ಟಿಕೆಟ್ ಅಸಮಾಧಾನ: ಅಖಂಡ ಶ್ರೀನಿವಾಸ್ ಮೂರ್ತಿ ಪಕ್ಷೇತರರಾಗಿ ಸ್ಪರ್ಧೆ
ಬೆಂಗಳೂರು, ಏಪ್ರಿಲ್ 17: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಅಖಂಡ ಶ್ರೀನಿವಾಸ್ ಮೂರ್ತಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಈಗಾಗಲೇ ಮೂರು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಈವರೆಗೂ ಟಿಕೆಟ್ ಘೋಷಣೆಯಾಗದ ಹಿನ್ನೆಲೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ಭಾನುವಾರ ತಡರಾತ್ರಿ ರಾಜೀನಾಮೆ ನೀಡಿದ್ದಾರೆ.

ರಾಜ್ಯದಲ್ಲೇ ಅತಿ ಹೆಚ್ಚು ಮತ ಪಡೆದು ವಿಧಾನಸಭೆ ಪ್ರವೇಶಿಸಿದ್ದ ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದರು. ಈ ಬಗ್ಗೆ ಮಾತನಾಡಿರುವ ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್ ಪಕ್ಷದ ಮುಖಂಡರೇ ನನಗೆ ಟಿಕೆಟ್ ತಪ್ಪಿಸಿರುವುದು. ಅತಿ ಹೆಚ್ಚು ಮತ ಗಳಿಸಿ ಗೆದ್ದಿದ್ದ ನನಗೆ ಅವಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಜಮೀರ್ ಅಹಮದ್ ಮಾತ್ರ ನನಗೆ ಸಹಾಯ ಮಾಡಿದ್ದಾರೆ. ಹಾಗಾಗಿ ನಾನು ಅನಿವಾರ್ಯವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎಂದಿದ್ದಾರೆ.

ನನಗೆ ಅಳು ಬರುವ ಪರಿಸ್ಥಿತಿ ಬಂದಿದೆ. ಬೇರೆ ಪಕ್ಷದಲ್ಲಿದ್ದವರನ್ನು ಕರೆದುಕೊಂಡು ಬಂದು ನಮಗೆ ನೋವು ಕೊಡುತ್ತಿದ್ದಾರೆ. ಯಾರೋ ಮೌಲಾನಾ ಹೇಳಿದರು ಎನ್ನುತ್ತಾರೆ. ಆದರೆ ಯಾವ ಮೌಲಾನಾ ಕೂಡ ನನ್ನ ವಿರುದ್ದ ಹೇಳಿಲ್ಲ. ಇಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಎಲ್ಲರೂ ಒಂದಾಗಿದ್ದೇವೆ.ಕೆಲವು ಕಿಡಿಗೇಡಿಗಳು ನನ್ನ ಮನೆಗೆ ಬೆಂಕಿ ಹಾಕಿದ್ದರು. ಅವರಿಗೆ ಶಿಕ್ಷೆಯಾಗಿದೆ. ಇಂದು ಪಕ್ಷೇತರರಾಗಿ ಇಂದು ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ.
ನಾನು ಮುಸ್ಲಿಂ ಬಾಂಧವರು ಒಗ್ಗಟ್ಟಾಗಿದ್ದೇವೆ- ಅಖಂಡ ಶ್ರೀನಿವಾಸ ಮೂರ್ತಿ
ನಾನು ಮುಸ್ಲಿಂ ಬಾಂಧವರು ಒಗ್ಗಟ್ಟಾಗಿದ್ದೇವೆ. ನನ್ನ ಮನೆಗೆ ಬೆಂಕಿ ಇಟ್ಟವರು ಯಾರು ಇದರ ಹಿಂದೆ ಯಾರಿದ್ದಾರೆ ಅಂತಾ ಗೊತ್ತಿದೆ. ಬೆಂಕಿ ಇಟ್ಟವರನ್ನು ರಕ್ಷಣೆ ಮಾಡಿ ಅವರಿಗೆ ಟಿಕೆಟ್ ನೀಡುತ್ತಿದ್ದಾರೆ. ಸಿದ್ದರಾಮಯ್ಯ ನನ್ನ ಪರವಾಗಿ ಹೋರಾಟ ಮಾಡಿದರು ಅದು ಸಫಲವಾಗಿಲ್ಲ. ನಾನು ಪಕ್ಷೇತರನಾಗಿ ಇಂದು ನಾಮಪತ್ರ ಸಲ್ಲಿಸುತ್ತೇನೆ.ಇಂದು ಮತ್ತು ನಾಳೆ ಸಭೆ ನಡೆಸಿ ಮುಂದಿನ ತಿರ್ಮಾನ ಮಾಡುತ್ತೇನೆ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.
ಇನ್ನು ಮಾತು ಮುಂದುವರಿಸಿದ ಅವರು, ರಾಜ್ಯ ಹಾಗೂ ರಾಷ್ಟ್ರದ ಕೈ ನಾಯಕರು ನನಗೆ ಟಿಕೆಟ್ ತಪ್ಪಿಸಿದ್ದಾರೆ. ಅವರನ್ನು ದೇವರು ನೋಡಿಕೊಳ್ಳುತ್ತಾನೆ. ದೇವರು ಅವರ ಲೆಕ್ಕ ಬರೆಯುತ್ತಾನೆ, ತಕ್ಕ ಉತ್ತರ ನೀಡುತ್ತಾನೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಬಗ್ಗೆ ಕ್ಷೇತ್ರದ ಜನ ,ಬೆಂಬಲಿಗರು ತೀರ್ಮಾನ ಮಾಡುತ್ತಾರೆ. ಆದರೆ ಒಂದು ವೇಳೆ ನಾನು ನಿಂತರೂ ಮೊದಲಿಗಿಂತ ಇನ್ನೂ ಹದಿನೈದು ಸಾವಿರ ಹೆಚ್ಚು ಮತಗಳಿಂದ ಗೆಲ್ಲೋದು ಖಚಿತ. ಈಗ ನನ್ನ ಕ್ಷೇತ್ರದ ಕಾರ್ಯಕರ್ತರ ಮಾತೇ ಅಂತಿಮ. ಅದಕ್ಕಾಗಿಯೇ ಕ್ಷೇತ್ರದ ಕಾರ್ಯಕರ್ತರು ಬೆಂಬಲಿಗರ ಸಭೆ ನಡೆಸುತ್ತೇನೆ ಎಂದಿದ್ದಾರೆ.












Click it and Unblock the Notifications