ಕೊಡಗು ಬಿಜೆಪಿ ಕಾರ್ಯಕರ್ತರ ಆತ್ಮಹತ್ಯೆ; ಸಾವಿನಲ್ಲೂ ರಾಜಕೀಯ: ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು, ಏಪ್ರಿಲ್ 05: ಬಿಜೆಪಿ ಕಾರ್ಯಕರ್ತರ ಆತ್ಮಹತ್ಯೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಪ್ರಕರಣದಲ್ಲಿ ಎಫ್ಐಆರ್ ಆಗಿದ್ದು ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಬಿಜೆಪಿಯ ಬೇಡಿಕೆಗೆಲ್ಲಾ ಉತ್ತರಿಸಲು ಸಾಧ್ಯವಿಲ್ಲ. ಬಿಜೆಪಿಯವರು ಹತಾಶರಾಗಿದ್ದು, ಈ ರೀತಿಯ ಹೇಳಿಕೆ ನೀಡಿದ್ದಾರೆ. ಸಾವಿನಲ್ಲೂ ರಾಜಕೀಯ ಮಾಡುವುದು ಬಿಜೆಪಿಗೆ ಅಭ್ಯಾಸ. ಅವರು ಹೇಳಿದ್ದಕ್ಕೆಲ್ಲಾ ಪ್ರತಿಕ್ರಿಯೆ ನೀಡಲಾಗದು ಎಂದರು.
ಇಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾಸೌಧದ ಪಶ್ಚಿಮ ದ್ವಾರದ ಬಳಿ ಆಯೋಜಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರ ನಾಯಕ ಭಾರತ ದ ಮಾಜಿ ಉಪ ಪ್ರಧಾನಿ ಡಾ ll ಬಾಬು ಜಗಜೀವನ ರಾಂ ರವರ 118 ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾಧ್ಯಮ ದವರೊಂದಿಗೆ ಮಾತನಾಡಿ, ಬಾಬು ಜಗಜೀವನ್ ರಾಮ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದವರು ಹಾಗೂ ದಮನಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತ ವರ್ಗಕ್ಕೆ ಸಾಮಾಜಿಕ ನ್ಯಾಯ ದೊರಕಿಸಲು ಶ್ರಮಿಸಿದವರು. ಮಹಾನ್ ನಾಯಕರನ್ನು ಸ್ಮರಿಸಿ ಗೌರವಿಸುವ ಕೆಲಸವನ್ನು ಸರ್ಕಾರ ಇಂದು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬಾಬು ಜಗಜೀವನ್ ರಾಂ ಅವರು ದೇಶ ಕಂಡ ಅಪ್ರತಿಮ ನಾಯಕರು. ದೀರ್ಘ ಕಾಲ ಕೇಂದ್ರ ಸರ್ಕಾರದ ಲ್ಲಿ ಸಚಿವರಾಗಿ ಅನೇಕ ಇಲಾಖೆಗಳನ್ನು ನಿಭಾಯಿಸಿದರು. ಕೃಷಿ, ರಕ್ಷಣೆ ಸೇರಿದಂತೆ ಯಾವುದೇ ಇಲಾಖೆಯಲ್ಲಿದ್ದರೂ ಎಲ್ಲಾ ಇಲಾಖೆಗಳಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಅವರ ಹೆಜ್ಜೆಗುರುತುಗಳನ್ನು ಬಿಟ್ಟುಹೋಗಿದ್ದಾರೆ. "ದೇಶದ ಪ್ರಗತಿಯಲ್ಲಿ ನಮ್ಮ ಪ್ರಗತಿ, ಅದರ ಉದ್ಧಾರದಲ್ಲೇ ನಮ್ಮ ಉದ್ಧಾರ ಹಾಗೂ ಅದರ ವಿಮೋಚನೆಯಲ್ಲೇ ನಮ್ಮ ವಿಮೋಚನೆಯಿದೆ" ಎಂದು ನುಡಿದ ಅವರು ಅಪ್ರತಿಮ ದೇಶಭಕ್ತರೂ ಆಗಿದ್ದರು. ದೇಶಕ್ಕೆ ಮಾದರಿ ಎನ್ನುವ ನಾಯಕರು. ಅವರ ಜನ್ಮದಿನೋತ್ಸವದಂದು ಅವರಿಗೆ ನಮನಗಳನ್ನು ಸಲ್ಲಿಸಲಾಗಿದೆ ಎಂದರು.
ಇನ್ನೂ ಈ ವೇಳೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, "ಹಿಂದುಳಿದವರು, ಪರಿಶಿಷ್ಟ ಸಮುದಾಯ, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ವರ್ಗಕ್ಕೆ ಸೇರಿದ ಜನರು ಎಂದಿಗೂ ದುರ್ಬಲರು ಎನ್ನುವ ಭಾವನೆ ಇಟ್ಟುಕೊಳ್ಳಬಾರದು. ಇಂತಹ ಮನೋಭಾವವನ್ನು ಮನಸ್ಸಿನಿಂದ ತೆಗೆದುಹಾಕಬೇಕು. ಬಾಬು ಜಗಜೀವನ್ ರಾಮ್ ಅವರು ಸಂತ ರವಿದಾಸರು ಹೇಳುವಂತೆ ʼನನ್ನ ಭಕ್ತಿಯೇ ನನ್ನ ಜಾತಿ, ನನ್ನ ಕರ್ಮವೇ ನನ್ನ ಧರ್ಮʼಎಂದು ರಾಜಕಾರಣ ಮಾಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
ಮಾನವೀಯತೆ ಮೇಲೆ ನಾವು ಕೆಲಸ ಮಾಡಬೇಕು. ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಎಲ್ಲರಿಗೂ ತಮ್ಮದೇ ಆದ ಸಾಮರ್ಥ್ಯವಿರುತ್ತದೆ. ವಿದ್ಯಾರ್ಥಿ ನಾಯಕ ನಾಯಕರಾಗಿ ಬೆಳೆದು ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಸಚಿವರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಬಾಬು ಜಗಜೀವನ್ ರಾಮ್ ಅವರದ್ದು ಎಂದು ಡಿ ಕೆ ಶಿವಕುಮಾರ್ ಅವರು ಹೇಳಿದರು.
ಆಡು ಮುಟ್ಟದ ಸೊಪ್ಪಿಲ್ಲ ಜಗಜೀವನ ರಾಮ್ ಅವರು ನಿರ್ವಹಿಸದೇ ಇರುವ ಖಾತೆಗಳಿಲ್ಲ. ಕೃಷಿ, ರಕ್ಷಣಾ ಸಚಿವರಾಗಿ ತೆಗೆದುಕೊಂಡ ದಿಟ್ಟ ನಿರ್ಧಾರಗಳು ಇತಿಹಾಸದಲ್ಲಿ ದಾಖಲಾಗಿವೆ. ಒಬ್ಬ ವ್ಯಕ್ತಿ ಹುಟ್ಟಿನಿಂದ ದೊಡ್ಡವನಾಗುವುದಿಲ್ಲ. ಕೆಲಸ ಹಾಗೂ ಗುಣಗಳಿಂದ ದೊಡ್ಡವನಾಗುತ್ತಾನೆ ಎಂಬುದಕ್ಕೆ ಬಾಬೂ ಜಗಜೀವನರಾಮ್ ಅವರೇ ದೊಡ್ಡ ಉದಾಹರಣೆ. ದನಿ ಇಲ್ಲದವರಿಗೆ ದನಿ ನೀಡಿದ ನಾಯಕ. ತುರ್ತು ಪರಿಸ್ಥಿತಿ ಕಾಲದಲ್ಲಿ ಇಂದಿರಾಗಾಂಧಿ ಅವರೊಟ್ಟಿಗೆ ಭಿನ್ನಾಭಿಪ್ರಾಯ ಮೂಡಿತು. ನಂತರ ಮೂರಾರ್ಜಿ ದೇಸಾಯಿ ಅವರ ಸಂಪುಟಕ್ಕೂ ರಾಜೀನಾಮೆ ನೀಡಿದರು ಎಂದರು.
ದೆಹಲಿಯಲ್ಲಿ ಯುವ ಕಾಂಗ್ರೆಸ್ ಸಮಾವೇಶ ನಡೆಯುತ್ತಿತ್ತು. ಆಗ ರಾಜೀವ್ ಗಾಂಧಿ ಅವರನ್ನು ಭೇಟಿ ಮಾಡಲು ತೆರಳಿದಾಗ ಹಿರಿಯ ನಾಯಕರೊಬ್ಬರು ಅಲ್ಲಿಗೆ ದಿಢೀರ್ ಬಂದರು. ಆಗ ಅವರ ಬಳಿಗೆ ರಾಜೀವ್ ಗಾಂಧಿ ಅವರು ಓಡೋಡಿ ಬಂದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿದರು. ನಾನು ಏನು ಎಂದು ರಾಜೀವ್ ಗಾಂಧಿ ಅವರ ಬಳಿ ಕೇಳಿದೆ. ಅವರು ಬಾಬು ಜಗಜೀವನ್ ರಾಮ್. ಅವರಿಗೆ ನನ್ನ ಆಪ್ತ ಸಹಾಯಕರು ಭೇಟಿಗೆ ಸಮಯ ನೀಡಿರಲಿಲ್ಲ. ಅವರು ಹಿರಿಯರು ನಮ್ಮ ತಾಯಿಯವರ ಜೊತೆ ಕೆಲಸ ಮಾಡಿದವರು. ಅನೇಕ ಭಿನ್ನಾಭಿಪ್ರಾಯದಿಂದ ಪಕ್ಷ ತೊರೆದಿದ್ದರು. ಈಗ ಕೊನೆಯದಾಗಿ ಕಾಂಗ್ರೆಸ್ಸಿಗನಾಗಿ ಸಾಯಬೇಕು ಎನ್ನುವ ಅಭಿಲಾಷೆ ವ್ಯಕ್ತಪಡಿಸಿದರು. ಇದನ್ನು ಕೇಳಿ ನಾನು ಕಣ್ಣಲ್ಲಿ ನೀರು ತುಂಬಿಕೊಂಡೆ. ಈ ಘಟನೆ ನೆನಪಿಗೆ ಅಂದಿನ ಫೋಟೋವನ್ನು ಇಟ್ಟುಕೊಂಡಿದ್ದೇನೆ" ಎಂದು ಹಳೆಯ ಘಟನೆಯನ್ನು ಮೆಲುಕು ಹಾಕಿದರು.












Click it and Unblock the Notifications