Live
ಕಾರಟಗಿಯಲ್ಲಿ ಕಾಂಗ್ರೆಸ್ ಸಮಾವೇಶ, ರಾಹುಲ್ ಭಾಷಣ
ಕೊಪ್ಪಳ, ಫೆಬ್ರವರಿ 11 : ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೊಪ್ಪಳದ ಕಾರಟಗಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದಾರೆ.
'ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವುದು ದೇಶದ ಅಭಿವೃದ್ಧಿ ಮಾಡಲು. ಆದರೆ, ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತ್ರ ಮಾತನಾಡುತ್ತಾರೆ' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.
ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಭಾನುವಾರ ಮಧ್ಯಾಹ್ನ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. 'ಎಷ್ಟು ಯುವಕರಿಗೆ ಉದ್ಯೋಗ ನೀಡಿದ್ದೀರಿ ಎಂದು?' ರಾಹುಲ್ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದರು.
ಚಿತ್ರಗಳು : ಕರ್ನಾಟಕದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
'ನರೇಂದ್ರ ಮೋದಿ ಅವರೇ ನಿಮ್ಮ ಬಳಿ ಸಮಯ ಕಡಿಮೆ ಇದೆ. ಮಾತನ್ನು ನಿಲ್ಲಿಸಿ. ಕೆಲಸ ಮಾಡಿ. ಮುಂದಿನ ಚುನಾವಣೆ ಸಮಯದಲ್ಲಿ ನೀವು ಏನು ಕೆಲಸ ಮಾಡಿದ್ದೀರಿ? ಎಂದು ದೇಶದ ಜನರಿಗೆ ಉತ್ತರ ನೀಡಬೇಕು' ಎಂದು ರಾಹುಲ್ ವಾಗ್ದಾಳಿ ನಡೆಸಿದರು.
ರಾಹುಲ್ ಭಾಷಣದ ಮುಖ್ಯಾಂಶಗಳು
ಕೇಂದ್ರ ಸರ್ಕಾರಕ್ಕೆ ಹಣಕಾಸಿನ ಕೊರತೆ ಇಲ್ಲ. ಆದರೆ, ರೈತರ ಸಾಲವನ್ನು ಮಾತ್ರ ಮನ್ನಾ ಮಾಡುತ್ತಿಲ್ಲ. ಕೇಂದ್ರದ್ದು ಉದ್ಯಮಿಗಳ ಪರವಾದ ಸರ್ಕಾರ ಎಂದು ಆರೋಪಿಸಿದರು.
ರೈತರ ಸಾಲವನ್ನು ಒಂದು ರೂಪಾಯಿ ಮನ್ನಾ ಮಾಡಿಲ್ಲ. ಆದರೆ, ಉದ್ಯಮಿಗಳ ಸಾಲವನ್ನು ಮನ್ನಾ ಮಾಡಿದಿರಿ. ನಾನು ಸಿದ್ದರಾಮಯ್ಯ, ಖರ್ಗೆ ಅವರನ್ನು ಕರೆದು ಚರ್ಚೆ ಮಾಡಿದೆ. ನಂತರ ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಲಾಯಿತು.

ಹೈದರಾಬಾದ್-ಕರ್ನಾಟಕ ಭಾಗಕ್ಕೆ 371 ಜೆ ಅನುಷ್ಠಾನ ಮಾಡಿದ್ದೇವೆ. ಕರ್ನಾಟಕದ ಸರ್ಕಾರ ಬಡವರ ಪರವಾಗಿ ಇದೆ. ಮುಂದಿನ ಚುನಾವಣೆಯಲ್ಲಿಯೂ ಪಕ್ಷವನ್ನು ಆಶೀರ್ವದಿಸಿ.
ಲೋಕಸಭೆಯಲ್ಲಿ ಮೋದಿ ಒಂದು ಗಂಟೆ ಭಾಷಣ ಮಾಡಿದರು. ಆದರೆ, ದೇಶದ ಅಭಿವೃದ್ಧಿಗೆ ಅವರು ಏನು ಮಾಡಿದ್ದಾರೆ ಎಂದು ಹೇಳಲಿಲ್ಲ. ಕೇವಲ ಕಾಂಗ್ರೆಸ್ ಪಕ್ಷವನ್ನು ದೂಷಣೆ ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಬಡವರು, ಶ್ರಮಿಕರನ್ನು ಜೊತೆಯಾಗಿ ಕರೆದುಕೊಂಡು ಹೋಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ನಾವು ಇನ್ನೂ ಹೆಚ್ಚು ಕೆಲಸ ಮಾಡಲಿದ್ದೇವೆ ಎಂದು ಭರವಸೆ ನೀಡುತ್ತೇನೆ.
ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ನಿಮ್ಮ ಪಕ್ಕದಲ್ಲಿ ಯಡಿಯೂರಪ್ಪ ಕೂತಿದ್ದಾರೆ. ಜೈಲಿಗೆ ಹೋಗಿ ಬಂದ ಸಚಿವರು ಇದ್ದಾರೆ. ಅವರ ಕಡೆ ಒಮ್ಮೆ ನೋಡಿ ಎಂದು ವ್ಯಂಗ್ಯವಾಡಿದರು.












Click it and Unblock the Notifications