ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಕಾನೂನಿನ ಎಲ್ಲ ನಿಯಮಗಳ ಉಲ್ಲಂಘನೆ: ಎನ್.ಆರ್. ರಮೇಶ್
ಬೆಂಗಳೂರು, ನವೆಂಬರ್ 22: ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಕಾನೂನಿನ ಎಲ್ಲ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಮಾಜಿ ಬಿಬಿಎಂಪಿ ಸದಸ್ಯ ಎನ್. ಆರ್. ರಮೇಶ್ ಆಯುಕ್ತರಿಗೆ, ಆಡಳಿತಗಾರರಿಗೆ ಪತ್ರ ಬರೆದಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ದೂರಿ ಸೇರ್ಪಡೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿ, ರಾಜ್ಯ ಚುನಾವಣಾ ಆಯೋಗದ ಆಯುಕ್ತ ಮತ್ತು ಬಿಬಿಎಂಪಿ ಆಯುಕ್ತರಿಗೆ ದಾಖಲೆಗಳ ಸಹಿತ ದೂರುಗಳನ್ನು ನೀಡಲಾಗಿತ್ತು, ಆದರೆ ಈ ಸಂಬಂಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.
ಜನವರಿ 3 ರಂದು ಬೆಂಗಳೂರು ಮಹಾನಗರದ ಸುಮಾರು 13 ವಿಧಾನಸಭಾ ಕ್ಷೇತ್ರಗಳಲ್ಲಿ ಹೊರ ರಾಜ್ಯಗಳ 1,50,000 ಕ್ಕೂ ಹೆಚ್ಚು ಅಲ್ಪಸಂಖ್ಯಾತ ಜನರನ್ನು ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಸೇರ್ಪಡೆ ಮಾಡಿದ್ದ ವಿಷಯಗಳನ್ನು ಮುಖ್ಯ ಚುನಾವಣಾಧಿಕಾರಿಗಳು, ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಮತ್ತು ಬಿಬಿಎಂಪಿ ಆಯುಕ್ತರಿಗೆ ದಾಖಲೆಗಳ ಸಹಿತ ದೂರುಗಳನ್ನು ನೀಡಲಾಗಿತ್ತು.
ಡಿಸೆಂಬರ್ 15 ರಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 4,700 ಕ್ಕೂ ಹೆಚ್ಚು ಹೊರ ರಾಜ್ಯಗಳ ಅಲ್ಪ ಸಂಖ್ಯಾತ ಮತದಾರರನ್ನು ಚಿಕ್ಕಪೇಟೆ ವಿಭಾಗದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವ ವಿಷಯವನ್ನೂ ಸಹ ದಾಖಲೆಗಳ ಸಹಿತ ಪಾಲಿಕೆಯ ಆಯುಕ್ತರು, ವಿಶೇಷ ಆಯುಕ್ತರು (ಕಂದಾಯ) ಮತ್ತು ಜಂಟಿ ಆಯುಕ್ತರು (ಕಂದಾಯ) ಇವರ ಗಮನಕ್ಕೆ ತರಲಾಗಿತ್ತಲ್ಲದೇ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕೋರಲಾಗಿತ್ತು.
ಮಾರ್ಚ್ 3 ರಂದು ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂಖ್ಯೆ 170 ರಲ್ಲಿ ಕಂದಾಯ ಪರಿವೀಕ್ಷಕರು ಮತ್ತು ಕಂದಾಯ ವಸೂಲಿಗಾರರು ಕಾನೂನು ಬಾಹಿರವಾಗಿ ವೀರನ್ ಏಳುಮಲೈ ಎಂಬ ಸಹಾಯಕನೊಬ್ಬನನ್ನು ನಿಯೋಜಿಸಿಕೊಂಡು ವೀರನ್ ಏಳುಮಲೈ ಎಂಬುವವನ ಮುಖಾಂತರ ನೂರಾರು ಜನ ಹೊರ ಪ್ರದೇಶಗಳ ಜನರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಸಿದ್ದ ವಿಷಯವನ್ನೂ ಸಹ ದಾಖಲೆಗಳ ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ನೀಡಲಾಗಿತ್ತು.
ಆದರೆ, ಈ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಯಮಬಾಹಿರವಾಗಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ನಮ್ಮ ನೆರೆಯ ರಾಜ್ಯಗಳಾದ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ, ಹೊಸೂರು, ಕೇರಳ ರಾಜ್ಯದ ಕಾಸರಗೂಡು, ಕಣ್ಣೂರು ಜಿಲ್ಲೆಗಳ ಮತ್ತು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಮತ್ತು ಬಂಗಾರುಪಾಳ್ಯ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರನ್ನು ಇಲ್ಲಿನ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಲೀ ಮತ್ತು ಈ ರೀತಿ ನಿಯಮಬಾಹಿರವಾಗಿ ಸೇರಿಸಲ್ಪಟ್ಟ ಮತದಾರರನ್ನು ಸ್ಥಳ ಪರಿಶೀಲನೆ ಮಾಡಿ ಆ ಮತದಾರರ ಪಟ್ಟಿಯಿಂದ ತೆಗೆಯುವ ಕೆಲಸವನ್ನಾಗಲೀ ಈ ವರೆವಿಗೆ ಮಾಡದೇ ಕರ್ತವ್ಯ ಲೋಪವನ್ನು ಬಿಬಿಎಂಪಿಯ ಕಂದಾಯ ಇಲಾಖೆಯ ಅಧಿಕಾರಿಗಳು ಎಸಗಿರುತ್ತಾರೆ.
ಆದುದರಿಂದ ಕೂಡಲೇ ಈ ರೀತಿ ಸೇರ್ಪಡೆ ಮಾಡಿರುವ ಹೊರ ರಾಜ್ಯಗಳ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯುವ ಬಗ್ಗೆ ಮತ್ತು ಈ ರೀತಿ ಕಾನೂನು ಬಾಹಿರ ಕಾರ್ಯಗಳನ್ನು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮತ್ತೊಮ್ಮೆ ಇಂದು ಮನವಿ ಪತ್ರಗಳನ್ನು ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರು ಮತ್ತು ಮಾನ್ಯ ಆಡಳಿತಾಧಿಕಾರಿಗಳಿಗೆ ನೀಡಲಾಗಿದೆ.