ನೋಡಿ ಸ್ವಾಮೀ ಚಾರ್ಮಾಡಿ ಘಾಟ್ ಅವಸ್ಥೆ: ನಾವೇನು ಊರಿಗೆ ಹೋಗೋದು ಬೇಡ್ವಾ?
Recommended Video
ಶಿರಾಡಿ ಘಾಟ್ ಬಂದ್ ಆಗಿದೆ ಅಥವಾ ಬಂದ್ ಮಾಡಿಸಿದ್ದಾರೆ, ಸಂಪಾಜೆ ಕಡೆಯಿಂದ ಸದ್ಯದ ಮಟ್ಟಿಗೆ ಹೋಗುವ ಹಾಗಿಲ್ಲ.. ಮತ್ತೊಂದು ಪ್ರಮುಖ ಕೊಂಡಿ ಚಾರ್ಮಾಡಿ ಘಾಟ್.. ಅವೆರಡು ಬಂದ್ ಆಗಿರುವುದರಿಂದ ಇರೋಬರೋ ವಾಹನಗಳಿಗೆ ಇರೋದು ಚಾರ್ಮಾಡಿಯೇ ಪ್ರಮುಖ ದಾರಿ.
ಈ ದಾರಿಯಲ್ಲಿ ಸಾಗಬೇಕಾದರೆ, ಇಂತಿಷ್ಟೇ ಹೊತ್ತಿನಲ್ಲಿ ಊರಿಗೆ ಬಂದು ಸೇರುತ್ತೇವೆ ಎಂದು ಯಾರಿಗೂ ಗ್ಯಾರಂಟಿ ಕೊಡುವಹಾಗಿಲ್ಲ. ಒಂದು ವೇಳೆ ಬೇಗ ಹೋದರೆ, ಅದು ನಮ್ಮ ಅಜ್ಜಿಪುಣ್ಯ. ಸೋಮವಾರ (ಆ 27) ಬೇರೆ ತಡರಾತ್ರಿ ಎರಡು ಗಂಟೆಗೆ, ಘಾಟ್ ಆರಂಭದಿಂದ ಅಣ್ಣಪ್ಪಸ್ವಾಮಿ ದೇವಾಲಯದವರೆಗೆ ಸುಮಾರು ಹತ್ತು ಕಿ.ಮೀ ಟ್ರಾಫಿಕ್ ಜಾಮ್ ಆಗಿದೆ.
ಶಿರಾಡಿ ಘಾಟ್ 'ಬಂದ್' ಹಿಂದೆ ಭಾರೀ ಗುಮಾನಿ: ತುರ್ತಾಗಿ ಆಗಬೇಕಿದೆ 'ಸತ್ಯ ಶೋಧನೆ'
ಪ್ರಯಾಣಿಕರಿಗೆ ರಾತ್ರಿಯಿಡೀ ಬಸ್ಸೇ ಸುಪ್ಪತ್ತಿಗೆ, ಒಂದೆಡೆ ಧೋ ಎಂದು ಸುರಿಯುವ ಮಳೆ. ಇನ್ನೊಂದೆಡೆ ಅಂಬುಲೆನ್ಸ್ ಸೈರನ್.. ಟ್ರಾಫಿಕ್ ಜಾಮ್ ಆಗಲು ಕಾರಣ, ಕೆಟ್ಟುನಿಂತ ಲಾರಿ. ಭಾರೀ ವಾಹನ ಸಂಚಾರ ನಿಷೇಧವಿದ್ದರೂ ಲಾರಿಯನ್ನು ಚಾರ್ಮಾಡಿಯಲ್ಲಿ ಬಿಟ್ಟವರಾರು, ಅದೇ ಧನಪಿಶಾಚಿ ಸರಕಾರೀ ಅಧಿಕಾರಿಗಳು. ಮಕ್ಕಳು, ಹೆಂಗಸರು, ವೃದ್ದರ ಪಾಡೇನು ಎನ್ನುವ ಅಗತ್ಯವಿಲ್ಲದ ಇವರಿಗೆ ದುಡ್ಡೇ ದೊಡ್ಡಪ್ಪ, ಆಮೇಲೆ ನೀನಪ್ಪಾ.. ಇದು ಒಂದು ಕಡೆ..
ಇನ್ನೊಂದು ಕಡೆ ಚಾರ್ಮಾಡಿಯ ಅವಸ್ಥೆ.. ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿರುವ (ಎನ್ ಎಚ್ 173), ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಸೆಕ್ಸನ್, ಚಿಕ್ಕಮಗಳೂರು (ಮೂಡಿಗೆರೆ) ಮತ್ತು ದಕ್ಷಿಣಕನ್ನಡ ಜಿಲ್ಲೆಯನ್ನು (ಬೆಳ್ತಂಗಡಿ) ಬೆಸೆಯುವ ಪ್ರಮುಖ ಕೊಂಡಿ. ಹನ್ನೆರಡು hair pin curve ಹೊಂದಿರುವ ಚಾರ್ಮಾಡಿ ಘಾಟ್ ತಿರುವಿಗೂ ಶಿರಾಡಿ ಘಾಟ್ ತಿರುವಿಗೂ ಬಹಳ ವ್ಯತ್ಯಾಸವಿದೆ.
ಯಾವಾಗ ನೋಡಿದರೂ ರಿಪೇರಿ... ಮಂಗಳೂರಿಗೆ ಹೋಗುವುದಾದರೂ ಹೇಗೆ?
ಸಾಮಾನ್ಯವಾಗಿ ಶಿರಾಡಿ ಘಾಟ್ ಕಾರ್ಯನಿರ್ವಹಿಸುತ್ತಿದ್ದರೆ, ಕರಾವಳಿ ಕಡೆಗೆ ಹೋಗುವ ವಾಹನಗಳು ಅಷ್ಟಾಗಿ ಚಾರ್ಮಾಡಿ ಘಾಟ್ ಕಡೆಯಿಂದ ಸಂಚರಿಸುವುದು ಕಮ್ಮಿ. ಕೇಂದ್ರ ಭೂಸಾರಿಗೆ ಇಲಾಖೆಯ ಸಚಿವ ನಿತಿನ್ ಗಡ್ಕರಿ, ಮೋದಿ ಸರಕಾರದ ಸಚಿವರಲ್ಲಿ ತುಂಬಾ ಕಾರ್ಯಕ್ಷಮೆತೆಯಿಂದ ಕೆಲಸ ಮಾಡುವವರಲ್ಲಿ ಒಬ್ಬರು ಎನ್ನುವ ಹೆಸರು ಪಡೆದಿರುವವರು.
ಆದರೆ, ಈ ಘಾಟ್ ಸೆಕ್ಸನಿನ ಕಳಪೆ ಕಾಮಗಾರಿಯನ್ನು ಹೆದ್ದಾರಿ ಪ್ರಾಧಿಕಾರದವರು ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿದೆ. ಈ ಲೇಖನಕ್ಕೆ ಬಳಸಲಾದ ಇಮೇಜ್ ಅನ್ನು ಒಮ್ಮೆ ಅವಲೋಕಿಸುವುದಾದರೆ, ನಾಲ್ಕು, ಐದು ಮತ್ತು ಆರನೇ ಹೇರ್ ಪಿನ್ ಕರ್ವ್ (ಘಾಟ್ ನಿಂದ ಇಳಿಯಬೇಕಾದರೆ) ತಡೆಗೋಡೆಯ ಅವಸ್ಥೆಯನ್ನು ನೋಡಿದರೆ, ಬೆಚ್ಚಿಬೀಳಬೇಕಾಗುತ್ತದೆ.
ತಿರುವು ಬಳಿ ಮರಳು ಚೀಲವನ್ನು ಹಾಕಿದ್ದರೂ, ಗುಡ್ಡಗಳು ಜರಿಯುತ್ತಿರುವುದರಿಂದ ಚೀಲಗಳೂ ಕೆಳಕ್ಕೆ ಜಾರುತ್ತಿವೆ, ಅಲ್ಲಲ್ಲಿ ಗುಡ್ಡಗಳೂ ಕುಸಿಯುತ್ತಿವೆ. ಈ ಭಾಗದಲ್ಲಿ ಡ್ರೈವರ್ ಸ್ವಲ್ಪ ಯಾಮಾರಿದರೂ ಪ್ರಪಾತಕ್ಕೆ ಗ್ಯಾರಂಟಿ. ಘಾಟಿಯಿಂದ ಕೆಳಗೆ ಇಳಿಯುವಾಗ ಕಣ್ಮನ ಸೆಳೆಯುವ ಪ್ರಕೃತಿ ಸೌಂದರ್ಯವನ್ನು ಸವಿಯುವ ಬದಲು, ಚಾರ್ಮಾಡಿಯನ್ನು ಸೇಫಾಗಿ ಕ್ರಮಿಸಿದರೆ ಸಾಕು ಎನ್ನುವ ಚಿಂತೆ ಪ್ರಯಾಣಿಕರಿಗೆ ಕಾಡತೊಡಗಿದೆ.
ಶಿರಾಡಿ ಘಾಟ್ ಬಂದ್: ಕೈಕೊಟ್ಟ ಸಚಿವ ರೇವಣ್ಣನವರ ವಾಸ್ತುಶಾಸ್ರ!
ರಾಜ್ಯ ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿದ್ದಾಗಲೂ, ಪ್ರಮುಖವಾಗಿ ಚಾರ್ಮಾಡಿ ಘಾಟಿನ ತಿರುವು ಬಳಿ ಶಾಸ್ವತ ತಡೆಗೋಡೆ ನಿರ್ಮಿಸುವ ಕೆಲಸಕ್ಕೆ ಯಾವ ಸರಕಾರವೂ ಮುಂದಾಗಲಿಲ್ಲ, ಜೊತೆಗೆ, ಸ್ಥಳೀಯ ಪ್ರತಿನಿಧಿಗಳ ಅಸಡ್ಡೆಯೂ ಇದಕ್ಕೆ ಕಾರಣ ಕೂಡಾ. ರಸ್ತೆ ಕಾಮಗಾರಿಯನ್ನು ಸಂದರ್ಭಕ್ಕೆ ತಕ್ಕಂತೆ ಕೈಗೆತ್ತಿಕೊಂಡಿದ್ದರೂ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, hair pin curve ಬಳಿ ವೈಜ್ಞಾನಿಕ ಪರಿಹಾರದ ನೆಲೆಗಟ್ಟಿನ ಕೆಲಸಕ್ಕೆ ಮುಂದಾಗದಿರುವುದು ಬಹುದೊಡ್ಡ ದುರಂತ.
ರಾತ್ರಿ ಹೊತ್ತಿನಲ್ಲಿ ಲಘುವಾಹನ, ಬಸ್ಸುಗಳ ಜೊತೆ ಭಾರೀ ವಾಹನ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಡುತ್ತಿರುವುದು, ಘಾಟ್ ವಿಭಾಗದಲ್ಲಿ ಟ್ರಾಫಿಕ್ ಸಮಸ್ಯೆಯಾಗಲು ಮೂಲ ಕಾರಣ ಎನ್ನುವುದು ಪ್ರಯಾಣಿಕರ ದೂರು. ಘಾಟ್ ಸೆಕ್ಸನಿನ ಮೇಲೆ ಮತ್ತು ಕೆಳಗೆ ಇಂತಿಷ್ಟು ದುಡ್ಡನ್ನು ಪಾವತಿಸಿದರೆ, ಚಾರ್ಮಾಡಿ ಘಾಟ್ ಕಡೆಯಿಂದ ಹೋಗಲು ಇಂತಹ ವಾಹನಗಳಿಗೆ ಅವಕಾಶ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.
ಭಾರೀ ಮಳೆ: ರಸ್ತೆ ಮೂಲಕ ಕರಾವಳಿ ಕಡೆ ಪ್ರಯಾಣಿಸುವವರಿಗೆ ಮಹತ್ವದ ಟಿಪ್ಸ್
ಸಕಲೇಶಪುರ ಕಡೆಯಿಂದ ಕರಾವಳಿ ತಲುಪಲು ಇದ್ದ ರೈಲು ಸಂಚಾರವನ್ನು ಭೂಕುಸಿತದಿಂದ, ತಿರುಪತ್ತೂರು, ಪಾಲಕ್ಕಾಡ್ ಕಡೆಯಿಂದ ಸಂಚರಿಸಲು ಅನುವು ಮಾಡಿಕೊಡಲಾಗಿತ್ತು. ಈಗ ಅಲ್ಲೂ ಭೂಕುಸಿತದಿಂದ ಸೆಪ್ಟಂಬರ್ ಒಂದರವರೆಗೆ ಈ ಮಾರ್ಗದ ರೈಲು ಸಂಚಾರವನ್ನೂ ನೈಋತ್ಯ ರೈಲ್ವೆ ರದ್ದು ಪಡಿಸಿದೆ. ಹೀಗಾಗಿ, ರಾಜಧಾನಿಯಿಂದ ಕರಾವಳಿ ತಲುಪಲು ಇದ್ದ ಮತ್ತೊಂದು ಮಾರ್ಗವೂ ಬಂದ್ ಆದಂತಾಗಿದೆ. ಇನ್ನು ವಿಮಾನ ಪ್ರಯಾಣದ ದರ ಆಕಾಶದೆತ್ತರಕ್ಕೆ ಏರಿದೆ...
ಚಾರ್ಮಾಡಿ ಘಾಟ್ ನಲ್ಲಿ ಇದೇ ರೀತಿ ದುಡ್ಡಿನ ಆಸೆಗೆ ಭಾರೀ ವಾಹನಗಳಿಗೆ ಅಧಿಕಾರಿಗಳು ಅನುವು ಮಾಡಿಕೊಟ್ಟರೆ, ಆ ದಾರಿಯೂ ಬಂದ್ ಆಗುವ ದಿನ ದೂರವಿಲ್ಲ. ಮಳೆಗಾಲ ಮುಗಿಯುವರೆಗಾದರೂ ಅಥವಾ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತವಾಗುವರೆಗಾದರೂ, ಚಾರ್ಮಾಡಿಯಲ್ಲಿ ಭಾರೀ ವಾಹನ ಸಂಚಾರಕ್ಕೆ ಬ್ರೇಕ್ ಹಾಕಬೇಕಿದೆ.
ಹಾಗೆಯೇ, hair pin curve ಬಳಿ ಶಾಸ್ವತ ಪರಿಹಾರಕ್ಕೆ ಇನ್ನಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಲಿ. ಜನರ ಬದುಕಿನ ಜೊತೆ, ಕೇಂದ್ರ ಅಥವಾ ರಾಜ್ಯ ಸರಕಾರ ರಾಜಕೀಯ ಮೇಲಾಟ ನಡೆಸದಿರಲಿ, ಊರಿಗೆ ಹೋಗುವ ಖುಷಿಯನ್ನು ಕಸಿಯದಿರಲಿ ಎನ್ನುವುದು ಎಲ್ಲರ ಆಶಯ.