ತಿಂಗಳ ಹಿಂದೆ ಶ್ರೀರಾಮುಲು ಬಗ್ಗೆ ಡಿ ಕೆ ಶಿವಕುಮಾರ್ ನುಡಿದ ಭವಿಷ್ಯ ನಿಜವಾಯಿತು
Recommended Video
ಬಿಜೆಪಿಯ ವರಿಷ್ಠರು ಪಕ್ಷ ಬಲವೃದ್ದನೆಗೆ ಯಾವ ಸಮಯದಲ್ಲಿ ಯಾವ ಹೆಜ್ಜೆ ಇಡಲಿದ್ದಾರೆ ಎನ್ನುವುದು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯ ಮುಖಂಡರ ಲೆಕ್ಕಾಚಾರಕ್ಕೂ ಮೀರಿ ನಡೆಯುತ್ತಿದೆ.
ಅದರಂತೆಯೇ, ಈಗ ಸೃಷ್ಟಿ ಮಾಡಲು ಹೊರಟಿರುವ ಉಪಮುಖ್ಯಮಂತ್ರಿ ಹುದ್ದೆ. ಯಡಿಯೂರಪ್ಪನವರೇ ಖಚಿತ ಪಡಿಸಿದಂತೆ, ಡಿಸಿಎಂ ಹುದ್ದೆ ಇರಲಿದೆ, ಆದರೆ ಅದು ಮೂರೋ, ನಾಲ್ಕೋ ಎನ್ನುವುದು ಅವರಿಗೇ ಗ್ಯಾರಂಟಿ ಇಲ್ಲದಿರುವುದು ಈಗಿನ ವಸ್ತುಸ್ಥಿತಿ.
ಡಿಸಿಎಂ ಹುದ್ದೆಗೆ ಕೇಳಿಬರುತ್ತಿರುವ ಹೆಸರುಗಳಲ್ಲಿ ಪಕ್ಷದ ಪ್ರಭಾವೀ ಮುಖಂಡ ಶ್ರೀರಾಮುಲು ಅವರ ಹೆಸರು ಇಲ್ಲ. ಈಗ ಹರಿದಾಡುತ್ತಿರುವ ಹೆಸರುಗಳೆಂದರೆ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಮತ್ತು ಡಾ. ಅಶ್ವಥ್ ನಾರಾಯಣ.
ಯಡಿಯೂರಪ್ಪನವರ ಸರಕಾರ ಆಧಿಕಾರಕ್ಕೆ ಬಂದಾಗ, ಶ್ರೀರಾಮುಲು ಅವರು ಡಿಸಿಎಂ ಆಗಬಹುದು ಎನ್ನುವ ಮಾತು ಚಾಲ್ತಿಯಲ್ಲಿತ್ತು. ಈಗ ಅವರ ಹೆಸರು ಇಲ್ಲದೇ ಇರುವುದು, ತಿಂಗಳ ಹಿಂದೆ ಡಿ ಕೆ ಶಿವಕುಮಾರ್ ಅವರು ಇದೇ ವಿಚಾರದ ಬಗ್ಗೆ ಮಾತನಾಡಿರುವುದಕ್ಕೂ ಒಂದಕ್ಕೊಂದು ತಾಳೆಯಾಗುತ್ತಿದೆ.

ಶ್ರೀರಾಮುಲುಗೆ, ಡಿ ಕೆ ಶಿವಕುಮಾರ್ ಪಕ್ಷಕ್ಕೆ ಸೇರುವಂತೆ ಆಹ್ವಾನ
ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಹಲವು ಶಾಸಕರು, ಕುಮಾರಸ್ವಾಮಿ ನೇತೃತ್ವದ ಸರಕಾರದಿಂದ ಹೊರ ನಡೆದ ನಂತರ, ವಿಶ್ವಾಸಮತದ ಯಾಚನೆಯ ವೇಳೆ, ಸದನದಲ್ಲೇ ಶ್ರೀರಾಮುಲುಗೆ, ಡಿ ಕೆ ಶಿವಕುಮಾರ್ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದರು. ಶ್ರೀರಾಮುಲು ಅವರ ಕೂತಿದ್ದ ಸ್ಥಳಕ್ಕೇ ಹೋಗಿ, ಡಿಕೆಶಿ, ಅವರ ಕೈ ಹಿಡಿದು ಮಾತನಾಡಿ, ಅವರಿಗೊಂದು ಆಫರ್ ನೀಡಿದ್ದರು.

ರಮೇಶ್ ಜಾರಕಿಹೊಳಿಯನ್ನು ಉಪಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ
"ರಮೇಶ್ ಜಾರಕಿಹೊಳಿಯನ್ನು ಉಪಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ. ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ನೀನು ಡಿಸಿಎಂ ಆಗುವುದಿಲ್ಲ. ನಮ್ಮ ಪಕ್ಷಕ್ಕೆ ಬಾ" ಎಂದು ಡಿ ಕೆ ಶಿವಕುಮಾರ್, ಶ್ರೀರಾಮುಲುಗೆ ಆಫರ್ ನೀಡಿದ್ದರು. ವಿಧಾನಸಭೆಯ ಭೋಜನ ವಿರಾಮದ ವೇಳೆ, ಈ ವಿದ್ಯಮಾನ ನಡೆದಿತ್ತು. ಡಿ ಕೆ ಶಿವಕುಮಾರ್ ಮತ್ತು ಶ್ರೀರಾಮುಲು ನಡುವಿನ ಮಾತುಕತೆ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.

ಏನ್ ಆಲೋಚನೆ ಮಾಡ್ಕೊಂಡು ಇದ್ದೀಯಾ, ನಮ್ಮ ಬಳಿ ಬಾ
ಭೋಜನ ವಿರಾಮದ ವೇಳೆ ಶ್ರೀರಾಮುಲು ತನ್ನ ಸೀಟಿನಲ್ಲಿ ಒಬ್ಬರೇ ಕೂತಿದ್ದರು. ಆಡಳಿತ ಪಕ್ಷದ ಸಾಲಿನಲ್ಲಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್ ಸಹಿತ ಜೆಡಿಎಸ್-ಕಾಂಗ್ರೆಸ್ ಮುಖಂಡರಿದ್ದರು. ಆ ವೇಳೆ, " ಏನ್ ಆಲೋಚನೆ ಮಾಡ್ಕೊಂಡು ಇದ್ದೀಯಾ, ನಮ್ಮ ಬಳಿ ಬಾ" ಎಂದು ಕುಮಾರಸ್ವಾಮಿ ಕೂಡಾ ನಗುನಗುತ್ತಾ ಹೇಳಿ, ಅವರಿಗೆ ವಿಷ್ ಮಾಡಿ ಹೋಗಿದ್ದರು.

ಅವರ ಸೀಟೇ ಅಲುಗಾಡುತ್ತಿದೆ. ಇನ್ನು, ಅವರೇನು ನನಗೆ ಆಫರ್ ನೀಡುವುದು.
ಡಿಕೆಶಿ ಮತ್ತು ಎಚ್ಡಿಕೆ ಆಫರ್ ಬಗ್ಗೆ ನಂತರ ಮಾತನಾಡಿದ ಶ್ರೀರಾಮುಲು, " ಅವರ ಸೀಟೇ ಅಲುಗಾಡುತ್ತಿದೆ. ಇನ್ನು, ಅವರೇನು ನನಗೆ ಆಫರ್ ನೀಡುವುದು. ಅಲ್ಲಿ ಗದ್ದಲವಿದ್ದರಿಂದ, ಅವರು ಏನು ಮಾತನಾಡಿದರು ಎಂದು ನನಗೆ ಕೇಳಿಸಿರಲಿಲ್ಲ. ಟಿವಿಯಲ್ಲಿ ನೋಡಿದ ಮೇಲೆ, ತಿಳಿಯಿತು. ಹಾಗಾಗಿ, ಪ್ರತಿಕ್ರಿಯೆ ನೀಡುತ್ತಿದ್ದೇನೆ" ಎಂದು ಶ್ರೀರಾಮುಲು ಹೇಳಿದ್ದರು.

ತಿಂಗಳ ಹಿಂದೆ ಶ್ರೀರಾಮುಲು ಬಗ್ಗೆ ಡಿ ಕೆ ಶಿವಕುಮಾರ್ ನುಡಿದ ಭವಿಷ್ಯ ನಿಜವಾಯಿತು
"ಸಾಮಾಜಿಕ ತಾಣದಲ್ಲಿ ನಾನು ಡಿಸಿಎಂ ಆಗಬೇಕೆಂದು ಅಭಿಮಾನಿಗಳು ಬಯಸುತ್ತಿದ್ದಾರೆ. ವೈಯಕ್ತಿಕವಾಗಿ ನನಗೂ ಆ ಆಸೆಯಿದೆ. ಆದರೆ ಪಕ್ಷದ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ" ಎಂದು ಶ್ರೀರಾಮುಲು ಹೇಳಿದ್ದಾರೆ. ಡಿ ಕೆ ಶಿವಕುಮಾರ್ ನುಡಿದಂತೆ, ಉಪಮುಖ್ಯಮಂತ್ರಿ ಹುದ್ದೆಯಲ್ಲಿ ಕೇಳಿ ಬರುತ್ತಿರುವ ಹೆಸರುಗಳಲ್ಲಿ ಶ್ರೀರಾಮುಲು ಹೆಸರು ಇಲ್ಲ. ಹಾಗಾಗಿ, ಸುಮಾರು ಒಂದು ತಿಂಗಳ (ಜುಲೈ 18) ಡಿಕೆಶಿ ನುಡಿದ ರಾಜಕೀಯ ಭವಿಷ್ಯ ನಿಜವಾದಂತಾಗಿದೆ.












Click it and Unblock the Notifications