ಕೆಆರ್ಎಸ್, ಕಬಿನಿ, ಆಲಮಟ್ಟಿ, ತುಂಗಭದ್ರಾ ಜಲಾಶಯಗಳಿಗೆ ಭಾರಿ ಭರ್ಜರಿ ನೀರು!
ಮುಂಗಾರು ಮಳೆ ಅಬ್ಬರ ಇದೀಗ ಮುಂದುವರಿದಿದ್ದು, ಕರ್ನಾಟಕದಲ್ಲಿ ಜಲಾಶಯಗಳು ತುಂಬಿ ತುಳುಕುತ್ತಿವೆ. ಕಳೆದ 2 ವಾರದಿಂದ ಅಲರ್ಟ್ ಆಗಿರುವ ಮುಂಗಾರು ಮಳೆಯ ಮೋಡಗಳು, ಭಾರಿ ಮಳೆ ಸುರಿಸುತ್ತಿವೆ. ಹೀಗಾಗಿ ಡ್ಯಾಂಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಕೆಆರ್ಎಸ್, ಕಬಿನಿ, ಆಲಮಟ್ಟಿ, ತುಂಗಭದ್ರಾ ಡ್ಯಾಂಗಳ ನೀರಿನ ಪ್ರಮಾಣ ಭಾರಿ ಏರಿಕೆ ಕಾಣುತ್ತಿದ್ದು, ಆ ಬಗ್ಗೆ ಮಾಹಿತಿಗಾಗಿ ಮುಂದೆ ಓದಿ.
ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುತ್ತಿದೆ. ಹಾಗೇ ರಾಜಧಾನಿ ಬೆಂಗಳೂರು ಸೇರಿದಂತೆ ವಿಜಯಪುರ & ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ಬಾಗಲಕೋಟೆ & ಬೆಳಗಾವಿ & ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸಿದ್ದು, ಇದೇ ಸಮಯದಲ್ಲಿ ಕರ್ನಾಟಕದ ಡ್ಯಾಂಗಳ ನೀರಿನ ಪ್ರಮಾಣ ಭಾರಿ ಏರಿಕೆ ಕಾಣ್ತಿದೆ. ಅದರಲ್ಲೂ ಕಾವೇರಿ & ಕೃಷ್ಣಾ ನದಿ ಕೊಳ್ಳದಲ್ಲಿ ಇದೀಗ ಹೊಸ ಮಂದಹಾಸ ಮೂಡಿದೆ. ಈ ಕುರಿತು ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಕೆಆರ್ಎಸ್ & ಕಬಿನಿ ನೀರಿನ ಮಟ್ಟ ಎಷ್ಟು?
ಕಾವೇರಿ ನದಿಯ ತವರು ಕೊಡಗು ಜಿಲ್ಲೆ ಸೇರಿದಂತೆ, ಕಾವೇರಿ ನದಿಗೆ ಹೆಚ್ಚಾಗಿ ನೀರು ಹರಿದು ಬರುವಂತೆ ಮಾಡುವ ಕೇರಳದ ವಯನಾಡು ಪ್ರದೇಶದಲ್ಲಿ ಭಾರಿ ಮಳೆ ಬೀಳ್ತಿದೆ. ಇದೇ ಕಾರಣಕ್ಕೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೆಆರ್ಎಸ್ & ಕಬಿನಿ ಡ್ಯಾಂಗಳ ನೀರಿನ ಮಟ್ಟ ಭಾರಿ ಏರಿಕೆ ಕಾಣುತ್ತಿದೆ. 49.452 ಟಿಎಂಸಿ ಸಾಮರ್ಥ್ಯದ ಕೆಆರ್ಎಸ್ ಈ ಸಮಯದಲ್ಲಿ 22.267 ಟಿಎಂಸಿ ನೀರು ಹೊಂದಿದೆ. ಹಾಗೇ 11,189 ಕ್ಯೂಸೆಕ್ ನೀರು ಈಗ ಹರಿದು ಬರುತ್ತಿದ್ದು, 540 ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.
ಮತ್ತೊಂದು ಕಡೆ ಕಬಿನಿ ಜಲಾಶಯದಲ್ಲಿ ಈಗ 80 ಅಡಿ ನೀರು ಸಂಗ್ರಹವಾಗಿದ್ದು, ಕಬಿನಿ ಡ್ಯಾಂ ಭರ್ತಿಗೆ ಇನ್ನು 4 ಅಡಿ ಬಾಕಿ ಇದೆ. ಹಾಗೇ ಡ್ಯಾಂಗೆ 18,560 ಕ್ಯೂಸೆಕ್ ನೀರು ಹರಿದು ಬರ್ತಿದೆ. ಈ ಮೂಲಕ ಕಾವೇರಿ ಕೊಳ್ಳದಲ್ಲಿ ನೀರಿನ ಸಮಸ್ಯೆ ಬಹುತೇಕ ಬಗೆಹರಿದಿದ್ದು ಇನ್ನಷ್ಟು ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಈ ವರ್ಷ ಕೂಡ ಈ ಡ್ಯಾಂ ತುಂಬುವ ನಿರೀಕ್ಷೆ ಇದೆ. ಆದರೆ ಮತ್ತೊಂದು ಕಡೆ ತಮಿಳುನಾಡು ಸರ್ಕಾರ ನೀರಿಗಾಗಿ ಕಿರಿಕ್ ತೆಗೆಯುವ ಸಾಧ್ಯತೆ ಕೂಡ ದಟ್ಟವಾಗಿದೆ.
ಕೃಷ್ಣಾ ನದಿ ಫುಲ್, ಆಲಮಟ್ಟಿಗೆ ಎಷ್ಟು ನೀರು?
ಉತ್ತರ ಕರ್ನಾಟಕ ಭಾಗದ ಜನರ ಪಾಲಿಗೆ ಗಂಗೆಯಂತೆ ಆಸರೆ ನೀಡುವ, ಕೃಷ್ಣಾ ನದಿ ಮತ್ತೊಮ್ಮೆ ತುಂಬಿ ತುಳುಕುತ್ತಿದೆ. ಹೀಗಾಗಿ ಆಲಮಟ್ಟಿ ಡ್ಯಾಂಗೆ ಭಾರಿ ನೀರು ಹರಿದು, ಹರಿದು ಬರುತ್ತಿದೆ. ಆಲಮಟ್ಟಿ ಡ್ಯಾಂ ಗರಿಷ್ಠ ಎತ್ತರ 519.60 ಮೀಟರ್ ಆಗಿದ್ದು, ಈಗ ಡ್ಯಾಂಗೆ ಬರೋಬ್ಬರಿ 27,385 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ, ಈ ಡ್ಯಾಂ ಇನ್ನೇನು ಕೆಲವೇ ದಿನದಲ್ಲಿ ಫುಲ್ ಆಗುವ ನಿರೀಕ್ಷೆ ಇದೆ. ಆಲಮಟ್ಟಿ ಡ್ಯಾಂನಲ್ಲಿ ಈಗ 42 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಿದೆ.
ತುಂಗಭದ್ರಾ ಡ್ಯಾಂ ಶೀಘ್ರದಲ್ಲೇ ಫುಲ್?
ಉತ್ತರ ಕರ್ನಾಟಕ ಭಾಗದ ಮತ್ತೊಂದು ಪ್ರಮುಖ ಜಲಾಶಯ ಎಂಬ ಖ್ಯಾತಿ ಪಡೆದಿರುವ ತುಂಗಭದ್ರಾ ಡ್ಯಾಂಗೆ ಕೂಡ ಭಾರಿ ಪ್ರಮಾಣದ ಒಳಹರಿವು ಇದೆ. ಬೇಸಿಗೆ ಸಮಯದಲ್ಲಿ ಡೆಡ್ ಸ್ಟೋರೇಜ್ ಹಂತಕ್ಕೆ ಬಂದಿದ್ದ ತುಂಗಭದ್ರಾ ಡ್ಯಾಂ ಈಗ ತುಂಬಿಕೊಳ್ಳುತ್ತಿದೆ. ಈ ಮೂಲಕ 3 ಟಿಎಂಸಿ ಅಡಿ ಇದ್ದ ನೀರಿನ ಮಟ್ಟವು ಇದೀಗ 8 ಟಿಎಂಸಿಗೆ ಏರಿಕೆ ಕಂಡಿದ್ದು ರೈತರಿಗೆ ಖುಷಿ ನೀಡಿದೆ. ಸದ್ಯಕ್ಕೆ 10,503 ಕ್ಯೂಸೆಕ್ ಒಳಹರಿವು ಇದ್ದು, ಹಾಗೇ ಇನ್ನೂ ಹಲವು ದಿನಗಳ ಕಾಲ ಇದೇ ರೀತಿ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿರುವ ಹಿನ್ನೆಲೆ ಈ ಜಲಾಶಯ ಶೀಘ್ರದಲ್ಲೇ ತುಂಬಿಕೊಳ್ಳುವ ನಿರೀಕ್ಷೆ ಇದೆ.












Click it and Unblock the Notifications