ಪುನೀತ್ ಸೇಫ್, ಅಭಿಮಾನಿಗಳೇ ಗಾಬರಿಯಾಗ್ಬೇಡಿ!
ಅನಂತಪುರ, ಜೂನ್ 08: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಗುರುವಾರ ರಾತ್ರಿ ಅಭಿಮಾನಿಗಳು ಕಂಗಾಲಾಗಿ ಹೋಗಿದ್ದರು. ಆದರೆ, ಕ್ಷಣಾರ್ಧದಲ್ಲೇ ಆತಂಕ ದೂರಾಗಿ, ಪುನೀತ್ ಸೇಫ್ ಎಂಬ ಸುದ್ದಿ ತಿಳಿದು ಫ್ಯಾನ್ಸ್ ನೆಮ್ಮದಿಯಿಂದ ನಿದ್ದೆ ಮಾಡುವಂತಾಗಿದೆ.
ಬಳ್ಳಾರಿಯಲ್ಲಿ ಪವನ್ ಒಡೆಯರ್ ನಿರ್ದೇಶನದ 'ನಟ ಸಾರ್ವಭೌಮ' ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗುವಾಗ ಅನಂತಪುರ ಬಳಿ ಕಾರಿಗೆ ಅಪಘಾತವಾಗಿದೆ. ರಸ್ತೆ ತಿರುವಿಗೆ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಬಂಪರ್ ಕಿತ್ತು ಹೋಗಿದೆ.

ಟ್ರಾಫಿಕ್ ಗೆ ಹೆದರಿ ಬದಲಿ ಮಾರ್ಗ ಹಿಡಿದ ಪುನೀತ್
ಬಳ್ಳಾರಿಯಿಂದ ಚಳ್ಳಕೆರೆ, ಹಿರಿಯೂರು ಮಾರ್ಗವಾಗಿ ಚಿತ್ರದುರ್ಗ -ಬೆಂಗಳೂರು ಹೈವೇಗೆ ಬರುವ ಯೋಜನೆ ಇತ್ತು. ಆದರೆ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರಬೇಕಿದ್ದ ರೇಂಜ್ ರೋವರ್ ಕಾರು ಸ್ವಲ್ಪ ಸುತ್ತಿ ಬಳಸಿ ಆನಂತಪುರ ಹೈವೆ ಮಾರ್ಗ ಹಿಡಿದಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಸತತ ಮೂರು ತಿರುವುಗಳನ್ನು ಕಂಡ ಚಾಲಕ, ಗೊಂದಲದಲ್ಲಿ ತಿರುಗಿಸಿದ್ದಾನೆ, ಕಾರಿನ ಟೈರ್ ಗಾಳಿ ಕಡಿಮೆ ಇದ್ದಿದ್ದರಿಂದ ಗಾಡಿ ನಿಯಂತ್ರಣಕ್ಕೆ ಸಿಗದೆ ರಸ್ತೆ ತಿರುವಿನಲ್ಲಿ ಗುದ್ದಿದ್ದಾನೆ.
ಪುನೀತ್ ರಾಜ್ ಕುಮಾರ್ ಕಾರಿಗೆ ಅಪಘಾತ: ಪ್ರಾಣಾಪಾಯದಿಂದ ಅಪ್ಪು ಪಾರು.!
ಬಿಳಿ ಬಣ್ಣದ KA 05 MW 144 ರೇಂಜ್ ರೋವರ್ ಕಾರ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಜತೆ ಡ್ರೈವರ್ ಅಲ್ಲದೆ, ಗನ್ ಮ್ಯಾನ್ ಮಾತ್ರ ಇದ್ದರು. ರಭಸವಾಗಿ ಗಾಡಿ ಬ್ರೇಕ್ ಹಾಕಿ ತಿರುಗಿಸಿದ್ದರಿಂದ ವಾಹನದಲ್ಲಿದ್ದವರಿಗೆ ಸ್ವಲ್ಪ ಪೆಟ್ಟಾಗಿದೆ.

ಘಟನೆ ಬಳಿಕ ಗಾಡಿಯಿಂದ ಹೊರಗಿಳಿದ ಅಪ್ಪು ಅವರು ಫೋನ್ ನಲ್ಲಿ ನಗುತ್ತಾ ಮಾತನಾಡುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣಕ್ಕೆ ಹಾಕಲಾಗಿದೆ.
ಅಪ್ಪು ನಗು ಕಂಡ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ನಡುವೆ, ಈ ಅಪಘಾತದ ಬಗ್ಗೆ ಯಾವುದೇ ರೀತಿ ಸುಳ್ಳುಸುದ್ದಿ ಹಬ್ಬಿಸದಂತೆ ಪುನೀತ್ ಅಭಿಮಾನಿಗಳ ಸಂಘ ಮನವಿ ಮಾಡಿಕೊಂಡಿದೆ. ಪುನೀತ್ ಅವರು ಬೆಂಗಳೂರಿಗೆ ಪ್ರಯಾಣಿಸಿದ್ದು, ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications