Ginger Price: ಟೊಮ್ಯಾಟೋ ನಂತರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಶುಂಠಿ ಬೆಲೆ
ದೇಶಾದ್ಯಂತ ಟೊಮ್ಯಾಟೋ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ನಂತರ, ಶುಂಠಿ ದರ ಕೂಡ ಹೆಚ್ಚಳವಾಗಿದ್ದು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ 250 ರಿಂದ 300 ರೂಪಾಯಿಗೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ದರ ಏರಿಕೆ ಬಿಸಿ ತಟ್ಟಿದೆ.
ಮುಂಗಾರು ಅವಧಿಯಲ್ಲಿ ಮಳೆ ಕೊರತೆಯಿಂದ ಶುಂಠಿ ಉತ್ಪಾದನೆ ಮೇಲೆ ಪರಿಣಾಮ ಬೀರಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ. ಕಳೆದ ವಾರ 200 ರೂಪಾಯಿ ಇದ್ದ ಬೆಲೆ ಈಗ 250-300 ರೂಪಾಯಿಗೆ ಏರಿಕೆಯಾಗಿದೆ.

ಬೆಳಗಾವಿಯ ಶುಂಠಿ ವ್ಯಾಪಾರಿ ಅಮರ್ ಕುಗಜಿ ಮಾತನಾಡಿ, 'ಕರ್ನಾಟಕದ ಕೇರಳ, ಮಹಾರಾಷ್ಟ್ರ ಹಾಗೂ ಶಿವಮೊಗ್ಗದಿಂದ ಶುಂಠಿ ತರುತ್ತೇವೆ. ಕಳೆದ ವಾರದ ಬೆಲೆಗಳು ಕೆಜಿಗೆ 200 ರೂ.ಗಳಾಗಿದ್ದು, ಒಂದು ವಾರದಿಂದ ಬೆಲೆ ಏರಿಕೆಯಾಗಿದೆ' ಎಂದು ಹೇಳಿರುವುದಾಗಿ ಡಿಹೆಚ್ ವರದಿ ಮಾಡಿದೆ.
ವ್ಯಾಪಾರಿ ಫೈಜ್ ಅತ್ತಾರ್ ಮಾತನಾಡಿ, 'ನನ್ನ ತಂದೆಯವರ ಕಾಲದಿಂದ ಸುಮಾರು 40 ವರ್ಷಗಳಿಂದ ಶುಂಠಿ, ಬೆಳ್ಳುಳ್ಳಿ ವ್ಯಾಪಾರ ಮಾಡುತ್ತಿದ್ದೇವೆ. ಹಿಮಾಚಲ ಪ್ರದೇಶದಿಂದ ಶುಂಠಿಯನ್ನು ತರುಸುತ್ತೇವೆ ಮತ್ತು ಸಾಮಾನ್ಯವಾಗಿ 50 ರೂಪಾಯಿಗಳಿಂದ 100 ರೂಪಾಯಿಗಳವರೆಗೆ ಬೆಲೆ ಇರುತ್ತದೆ. ಕೆಲವೊಮ್ಮೆ ಕೆಜಿಗೆ 150 ರೂಪಾಯಿಗೆ ಏರಿಕೆಯಾಗಿದ್ದು, ಈ ವರ್ಷ ಇಷ್ಟೊಂದು ಪ್ರಮಾಣದ ಬೆಲೆ ಬಂದಿದೆ, ಗ್ರಾಹಕರು ಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಖರೀದಿಸಲು ಪ್ರಾರಂಭಿಸಿದ್ದಾರೆ.' ಎಂದು ಹೇಳಿದ್ದಾರೆ.

ಶುಂಠಿಗೆ ಹೆಚ್ಚಾದ ಬೇಡಿಕೆ
"ಕೋವಿಡ್ -19 ಉಲ್ಬಣಗೊಂಡಾಗಿನಿಂದ, ಜನರು 'ಕಷಾಯ' ತಯಾರಿಸಲು ಹೆಚ್ಚಿನ ಪ್ರಮಾಣದಲ್ಲಿ ಶುಂಠಿಯನ್ನು ಬಳಸುತ್ತಿದ್ದರು. ಇದು ಸಸ್ಯಾಹಾರಿ ಮತ್ತು ಮಾಂಸಾಹಾರ ಎರಡಕ್ಕೂ ಅತ್ಯಗತ್ಯ. ಶುಂಠಿ ರುಚಿಯ ಟೀ ಮಾರುವ ಅಂಗಡಿಗಳೂ ಹೆಚ್ಚಿವೆ. ಇವು ಬೆಲೆ ಏರಿಕೆಗೆ ಕಾರಣವಾಗಿರಬಹುದು' ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಹಕ ನಾಗರಾಜ್ ದೇಸಾಯಿ ಮಾತನಾಡಿ, 'ಕಷಾಯ, ಟೀ, ವಿವಿಧ ಚಟ್ನಿಗಳಿಗೆ ಶುಂಠಿ ಬೇಕು. ಬೆಲೆ ಹೆಚ್ಚಾಗಿದ್ದರೂ ನಾವು ಶುಂಠಿಯನ್ನು ಖರೀದಿ ಮಾಡಬೇಕಿದೆ, ಇದಕ್ಕೆ ಪರ್ಯಾಯ ಉತ್ಪನ್ನಗಳು ಇಲ್ಲ' ಎಂದು ಹೇಳಿದ್ದಾರೆ.
ಹೊಟೇಲ್ ಉದ್ಯಮಿ ದುರ್ಗಪ್ಪ ನಾಯ್ಕ ಮಾತನಾಡಿ, "ನಾವು ತಯಾರಿಸುವ ಬಹುತೇಕ ವಸ್ತುಗಳಿಗೆ ಶುಂಠಿ ಬಳಸುತ್ತೇವೆ. ಈಗಾಗಲೇ ತರಕಾರಿ ಬೆಲೆ ಏರಿಕೆಯಾಗಿದ್ದು, ಈಗ ಶುಂಠಿ ಬೆಲೆ ದುಪ್ಪಟ್ಟಾಗಿದೆ. ಇದೇ ರೀತಿ ಬೆಲೆ ಏರಿಕೆ ಮುಂದುವರಿದರೆ ನಾವು ಕೂಡ ತಿಂಡಿ, ಕಾಫಿ, ಟೀ ದರಗಳನ್ನು ಹೆಚ್ಚಿಸಬೇಕಾಗುತ್ತದೆ" ಎಂದು ಹೇಳಿದರು.
ಹೊಲದಲ್ಲಿ ಬೆಳೆದಿದ್ದ ಶುಂಠಿ ಕಳ್ಳತನ
ಶುಂಠಿ ಬೆಲೆ ಏರಿಕೆಯ ನಂತರ ರೈತರ ಹೊಲಗಳಿಗೆ ಕಳ್ಳರ ಕಾಟ ಹೆಚ್ಚಾಗಿದೆ. ಹುಣಸೂರು ತಾಲೂಕಿನ ಸಣ್ಣೇನಹಳ್ಳಿಯ ಹೊಲದಲ್ಲಿ ಬೆಳೆದಿದ್ದ 5 ಲಕ್ಷ ರೂಪಾಯಿ ಮೌಲ್ಯದ ಶುಂಠಿ ಕಳ್ಳತನ ಮಾಡಲಾಗಿದೆ.
ತಾಲೂಕಿನ ಚೆನ್ನಸೋಗೆಯ ಪ್ರಸನ್ನಕುಮಾರ್ ಹೊಸಕೋಟೆಯ ಶ್ರೀನಿವಾಸ್, ದೇವೇಂದ್ರ ಸೇರಿದಂತೆ ಮೂವರು ಸಣ್ಣೆನಹಳ್ಳಿಯ ಚಂದ್ರೇಗೌಡ ಮತ್ತಿತರ ರೈತರಿಂದ ಒಟ್ಟು 15 ಎಕರೆ ಜಮೀನನ್ನು ಗುತ್ತಿಗೆ ಪಡೆದು ಶುಂಠಿ ಬೆಳೆದಿದ್ದರು. ಶುಂಠಿ ಬೆಳೆಯೂ ಉತ್ತಮವಾಗಿ ಬಂದಿದ್ದು, ಶನಿವಾರ ರಾತ್ರಿ ಯಾರೋ ಕಳ್ಳರು ಸುಮಾರು ಅರ್ಧ ಎಕರೆಯಷ್ಟು 5 ಲಕ್ಷ ರೂಪಾಯಿ ಬೆಲೆಬಾಳುವ ಶುಂಠಿ ಬೆಳೆಯನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ. ಘಟನೆ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications