ನಾಲ್ವರು ಸರಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ
ಬೆಂಗಳೂರು, ಅಕ್ಟೋಬರ್ 5: ಅದಾಯವನ್ನು ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ನಾಲ್ವರು ಸರಕಾರಿ ನೌಕರರ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೂ ಮಂಗಳವಾರ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ತುಮಕೂರಿನ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಆರ್.ಸುಬ್ರಮಣ್ಯ ಅವರ ಮನೆಯಲ್ಲಿ ದಾಖಲಾತಿಗಳು ಹಾಗೂ ಆಸ್ತಿ ವಿವರಗಳನ್ನು ಪರಿಶೀಲಿಸಲಾಯಿತು. ಜತೆಗೆ ಪಾವಗಡದಲ್ಲಿರುವ ಸುಬ್ರಮಣ್ಯ ಅವರ ಸಹೊದರರ ಮನೆ, ದಾವಣಗೆರೆಯಲ್ಲಿರುವ ಅವರ ಪತ್ನಿಯ ತಂಗಿ ಮನೆ ಹಾಗೂ ತುಮಕೂರಿನ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಲಾಯಿತು.[ಆರ್ಟಿಓ ಚೆಕ್ಪೋಸ್ಟ್ಗಳ ಮೇಲೆ ಲೋಕಾಯುಕ್ತ ದಾಳಿ]
ಬೀದರ್ ಜಿಲ್ಲೆ ಔರಾದ್ ತಾಲೂಕು ಸಂತಾಪುರದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಗನ್ನಾಥ್ ಅವರ ಮನೆ ಮೇಲೂ ದಾಳಿ ನಡೆಸಲಾಗಿದೆ. ಬೀದರ್ ನ ಅಕ್ಕಮಹಾದೇವಿ ನಗರದ ಮನೆ, ಶಿವನಗರದ ಪಾಪನಾಶ ರಸ್ತೆಯ ವಾಣಿಜ್ಯ ಸಮುಚ್ಚಯ, ನೌಬಾದ್ ನ ನೀರು ಶುದ್ಧೀಕರಣ ಘಟಕ ಹಾಗೂ ಅವರ ಕಚೇರಿಯಲ್ಲಿ ದಾಖಲೆಗಳನ್ನು ವಶಕ್ಕೆ ಪಡೆಯಲಾಯಿತು.
ಕರ್ನಾಟಕ ಮೈನಾರಿಟೀಸ್ ಡೆವಲಪ್ಮೆಂಟ್ ನಿಗಮದ ಜಿಲ್ಲಾ ಮ್ಯಾನೇಜರ್ ಎಸ್.ಎಲ್.ಸಿಕಂದರ್ ಅವರ ಬೆಂಗಳೂರಿನ ರೆಹಮತ್ ನಗರದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿ, ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ನಗರದ ವಿಶ್ವೇಶ್ವರಯ್ಯ ಕಟ್ಟಡದಲ್ಲಿನ ಕಚೇರಿಯಲ್ಲೂ ದಾಖಲಾತಿ ಇತರೆ ಕಡತಗಳನ್ನು ಪರಿಶೀಲಿಸಲಾಗಿದೆ.[ಕಾಂಡೋಂ ವಿತರಣೆಯಲ್ಲಿ ಐನೂರು ಕೋಟಿ ಸೋರಿಕೆ ಆಗಿದೆಯಾ?]
ಬಿಬಿಎಂಪಿ, ಚಿಕ್ಕಪೇಟೆಯ ಕುಮಾರ್ವೇಲು ಅವರು ಬನ್ನೇರುಘಟ್ಟ ರಸ್ತೆಯಲ್ಲಿನ ಬಿಳೇಕಳ್ಳಿಯಲ್ಲಿ ಹೊಂದಿರುವ ಮನೆಯಲ್ಲಿ ಅಕ್ರಮ ಆಸ್ತಿ ಹುಡುಕಾಟ ನಡೆಸಿ, ದಾಖಲಾತಿ ಮತ್ತು ಆಸ್ತಿಗಳ ವಿವರಗಳನ್ನು ಪರಿಶೀಲಿಸಲಾಯಿತು. ಜತೆಗೆ ಬಿಬಿಎಂಪಿ ಟೌನ್ಹಾಲ್ ಕಚೇರಿಯಲ್ಲೂ ದಾಖಲಾತಿ ಮತ್ತಿತರೆ ಕಡತಗಳನ್ನು ಪರಿಶೀಲಿಸಲಾಯಿತು.