'ಚಿನ್ನ'ದ ಗೊಂಬೆ ಜಯಲಲಿತಾ ಬಳಿಯಿದ್ದ ಬಂಗಾರವೆಷ್ಟು?
ಅಷ್ಟಿಷ್ಟಲ್ಲ 21 ಕೆಜಿ 280 ಗ್ರಾಂನಷ್ಟು ಚಿನ್ನ! ಎಲ್ಲ ಗುಡ್ಡೆ ಹಾಕಿದರೆ ಅದರ ಬೆಲೆ ಎಷ್ಟಾದೀತೆಂದು ಲೆಕ್ಕ ಹಾಕಿ. ಆದರೆ, ಜಯಲಲಿತಾ ಅವರಿಗೆ ಇದೆಲ್ಲ ಲೆಕ್ಕವೇ ಅಲ್ಲ. ಆ ಮಾತು ಬೇರೆ!
ಬೆಂಗಳೂರು, ಡಿಸೆಂಬರ್ 07 : ಚಿನ್ನ ಅಂದ ಕೂಡಲೆ ಯಾವ ಮಹಿಳೆಯ ಕಿವಿ ಅರಳಲ್ಲ ಹೇಳಿ? ಹೆಚ್ಚೂಕಮ್ಮಿ ಎಲ್ಲ ಹೆಂಗಸರಿಗೂ ಬಂಗಾರದ ಮೇಲೆ ಮೋಹ ಇದ್ದೇ ಇರುತ್ತದೆ. ಇನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಇಲ್ಲದೆ ಇರೋಕೆ ಸಾಧ್ಯವೆ? ಚಿನ್ನದ ಮೋಹ ಅಪಾರವಾಗಿತ್ತು.
ಅದೂ ಅಷ್ಟಿಷ್ಟಲ್ಲ 21 ಕೆಜಿ 280 ಗ್ರಾಂನಷ್ಟು ಚಿನ್ನ! ಎಲ್ಲ ಗುಡ್ಡೆ ಹಾಕಿದರೆ ಅದರ ಬೆಲೆ ಎಷ್ಟಾದೀತೆಂದು ಲೆಕ್ಕ ಹಾಕಿ. ಆದರೆ, ಜಯಲಲಿತಾ ಅವರಿಗೆ ಇದೆಲ್ಲ ಲೆಕ್ಕವೇ ಅಲ್ಲ. ಆ ಮಾತು ಬೇರೆ! ತಮಾಷೆಯ ಸಂಗತಿಯೆಂದರೆ, ಜಯಲಲಿತಾ ಅವರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಈ ಎಲ್ಲ ಚಿನ್ನ ಕರ್ನಾಟಕದ ಬಳಿಯಿದೆ!
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಈ ಚಿನ್ನ ಕರ್ನಾಟಕದ ಉಗ್ರಾಣದಲ್ಲಿ ಭದ್ರವಾಗಿದೆ. ಚಿನ್ನ ಮಾತ್ರವಲ್ಲ, 1,250 ಕೆಜಿ ಬೆಳ್ಳಿ ತಮ್ಮ ಬಳಿಯಿದೆ ಎಂದು ಅಫಿಡವಿಟ್ ನಲ್ಲಿ ಜಯಲಲಿತಾ ಪ್ರಸ್ತಾಪಿಸಿದ್ದಾರೆ. ಆ ಬೆಳ್ಳಿಯ ಆಭರಣಗಳ ಬೆಲೆ 3 ಕೋಟಿ 12 ಲಕ್ಷ 500 ಸಾವಿರ ರುಪಾಯಿ. [ಮೈಸೂರಿನಲ್ಲಿರುವ ಜಯಲಲಿತಾ ಮನೆ ಈಗ ಏನಾಗಿದೆ?]
ಅಕ್ರಮ ಆಸ್ತಿ ಗಳಿಕೆಯ ಪ್ರಕರಣ ಅಂತಿಮವಾಗಿ ಇತ್ಯರ್ಥವಾಗುವವರೆಗೆ 21 ಚಿಲ್ಲರೆ ಕೆಜಿ ಚಿನ್ನವೆಲ್ಲ ಕರ್ನಾಟಕದ ಉಗ್ರಾಣದಲ್ಲಿಯೇ ಇರುತ್ತದೆ. ಈ ಪ್ರಕರಣ ಸದ್ಯಕ್ಕೆ ಸುಪ್ರೀಂ ಕೋರ್ಟ್ ನಲ್ಲಿದೆ. ಕರ್ನಾಟಕದ ವಿಶೇಷ ನ್ಯಾಯಾಲಯ ಜಯಲಲಿತಾ ಮತ್ತಿತರ ಮೂವರಿಗೆ ವಿಧಿಸಿದ 4 ವರ್ಷ ಜೈಲು ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿ ಅವರನ್ನು ಖುಲಾಸೆ ಮಾಡಿತ್ತು.
ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದರೆ ರಾಜ್ಯದ ಉಗ್ರಾಣದಲ್ಲಿರುವ ಚಿನ್ನವನ್ನೆಲ್ಲ ತಮಿಳುನಾಡು ಸರಕಾರಕ್ಕೆ ಹಸ್ತಾಂತರಿಸಬೇಕಾಗುತ್ತದೆ. [ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ಕಥೆ ಏನು?]
ಇತರ ಆಸ್ತಿಯ ವಿವರ
ಅಫಿಡವಿಟ್ ಹೇಳಿದಂತೆ, ಜಯಲಲಿತಾ ಅವರ ಬಳಿ 113 ಕೋಟಿ 73 ಲಕ್ಷ 38 ಸಾವಿರದ 586 ರುಪಾಯಿ ಆಸ್ತಿ ಇದ್ದು, 2 ಕೋಟಿ 4 ಲಕ್ಷ 2 ಸಾವಿರದ 987 ರುಪಾಯಿಯಷ್ಟು ಹೊರೆ ಅವರ ಮೇಲಿದೆಯಂತೆ. ಅವರ ಬಳಿ ಕೇವಲ 41 ಸಾವಿರ ರು. ಮಾತ್ರ ನಗದು ಇದೆಯಂತೆ.
ಜೊತೆಗೆ ಅಂಬಾಸಿಡರ್ ಕಾರು, ಮಹೀಂದ್ರ ಜೀಪ್, ಮಹೀಂದ್ರ ಬೊಲೆರೊ, ಟೆಂಪೊ ಟ್ರಾವಲರ್ ಮತ್ತು ಸ್ವರಾಜ್ ಮಜ್ದಾ ಮ್ಯಾಕ್ಸಿ ವಾಹನಗಳಿವೆ. ಜೊತೆಗೆ ಒಂದು ಕಾಂಟೆಸ್ಸಾ ಕಾರು, ಟೆಂಪೋ ಟ್ರಾಕ್ಸ್, 2 ಟೊಯೋಟಾ ವಾಹನಗಳು ತಮ್ಮ ಮಾಲಕಿಯನ್ನು ಕಳೆದುಕೊಂಡು ಅನಾಥವಾಗಿವೆ. [ಜಯಲಲಿತಾ ಕೊನೆ ಯಾತ್ರೆಯಲ್ಲಿ ಜನ ಜನ, ಜನ ನಾಯಕರು]
ಇನ್ನು ಕೋಟಿಕೋಟಿ ಬೆಲೆಬಾಳುವ ಜಮೀನು, ಮನೆ, ಕಟ್ಟಡಗಳು, ಬಟ್ಟೆಬರೆಗಳು, ಕಂಪನಿಗಳಲ್ಲಿನ ಹೂಡಿಕೆಗಳನ್ನೆಲ್ಲ ಬಿಟ್ಟು ಮರೀನಾ ಬೀಚ್ ಬಳಿಯಿರುವ ಜಮೀನಿನಲ್ಲಿ ಮಣ್ಣಲ್ಲಿ ಮಣ್ಣಾಗಿದ್ದಾರೆ. ಹೋಗುವಾಗ ಬೆತ್ತಲೆ, ಬರುವಾಗ ಬೆತ್ತಲೆ ಬಂದು ಹೋಗುವ ನಡುವೆ ಬರೀ ಕತ್ತಲೆ...