು, ನವೆಂಬರ್ 25 : ಕರುನಾಡ ಕರ್ಣ, ಮಂಡ್ಯದ ಗಂಡು, ರೆಬಲ್ ಸ್ಟಾರ್ ಅಂಬರೀಶ್ ಇವತ್ತು ನಮ್ಮನ್ನಗಲಿದ್ದಾರೆ. ಅವರ ಅಗಲಿಕೆಯಿಂದ ಅಭಿಮಾನಿ ವರ್ಗ ಕಣ್ಣೀರಿಡುತ್ತಿದೆ. ಬಹುಶಃ ಇಂತಹವೊಂದು ದುಃಖದ ಕ್ಷಣಗಳು ಇಷ್ಟು ಬೇಗ ಬರುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಆದರೆ ವಿಧಿಯಾಟವೇ ಬೇರೆಯಾಗಿದೆ. ಅಂಬರೀಶ್ ನಮ್ಮೊಂದಿಗಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಅಭಿಮಾನಿಗಳಿದ್ದಾರೆ.
ಹಾಗೆನೋಡಿದರೆ ಅಂಬರೀಶ್ ಅವರಿಗೆ ರಾಜ್ಯ ಮಾತ್ರವಲ್ಲ ದೇಶ, ವಿದೇಶಗಳಲ್ಲಿಯೂ ಅಭಿಮಾನಿಗಳು, ಗೆಳೆಯರು ದೊಡ್ಡ ಪ್ರಮಾಣದಲ್ಲಿದ್ದರು ಎಂಬುದಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿರಿಸಲಾಗಿರುವ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಹರಿದು ಬರುತ್ತಿರುವ ಅಭಿಮಾನಿಗಳ ದಂಡೇ ಸಾಕ್ಷಿಯಾಗಿದೆ.
LIVE: ಅಂಬರೀಶ್ ನಿಧನದಿಂದ ನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆ
ಇವತ್ತು ಅಂಬರೀಶ್ ಅವರಿಗೆ ಸಿನಿಮಾ ಕ್ಷೇತ್ರ ಮಾತ್ರವಲ್ಲ ರಾಜಕೀಯ ಕ್ಷೇತ್ರದಲ್ಲಿಯೂ ದೊಡ್ಡ ಮಟ್ಟದ ಅಭಿಮಾನಿಗಳು, ಗೆಳೆಯರು ಇದ್ದಾರೆ. ರಾಜಕೀಯವಾಗಿ ಅವರು ಸಂಸದರಾಗಿ, ಕೇಂದ್ರ ಸಚಿವರಾಗಿ, ಶಾಸಕರಾಗಿ ಸಚಿವರಾಗಿ ಎಲ್ಲ ರೀತಿಯ ಕಾರ್ಯ ನಿರ್ವಹಣೆ ಮಾಡಿದ್ದರೂ ಅವರು ರಾಜಕೀಯಕ್ಕೆ ಸಂಪೂರ್ಣ ಜೋತು ಬೀಳಲಿಲ್ಲ.
ಬಹುಶಃ ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಂಡು ಅಲ್ಲಿ ಬೆಳೆಯುತ್ತೇನೆ ಎಂದೇನಾದರೂ ಹೊರಟಿದ್ದರೆ ಅವರು ಮುಖ್ಯಮಂತ್ರಿಯೂ ಆಗಬಹುದಿತ್ತು. ಆದರೆ ಅವರು ಯಾವುದಕ್ಕೂ ಹಾತೊರೆಯಲಿಲ್ಲ. ಬಂದಿದ್ದನ್ನು ಅನುಭವಿಸಿದರಷ್ಟೆ. ಬಲವಂತದಿಂದ ಯಾವುದನ್ನೂ ಪಡೆಯಲು ಹೋಗಲೇ ಇಲ್ಲ.
ನೇರ ನಡೆ ನುಡಿಯ ವ್ಯಕ್ತಿತ್ವ ಅವರು ಅಭಿಮಾನಿಗಳನ್ನು ಮಾತನಾಡಿಸುತ್ತಿದ್ದ ರೀತಿಯೇ ವಿಭಿನ್ನ, ವಿಶಿಷ್ಟ ಅದು ಮೇಲ್ನೋಟಕ್ಕೆ ಕಠೋರ ಎಂಬಂತೆ ಕಾಣುತ್ತಿತ್ತಾದರೂ ಅದರೊಳಗೆ ಆತ್ಮೀಯತೆ ಯಿತ್ತು, ಮೆದುತನವಿತ್ತು. ಹೀಗಾಗಿ ಅಭಿಮಾನಿಗಳಿಗೆ ಅವರಿಂದ ಬಯ್ಯಿಸಿಕೊಳ್ಳುವುದೇ ಒಂದು ಖುಷಿಯ ವಿಚಾರವಾಗಿತ್ತು. ಇಂತಹದೊಂದು ವ್ಯಕ್ತಿತ್ವವನ್ನು ನಾವು ಬೇರೆ ಯಾರಲ್ಲೂ ನೋಡಲು ಸಾಧ್ಯವಿಲ್ಲ. ಇದೆಲ್ಲದರ ನಡುವೆ ಅಂಬರೀಶ್ ಅವರಿಗೊಬ್ಬ ಅಭಿಮಾನಿ ಮೈಸೂರಿನಲ್ಲಿದ್ದಾರೆ. ಅವರೇ ಬನ್ನೂರು ರಾಜು.
ಮಾಜಿ ಸಚಿವ ಎಂ.ಎಚ್.ಅಂಬರೀಶ್ ರಾಜಕೀಯ ಜೀವನದ ನೋಟ
ಕಥೆಗಾರ ಕವಿ, ವಿಮರ್ಶಕ, ನಾಟಕಕಾರ, ಅಂಕಣಕಾರ, ಸಾಹಿತಿ, ಪತ್ರಕರ್ತರಾಗಿರುವ ಬನ್ನೂರು ಕೆ. ರಾಜು ಅವರು ಮೊಟ್ಟ ಮೊದಲಿಗೆ ಅಖಿಲ ಭಾರತ ಅಂಬರೀಷ್ ಅಭಿಮಾನಿಗಳ ಸಂಘವನ್ನು ಸ್ಥಾಪಿಸಿ ಸ್ಥಾಪಕಾಧ್ಯಕ್ಷರಾಗಿದ್ದರು. 1985ರಲ್ಲಿ ಈ ಸಂಘವನ್ನು ಅವರು ಸ್ಥಾಪಿಸಿದ್ದರು. ಇದರ ಗೌರವಾಧ್ಯಕ್ಷರಾಗಿದ್ದರು ಸಾಹಿತಿ ದೆಜಗೌ ಎಂದರೆ ಅಚ್ಚರಿಯಾಗಬಹುದು ಆದರೆ ಇದು ಸತ್ಯ.
ಸದಾ ಅಂಬರೀಶ್ ಅವರ ನೆರಳಂತೆ ಇದ್ದ ಬನ್ನೂರು ರಾಜು ಅವರು ಶೂಟಿಂಗ್ಗೆ ಹೋಗುವಾಗಲೂ ಅವರೊಂದಿಗೆ ಹೋಗುತ್ತಿದ್ದರು. ಅವತ್ತಿನ ಕಾಲದಲ್ಲಿ ಎಲ್ಲ ನಟರಿಗೆ ರಾಜ್ಯ ಮಟ್ಟದ ಅಭಿಮಾನಿಗಳ ಸಂಘವಿದ್ದರೆ, ಅಂಬರೀಶ್ ಅವರಿಗೆ ಅಖಿಲ ಭಾರತ ಮಟ್ಟದಲ್ಲಿ ಸಂಘವನ್ನು ಸ್ಥಾಪಿಸಿ ಗಮನಸೆಳೆದಿದ್ದರು.
ಅನಾರೋಗ್ಯಕ್ಕೆ ಸೆಡ್ಡು: ಆಂಬ್ಯುಲೆನ್ಸ್ನಲ್ಲಿ ಹೋಗಿ ಸಿನಿಮಾ ನೋಡಿದ್ದ ಅಂಬರೀಶ್
ಇನ್ನು 1990ರ ದಶಕದಲ್ಲಿ ಅಂಬರೀಶ್ ಹೆಸರಿನಲ್ಲಿಯೇ ಸಿನಿಮಾಕ್ಕೆ ಸಂಬಂಧಿಸಿದ ಮಾಸಿಕ ಪತ್ರಿಕೆಯನ್ನು ಹೊರ ತಂದು ಅಂಬರೀಶ್ ಅವರಿಂದಲೇ ಮೈಸೂರಿನ ಪುರಭವನದಲ್ಲಿ ಬಿಡುಗಡೆಯನ್ನು ಮಾಡಿಸಿದ್ದರು. ಅವತ್ತಿನ ಆ ಸಮಾರಂಭಕ್ಕೆ ನಟ ಶಶಿಕುಮಾರ್, ಹಿರಿಯ ಸಾಹಿತಿ ದೇಜಗೌ ಸಾಕ್ಷಿಯಾಗಿದ್ದರು. ಸುಮಾರು ಐದು ವರ್ಷಗಳ ಕಾಲ ಅಂಬರೀಶ್ ಪತ್ರಿಕೆಯನ್ನು ನಡೆಸಿದ್ದು ಇತಿಹಾಸ.
ಅಂಬರೀಶ್ ಅಭಿಮಾನಿ ಸಂಘವನ್ನು ಬನ್ನೂರು ರಾಜು ಅವರು ಹುಟ್ಟು ಹಾಕಿ ಒಂದಷ್ಟು ವರ್ಷಗಳ ಕಾಲ ಅದರ ಅಧ್ಯಕ್ಷರಾಗಿ ಮುಂದುವರೆದು ಕೊಂಡು ಬಂದರಾದರೂ ಬಳಿಕ ಅದನ್ನು ಬೇರೆಯವರು ಮುಂದುವರೆಸಿಕೊಂಡು ಹೋದರು.
ಅಂಬರೀಶ್ ಅವರು ರಾಜಕೀಯಕ್ಕೆ ಕಾಲಿಟ್ಟ ಬಳಿಕ ಬನ್ನೂರು ರಾಜು ಅವರು ಅಂಬರೀಶ್ ಅವರ ಒಡನಾಟದಲ್ಲಿ ಇದ್ದರಾದರೂ ಎಲ್ಲೂ ಕಾಣಿಸಿಕೊಳ್ಳದೆ ಅವರನ್ನು ತಮ್ಮ ಮನದಾಳದಲ್ಲಿ ಪೂಜಿಸಿಕೊಂಡೇ ಬಂದರು. ಇವತ್ತಿಗೂ ಅವರಿಗೆ ಅಂಬರೀಶ್ ಅಂದರೆ ಎಲ್ಲಿಲ್ಲದ ಪ್ರೀತಿ, ವಿಶ್ವಾಸ ಅವರ ಅಗಲಿಕೆಯ ನೋವು ಕಾಡುತ್ತಲೇ ಇದೆ.
ಅಂಬರೀಶ್ ಅವರಿಗೆ ಮಂಗಳೂರಿನಲ್ಲಿ ಅಂಬರೀಶ್ ಮಹಿಳಾ ಅಭಿಮಾನಿಗಳ ಸಂಘ ಸ್ಥಾಪನೆಯಾಗಿತ್ತು ಎನ್ನುವುದೇ ಅವರಿಗಿದ್ದ ಜನಪ್ರಿಯತೆಗೆ ಸಾಕ್ಷಿಯಾಗಿದೆ.