ಪಂಚಭೂತಗಳಲ್ಲಿ ಅಂಬಿ ಲೀನ: ಶಾಂತಿ ಕದಡದಂತೆ ನೋಡಿ ಕೊಂಡ ಬೆಂಗಳೂರು ಪೊಲೀಸರಿಗೆ ಧನ್ಯವಾದ
ವರ್ಣರಂಜಿತ ರಾಜಕಾರಣಿ, ಸಿನಿಮಾ ನಟ ರೆಬೆಲ್ ಸ್ಟಾರ್ ಅಂಬರೀಶ್ (66) ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ನಿಧನವಾದ ಮೂರು ದಿನಗಳ ನಂತರ, ಹಿಂದೂ ಸಂಪ್ರದಾಯದ ಪ್ರಕಾರ ಅಂಬರೀಶ್ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ಮುಕ್ತಾಯಗೊಂಡಿದೆ.
ಅಪಾರ ಅಭಿಮಾನಿಗಳು, ಸ್ನೇಹಿತರು, ಹಿತೈಶಿಗಳನ್ನು ಹೊಂದಿದ್ದ ಅಂಬರೀಶ್ ಅವರ ಅಂತಿಮ ದರ್ಶನ ಮತ್ತು ಅಂತಿಮ ಸಂಸ್ಕಾರದ ವೇಳೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಬೆಂಗಳೂರು ಮತ್ತು ಮಂಡ್ಯ ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು.
Live Updates : ಪಂಚಭೂತಗಳಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಲೀನ
ಆದರೆ, ಸಣ್ಣಪುಟ್ಟ ತೊಂದರೆಯೂ ಬಾರದಂತೆ, ಜೊತೆಗೆ ಕಿಂಚಿತ್ತೂ ಅಂಬರೀಶ್ ಅಭಿಮಾನಿಗಳಿಗೆ ಬೇಸರವಾಗದಂತೆ, ಪೊಲೀಸರು ಅತ್ಯಂತ ಸಂಯಮದಿಂದ, ಜಾಗರೂಕತೆಯಿಂದ, ಕೆಲಸ ನಿರ್ವಹಿಸಿ, ಸಾರ್ವಜನಿಕ ವಲಯದಲ್ಲಿ ಸೈ ಎನಿಸಿಕೊಂಡಿದ್ದಾರೆ. ಪ್ರಮುಖವಾಗಿ, ಬೆಂಗಳೂರು ಪೊಲೀಸರು, ಕಾನೂನು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಅಂಬರೀಶ್ ನಿಧನವಾದ ಮರುದಿನ ಅಂದರೆ ಭಾನುವಾರ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಜಾಫರ್ ಷರೀಫ್ ಅವರೂ ವಿಧಿವಶರಾಗಿದ್ದರು. ಬೆಂಗಳೂರು ಪೊಲೀಸರು ಎರಡೆರಡು ಜವಾಬ್ದಾರಿಯನ್ನು ಹೊರಬೇಕಾಗಿತ್ತು. ರಾಜ್ಯದ ಡಿಜಿಐಜಿಪಿ ನೀಲಮಣಿ ರಾಜು ಮತ್ತು ಬೆಂಗಳೂರು ಕಮಿಷನರ್ ಸುನಿಲ್ ಕುಮಾರ್. ಖುದ್ದಾಗಿ ಜವಾಬ್ದಾರಿಯ ನೇತೃತ್ವವನ್ನು ವಹಿಸಿದ್ದರು.
ಅಂಬಿ ಆಯುಷ್ಯದ ಬಗ್ಗೆ ಎಚ್ಚರಿಸಿದ್ದ ಜ್ಯೋತಿಷಿ ಅಮ್ಮಣ್ಣಾಯರ ಸಂದರ್ಶನ
ಡಾ. ರಾಜಕುಮಾರ್ ಅಂತ್ಯಕ್ರಿಯೆಯ ವೇಳೆ, ನಡೆದ ಹಿಂಸಾಚಾರ ಯಾವ ಕಾರಣಕ್ಕೂ ಮರುಕಳಿಸಬಾರದು ಎಂದು, ಮುಖ್ಯಮಂತ್ರಿಗಳು ಕಾನೂನು, ಸುವ್ಯವಸ್ಥೆಯ ಇಂಚಿಂಚು ಮಾಹಿತಿಯನ್ನು ಪಡೆಯುತ್ತಿದ್ದರು. ಪ್ರಮುಖವಾಗಿ, ಹದಿಮೂರು ಕಿಲೋಮೀಟರ್ ದೂರ ಸಾಗಿದ, ಅಂತಿಮಯಾತ್ರೆಯ ವೇಳೆ, ಯಾವುದೇ ಅಹಿತಕರ ಘಟನೆ ನಡೆಯದಂತೆ, ಪೊಲೀಸರು ಮುತುವರ್ಜಿ ವಹಿಸಿದ್ದರು.
ಪೊಲೀಸ್ ಬಂದೋಬಸ್ತ್ ಇನ್ನೂ ಹೆಚ್ಚಿಸಲಾಗಿತ್ತು
ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ಇದೆ ಎನ್ನುವ ಗುಪ್ತಚರ ಇಲಾಖೆಯ ಮಾಹಿತಿಯ ನಂತರ, ಪೊಲೀಸ್ ಬಂದೋಬಸ್ತ್ ಅನ್ನು ಇನ್ನೂ ಹೆಚ್ಚಿಸಲಾಗಿತ್ತು. ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಕಂಠೀರವ ಸ್ಟೇಡಿಯಂ, ಮಂಡ್ಯದ ಸರ್ ಎಂವಿ ಮೈದಾನದಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿತ್ತು. ಅಂತಿಮಯಾತ್ರೆಯ ನೇತೃತ್ವವನ್ನು ಬೆಂಗಳೂರು ಸಿಸಿಬಿ ಹೆಡ್ ಅಲೋಕ್ ಕುಮಾರ್, ಡಿಸಿಪಿಗಳಾದ ಅಣ್ಣಾಮಲೈ, ರವಿ ಚೆನ್ನಣ್ಣವರ್, ಸೀಮಂತ್ ಕುಮಾರ್, ಬೋರಲಿಂಗಯ್ಯ, ದೇವರಾಜ್ ವಹಿಸಿದ್ದರು. ಸುಗಮ ಸಂಚಾರದ ವ್ಯವಸ್ಥೆಯ ನೇತೃತ್ವವನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ಟಿ ಹರಿಶೇಖರನ್ ವಹಿಸಿದ್ದರು.
ಅಂತಿಮಯಾತ್ರೆಯ ವೇಳೆ, ಶಾಂತಿಗೆ ಭಂಗ
ಅಂಬರೀಶ್ ನಿಧನದ ಹಿನ್ನಲೆಯಲ್ಲಿ ಮತ್ತು ಅಂತಿಮಯಾತ್ರೆಯ ವೇಳೆ, ಶಾಂತಿಗೆ ಭಂಗ ಬರದಂತೆ, ಮದ್ಯ ಮಾರಾಟವನ್ನು ಎರಡು ದಿನ ನಿಷೇಧಿಸಿ, ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಮದ್ಯ ಮಾರಾಟದ ಸಂಬಂಧ, ಪೊಲೀಸ್ ಆಯುಕ್ತರು "ಅಂತಿಮಯಾತ್ರೆಯ ವೇಳೆ, ಕಿಡಿಗೇಡಿಗಳು, ಮದ್ಯಪಾನದ ಅಮಲಿನಲ್ಲಿ, ದುಷ್ಕೃತ್ಯವನ್ನು ನಡೆಸಿ, ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಭವವಿರುವುದಾಗಿ ಗುಪ್ತವಾರ್ತಾ ವಿಭಾಗದ ಮಾಹಿತಿಯಿಂದ ತಿಳಿದುಬಂದಿದೆ" ಎಂದು ಉಲ್ಲೇಖಿಸಿದ್ದರು.
ಮಾಜಿ ಸಚಿವ ಎಂ.ಎಚ್.ಅಂಬರೀಶ್ ರಾಜಕೀಯ ಜೀವನದ ನೋಟ
ಅಂತಿಮಯಾತ್ರೆ ಸಾಗುವ ಹದಿಮೂರು ಕಿಲೋಮೀಟರ್
ಅಂತಿಮಯಾತ್ರೆ ಸಾಗುವ ಹದಿಮೂರು ಕಿಲೋಮೀಟರ್ ದಾರಿಯನ್ನು ಪ್ರತ್ಯೇಕ, ಪ್ರತ್ಯೇಕ ವಾರ್ಡ್ ಆಗಿ ವಿಂಗಡಿಸಿ, ಪ್ರತೀ ವಾರ್ಡಿಗೆ ಒಬ್ಬೊಬ್ಬರು ಡಿಸಿಪಿಯನ್ನು ನೇಮಿಸಲಾಗಿತ್ತು. ತಮ್ಮ ತಮ್ಮ ವಾರ್ಡಿನಲ್ಲಿ, ಡಿಸಿಪಿ ನೇತೃತ್ವದಲ್ಲಿ ಎಲ್ಲೂ ಶಾಂತಿಗೆ ಭಂಗ ಬರದಂತೆ ಪೊಲೀಸರು ಎಚ್ಚರಿಕೆಯನ್ನು ವಹಿಸಿದ್ದರು. ರಾಜ್ಯ ಸರಕಾರವೂ ಭಾರೀ ಬಂದೋಬಸ್ತ್ ಅನ್ನು ನಿಯೋಜಿಸಿತ್ತು.
ಹನ್ನೊಂದು ಸಾವಿರ ಪೊಲೀಸರನ್ನು ನೇಮಿಸಲಾಗಿತ್ತು
ಡಿಸಿಪಿ ಸೇರಿದಂತೆ, ಒಟ್ಟು ನಾಲ್ಕು ಎಡಿಜಿಪಿ, ಮೂರು ಆರ್ ಎ ಎಫ್ ತುಕುಡಿ, ಮೂವತ್ತು ಕೆ ಎಸ್ ಆರ್ ಪಿ ತುಕುಡಿ, 34 ಸಿಎಆರ್, ಹನ್ನೊಂದು ಸಾವಿರ ಪೊಲೀಸರನ್ನು ನೇಮಿಸಲಾಗಿತ್ತು. ಪ್ರವಾಹೋಪಾದಿಯಲ್ಲಿ ಹರಿದು ಬಂದ ಅಭಿಮಾನಿಗಳನ್ನು, ಎಲ್ಲೂ ತಾಳ್ಮೆಗೆಡದೆ ಪೊಲೀಸರು ನಿಭಾಯಿಸಿಕೊಂಡು ಬಂದರು. ಪೊಲೀಸ್ ಮುಖ್ಯಸ್ಥರು ಮತ್ತು ಸಿಎಂ ಎಲ್ಲಾ ಮಾಹಿತಿಗಳನ್ನು ಪಡೆಯುತ್ತಿದ್ದರು.
ಅಂಬರೀಶ್ ಅಂತ್ಯಕ್ರಿಯೆಗೆ ಕ್ಷಣಗಣನೆ: ವಿಧಿ ವಿಧಾನಗಳೇನು?
ಬೆಂಗಳೂರು ಪೊಲೀಸರಿಗೆ ಅಭಿನಂದನೆಗಳು
ಕಳೆದ ಮೂರು ದಿನದಿಂದ, ಅದರಲ್ಲೂ ಪ್ರಮುಖವಾಗಿ ಬೆಂಗಳೂರು ಪೊಲೀಸರು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿ, ಶಾಂತಿ ಕದಡದಂತೆ ನೋಡಿಕೊಂಡರು. ಅಭಿಮಾನಿಗಳಿಗೂ ಬೇಸರವಾಗದಂತೆ, ನಗರದಲ್ಲಿ ಎಲ್ಲೂ ಅಶಾಂತಿ ಮೂಡದಂತೆ ನೋಡಿಕೊಂಡು, ಬೆಂಗಳೂರು ಪೊಲೀಸರು ಸೈ ಎನಿಸಿಕೊಂಡಿದ್ದಾರೆ. ಇಷ್ಟು ದೊಡ್ಡ ವಿದ್ಯಮಾನವನ್ನು ಯಾವುದೇ ತೊಂದರೆಯಿಲ್ಲದೆ ನೋಡಿಕೊಂಡ ಬೆಂಗಳೂರು ಪೊಲೀಸರಿಗೆ ಅಭಿನಂದನೆಗಳು.