ಕರ್ನಾಟಕಕ್ಕೆ ಹೆಚ್ಚುವರಿಯಾಗಿ ರೆಮ್ಡೆಸಿವಿರ್ ಲಸಿಕೆ ಹಂಚಿಕೆ: ಸದಾನಂದಗೌಡ
ರಾಜ್ಯಕ್ಕೆ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ 1.62 ಲಕ್ಷ ರೆಮ್ಡೆಸಿವಿರ್ ಲಸಿಕೆಯನ್ನು ನಿಗದಿಪಡಿಸಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಿಗೆ ಶನಿವಾರ ಹೆಚ್ಚುವರಿಯಾಗಿ 16.5 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಲಸಿಕೆ ಹಂಚಿಕೆ ಮಾಡಿದ್ದು, ಕರ್ನಾಟಕಕ್ಕೆ 1.62 ಲಕ್ಷ ವಯಲ್ಸ್ ನಿಗದಿಪಡಿಸಲಾಗಿದೆ.
ರಾಜ್ಯಕ್ಕೆ ಏಪ್ರಿಲ್ 21ರಿಂದ ಮೇ 2ರವರೆಗಿನ ಬಳಕೆಗಾಗಿ 1,39,300 ವಯಲ್ಸ್ ರೆಮ್ಡೆಸಿವಿರ್ ಹಂಚಿಕೆ ಮಾಡಲಾಗಿತ್ತು. ಮುಂದಿನ ವಾರದ (ಸೋಮವಾರದಿಂದ ಭಾನುವಾರದವರೆಗೆ) ಬಳಕೆಗಾಗಿ 1.62 ಲಕ್ಷ ವಯಲ್ಸ್ ನಿಗದಿಪಡಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ತಿಳಿಸಿದ್ದಾರೆ.

ಮೇ 3ರಿಂದ 9ರವರೆಗಿನ ಅವಧಿಯ ಬಳಕೆಗೆಗಾಗಿ ಕರ್ನಾಟಕಕ್ಕೆ 1.62 ಲಕ್ಷ ವಯಲ್ಸ್ ನಿಗದಿಪಡಿಸಲಾಗಿದೆ, ಇದರಿಂದಾಗಿ ರಾಜ್ಯಕ್ಕೆ ಇದುವರೆಗೆ ಹಂಚಿಕೆಯಾದ ರೆಮ್ಡೆಸಿವರ್ ಪ್ರಮಾಣ 3,01,300 ವಯಲ್ಸಿಗೆ ಏರಿಕೆಯಾದಂತಾಗಿದೆ.
ಕರ್ನಾಟಕದ ಆಮ್ಲಜನಕ ಪಾಲನ್ನು (ಪ್ರತಿದಿನ) ಸದ್ಯದ 802 ಮೆಟ್ರಿಕ್ ಟನ್ನಿನಿಂದ 865 ಮೆಟ್ರಿಕ್ ಟನ್ನಿಗೆ ಏರಿಸಲಾಗಿದೆ. ಇದನ್ನು ಇನ್ನಷ್ಟು ಹೆಚ್ಚಿಸುವಂತೆ ರಾಜ್ಯವು ಕೇಂದ್ರ ವಾಣಿಜ್ಯ ಇಲಾಖೆಯನ್ನು ಕೋರಿದೆ.
ಆಮದುಮಾಡಿಕೊಳ್ಳಲಾಗುತ್ತಿರುವ ರೆಮ್ಡೆಸಿವರ್ ಪೈಕಿ 75 ಸಾವಿರ ವಯಲ್ಸ್ ಈಗಾಗಲೇ ಭಾರತ ತಲುಪಿದೆ. ಹಾಗೆಯೇ ಭಾರತದಲ್ಲಿಯೂ ರೆಮ್ಡೆಸಿವರ್ ಉತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಲಭ್ಯತೆಯನ್ನು ನೋಡಿಕೊಂಡು ಇನ್ನೂ ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗುವುದು ಸಚಿವರು ಭರವಸೆ ನೀಡಿದರು.
ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ನಾನೂ ಚರ್ಚಿಸಿದ್ದೇನೆ. ಕೊರೊನಾ ನಿರ್ವಹಣೆ ಬಗ್ಗೆ ಕೇಂದ್ರವು ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದರು.












Click it and Unblock the Notifications