ಸಿಡಿ ಹಗರಣದಿಂದ ಮನನೊಂದ ರಮೇಶ್ ಜಾರಕಿಹೊಳಿ ಸಕ್ರಿಯ ರಾಜಕಾರಣದಿಂದ ದೂರ?
ಬೆಂಗಳೂರು, ಮಾರ್ಚ್ 9: ಅಶ್ಲೀಲ ಸಿಡಿ ಪ್ರಕರಣದಲ್ಲಿ ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಸಕ್ರಿಯ ರಾಜಕಾರಣದಿಂದ ದೂರ ಸರಿಯಲಿದ್ದಾರೆಯೇ?
ಈ ರೀತಿಯ ಪ್ರಶ್ನೆ ಎದುರಾಗಿರುವುದು ಮಂಗಳವಾರದ (ಮಾ 9) ಅವರ ಪತ್ರಿಕಾಗೋಷ್ಠಿಯ ನಂತರ. ಮಾಧ್ಯಮದವರ ಮುಂದೆ ನಡೆದ ಘಟನೆಯನ್ನು ವಿವರಿಸುವಾಗ ಭಾವೋದ್ವೇಗಕ್ಕೆ ಒಳಗಾದ ಜಾರಕಿಹೊಳಿ, ನನ್ನ ಆದ್ಯತೆ ಏನಿದ್ದರೂ ಮನೆತನದ ಮರ್ಯಾದೆ ಉಳಿಸುವುದು ಎಂದು ಹೇಳಿದರು.
ಅಶ್ಲೀಲ ಸಿಡಿ ಪ್ರಕರಣ: ಕುಮಾರಸ್ವಾಮಿ ಸಹೋದರರಿಗೆ ಕ್ಲೀನ್ ಚಿಟ್ ನೀಡಿದ ರಮೇಶ್ ಜಾರಕಿಹೊಳಿ
ಸಿಡಿ ಮೂಲಕ ಹೇಗೆ ಷಡ್ಯಂತ್ರ ನಡೆಸಲಾಯಿತು ಎನ್ನುವುದರ ಬಗ್ಗೆ ವಿವರಣೆ ನೀಡಿದ ಜಾರಕಿಹೊಳಿ, ಎಷ್ಟೇ ಕೋಟಿ ಖರ್ಚಾದರೂ ಸುಮ್ಮನೆ ಬಿಡುವುದಿಲ್ಲ ಎಂದು ಆ ಮಹಾನ್ ನಾಯಕನಿಗೆ ಎಚ್ಚರಿಕೆಯನ್ನು ನೀಡಿದರು.
ಗೋಷ್ಠಿಯ ವೇಳೆ ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆಯನ್ನು ಅವಲೋಕಿಸುವುದಾದರೆ, ನನಗೆ ಸದ್ಯಕ್ಕೆ ರಾಜಕೀಯ ಬೇಡ, ನಮ್ಮದು ರಾಜಮನೆತನ ಎಂದಿದ್ದಾರೆ. ಹೋಗಿರುವ ಮರ್ಯಾದೆ, ವಾಪಸ್ ಬರಬೇಕು, ಅದು ನನ್ನ ಆದ್ಯತೆ ಎಂದು ಹೇಳಿದ್ದಾರೆ.
ಆ ಮಹಾನ್ ನಾಯಕನನ್ನು ಸುಮ್ಮನೆ ಬಿಡುವುದಿಲ್ಲ
ನನ್ನ ವಿರುದ್ದ ನಡೆದದ್ದು ದೊಡ್ಡ ಷಡ್ಯಂತ್ರ ಎಂದಿರುವ ರಮೇಶ್ ಜಾರಕಿಹೊಳಿ, "ಆ ಮಹಾನ್ ನಾಯಕನನ್ನು ಸುಮ್ಮನೆ ಬಿಡುವುದಿಲ್ಲ. ನಾನು ಎಲ್ಲರ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿರುವವನು. ಅದೆಷ್ಟೋ ಕೋಟಿ ಖರ್ಚಾಗಲಿ, ಪಿತೂರಿ ನಡೆಸಿದವರನ್ನು ಜೈಲಿಗೆ ಕಳುಹಿಸದೇ ಬಿಡುವುದಿಲ್ಲ"ಎಂದು ರಮೇಶ್ ಜಾರಕಿಹೊಳಿ ಕಿಡಿಕಾರಿದರು.
ನಾನು ಸಕ್ರಿಯ ರಾಜಕಾರಣಕ್ಕೆ ಬರುತ್ತೇನೋ, ಇಲ್ಲವೋ ಗೊತ್ತಿಲ್ಲ
"ಸದ್ಯದ ಈ ಬೆಳವಣಿಗೆಯಿಂದ ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲದಂತಾಗಿದೆ. ಮತ್ತೆ ನಾನು ಸಕ್ರಿಯ ರಾಜಕಾರಣಕ್ಕೆ ಬರುತ್ತೇನೋ, ಇಲ್ಲವೋ ಗೊತ್ತಿಲ್ಲ. ನನ್ನ ಮೊದಲ ಆದ್ಯತೆ ಈಗ ಬೇರೆ ಇದೆ. ನಮ್ಮದು ರಾಜಮನೆತನ"ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಮತ್ತೆ ರಾಜಕೀಯಕ್ಕೆ ಬರಬೇಕು ಎನ್ನುವ ಆಸೆ ನನಗಿಲ್ಲ
"ಮತ್ತೆ ರಾಜಕೀಯಕ್ಕೆ ಬರಬೇಕು ಎನ್ನುವ ಆಸೆ ನನಗಿಲ್ಲ. ಆದರೆ, ನನ್ನ ವಿರುದ್ದ ಪಿತೂರಿ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ದೆಹಲಿಯಲ್ಲಿರುವ ಕಾನೂನು ಪಂಡಿತರ ಸಲಹೆಯನ್ನು ಕೇಳಿದ್ದೇವೆ. ಅವರಿಂದ ಸಲಹೆ ಪಡೆದು, ಮುಂದಿನ ಕಾನೂನು ಹೋರಾಟವನ್ನು ಬಾಲಚಂದ್ರ ನೋಡಿಕೊಳ್ಳುತ್ತಾನೆ"ಎಂದು ರಮೇಶ್ ಜಾರಕಿಹೊಳಿ ಹೇಳಿದರು.
Recommended Video
ಆರು ಸಚಿವರು ಮುನ್ನೆಚ್ಚರಿಕೆಗಾಗಿ ಕೋರ್ಟ್ ಮೊರೆ ಹೋಗಿರುವುದರಲ್ಲಿ ತಪ್ಪಿಲ್ಲ
"ಆರು ಸಚಿವರು ಮುನ್ನೆಚ್ಚರಿಕೆಗಾಗಿ ಕೋರ್ಟ್ ಮೊರೆ ಹೋಗಿರುವುದರಲ್ಲಿ ತಪ್ಪಿಲ್ಲ. ನನ್ನ ಹಾಗೇ ಅವರಿಗೆ ಆಗಬಾರದು, ಅವರ ನಿರ್ಧಾರ ಸರಿಯಾಗಿಯೇ ಇದೆ. ನನಗೆ ನನ್ನ ಕುಟುಂಬದ ಬಲವಿದೆ, ಜನರ ಬೆಂಬಲವಿದೆ. ರಾಜಕೀಯದ ಬಗ್ಗೆ ಮುಂದೆ ಹೇಳುತ್ತೇನೆ"ಎಂದು ರಮೇಶ್ ಜಾರಕಿಹೊಳಿ ಹೇಳಿದರು.