ಸಿದ್ದರಾಮಯ್ಯ ಬಳಿಕ ಇತರ ನಾಯಕರಿಂದ Safe ಕ್ಷೇತ್ರದ ಹುಡುಕಾಟ!
ಬೆಂಗಳೂರು, ಜನವರಿ 12; "ಇಲ್ಲಿನ ಜನರ ಪ್ರೀತಿ ಅಭಿಮಾನವನ್ನು ನಾನು ತಿರಸ್ಕಾರ ಮಾಡಲಾರೆ. ನಾನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಆದರೆ ಹೈಕಮಾಂಡ್ನ ಅನುಮತಿ ಮೇರೆಗೆ ನನ್ನ ಸ್ಪರ್ಧೆ ನಿರ್ಧಾರವಾಗಲಿದೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಸೋಮವಾರ ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಕೋಲಾರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಹೀಗೆ ಹೇಳಿದ್ದಾರೆ. ಕೋಲಾರ ಸಿದ್ದರಾಮಯ್ಯಗೆ ಎಷ್ಟು ಸೇಫ್? ಎಂಬ ಚರ್ಚೆ ಈಗ ನಡೆಯುತ್ತಿದೆ.
ಕರ್ನಾಟಕದಲ್ಲಿ ಏಪ್ರಿಲ್ ಅಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಸಿದ್ದರಾಮಯ್ಯ ಸೇಫ್ ಎನ್ನುವ ಕ್ಷೇತ್ರ ಹುಡುಕಿಕೊಂಡರು. ಉಳಿದ ನಾಯಕರ ಪರಿಸ್ಥಿತಿ ಏನು?. ಸಿದ್ದರಾಮಯ್ಯ ಬಳಿಕ ಕೆಲವು ನಾಯಕರು ಕ್ಷೇತ್ರ ಬದಲಾವಣೆ ಬಗ್ಗೆ ಚಿಂತನೆ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕ್ಷೇತ್ರ ಬದಲಾವಣೆ ಮಾಡುವುದು ಬೇಡ. ಕನಕಪುರ ಕ್ಷೇತ್ರ ಅವರಿಗೆ ಸುರಕ್ಷಿತವಾಗಿದೆ. ಅವರು ಹೊಂದಿರುವ ಪ್ರಭಾವದಿಂದ ಸುಲಭವಾಗಿ ಗೆದ್ದು ಬರುತ್ತಾರೆ. ಆದರೆ ಪಕ್ಷದ ಕೆಲವು ನಾಯಕರು safe ಎನ್ನುವ ಕ್ಷೇತ್ರದ ಹುಡುಕಾಟದಲ್ಲಿ ತೊಡಗಿರುವುದು ಗುಟ್ಟಾಗಿ ಉಳಿದಿಲ್ಲ.

ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕೆ
ಕೋಲಾರದಲ್ಲಿ ಸಿದ್ದರಾಮಯ್ಯ ಅವರು, "ಹೈಕಮಾಂಡ್ನ ಅನುಮತಿ ಮೇರೆಗೆ ನನ್ನ ಸ್ಪರ್ಧೆ ನಿರ್ಧಾರವಾಗಲಿದೆ. ಸಿದ್ದರಾಮಯ್ಯ ಎಂಬ ಕಾರಣಕ್ಕೆ ಪಕ್ಷದಲ್ಲಿ ನನಗೊಬ್ಬನಿಗೇ ವಿಶೇಷ ಅವಕಾಶ, ಸೌಲಭ್ಯ ಇಲ್ಲ, ಪಕ್ಷದಲ್ಲಿ ಯಾರೇ ಆಗಲಿ ಎಲ್ಲರೂ ಹೈಕಮಾಂಡ್ ನ ಅನುಮತಿ ಪಡೆದು ಸ್ಪರ್ಧೆ ಮಾಡಬೇಕು. ಅದರಂತೆ ನನಗೂ ಹೈಕಮಾಂಡ್ ಅನುಮತಿ ನೀಡಿದರೆ ಇಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ" ಎಂದು ಹೇಳಿದ್ದಾರೆ.
ಜಾತಿ ಲೆಕ್ಕಾಚಾರ, ಹಾಲಿ ಶಾಸಕ ಕೆ. ಶ್ರೀನಿವಾಸ ಗೌಡರ ಸಹಾಯ, ಈಗ ಮಾಡಿಸಿರುವ ಎರಡು ಸಮೀಕ್ಷೆಗಳು ಕೋಲಾರ ಸಿದ್ದರಾಮಯ್ಯಗೆ ಸೇಫ್ ಎಂದು ಹೇಳುತ್ತಿವೆ. ಆದ್ದರಿಂದ ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ಖಚಿತವಾಗಿದೆ.

ಡಾ. ಜಿ. ಪರಮೇಶ್ವರ ಎಲ್ಲಿ ಸ್ಪರ್ಧೆ?
ಕೊರಟಗೆರೆ ಕ್ಷೇತ್ರದ ಹಾಲಿ ಶಾಸಕ ಡಾ. ಜಿ. ಪರಮೇಶ್ವರ ಕ್ಷೇತ್ರ ಬದಲಾವಣೆ ಮಾಡಲು ಮುಂದಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದ್ದು, ಭಾರೀ ಪೈಪೋಟಿ ನಡೆಯುವ ನಿರೀಕ್ಷೆ ಇದೆ. ಕೊರಟಗೆರೆಯಲ್ಲಿ ಪರಮೇಶ್ವರ ಜೆಡಿಎಸ್ನ ಸುಧಾಕರ್ ಲಾಲ್ ವಿರುದ್ಧ ಸೋಲು ಕಂಡಿದ್ದರು. ಎಸ್ಸಿ ಮೀಸಲು ಕ್ಷೇತ್ರವಾದ ಬೆಂಗಳೂರು ನಗರದ ಪುಲಿಕೇಶಿ ನಗರ ಕ್ಷೇತ್ರದ ಮೇಲೆ ಪರಮೇಶ್ವರ ಕಣ್ಣಿಟ್ಟಿದ್ದಾರೆ. ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಅಖಂಡ ಶ್ರೀನಿವಾಸಮೂರ್ತಿ. ಆದರೆ 2020ರಲ್ಲಿ ನಡೆದ ಗಲಭೆ ಬಳಿಕ ಅವರು ಕ್ಷೇತ್ರದಲ್ಲಿ ವಿರೋಧ ಎದುರಿಸುತ್ತಿದ್ದಾರೆ.

ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಬೆಳಗಾವಿಯ ಜಾರಕಿಹೊಳಿ ಕುಟುಂಬದ ಸತೀಶ್ ಜಾರಕಿಹೊಳಿ ಸದ್ಯ ಯಮಕನಮರಡಿ ಕ್ಷೇತ್ರದ ಶಾಸಕರು. ಕೆಪಿಸಿಸಿಯ ಕಾರ್ಯಾಧ್ಯಕ್ಷರೂ ಹೌದು. ಮುಂದಿನ ಚುನಾವಣೆಯಲ್ಲಿ ಕ್ಷೇತ್ರವನ್ನು ಮಗಳು ಪ್ರಿಯಾಂಕಾಗೆ ಬಿಟ್ಟುಕೊಟ್ಟು ಅವರು ಸವದತ್ತಿ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಸೋಲಿಸಲೇಬೇಕು ಎಂದು ಬಿಜೆಪಿ ತಂತ್ರವನ್ನು ರೂಪಿಸುತ್ತಿದೆ. ಆದರೆ ಹೈಕಮಾಂಡ್ ಕ್ಷೇತ್ರ ಬದಲಾವಣೆಗೆ ಒಪ್ಪಿಗೆ ನೀಡಲಿದೆಯೇ? ಕಾದು ನೋಡಬೇಕಿದೆ.

ಕೆ. ಎಚ್. ಮುನಿಯಪ್ಪ ಎಲ್ಲಿಂದ ಕಣಕ್ಕೆ?
ಕೇಂದ್ರದ ಮಾಜಿ ಸಚಿವ ಕೆ. ಎಚ್. ಮುನಿಯಪ್ಪ ಸಹ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. ಮುನಿಯಪ್ಪ ಪುತ್ರಿ ರೂಪಕಲಾ ಎಂ. ಶಶಿಧರ್ ಕೆಜಿಎಫ್ ಕ್ಷೇತ್ರದ ಹಾಲಿ ಶಾಸಕಿ. ಇಬ್ಬರಿಗೂ ಟಿಕೆಟ್ ಸಿಗಲಿದೆಯೇ? ಕಾದು ನೋಡಬೇಕು. ಟಿಕೆಟ್ ಸಿಕ್ಕರೆ ಕೆ. ಎಚ್. ಮುನಿಯಪ್ಪ ದೇವನಹಳ್ಳಿಯಿಂದ ಕಣಕ್ಕಿಳಿಯಲು ಬಯಸಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿಯೂ ಉತ್ತಮ ಪ್ರಭಾವ ಹೊಂದಿರುವ ಮುನಿಯಪ್ಪ ಸ್ಪರ್ಧೆಗೆ ಹೈಕಮಾಂಡ್ ನಾಯಕರು ಸಹ ಒಪ್ಪಿಗೆ ನೀಡುವ ನಿರೀಕ್ಷೆ ಇದೆ.












Click it and Unblock the Notifications