ನಮ್ಮ ಸರ್ಕಾರಿ ಕಚೇರಿಗಳಲ್ಲಿ ಚಿಕ್ಕಪುಟ್ಟ ಲಂಚ, ಇಬ್ಬರು ಒಳಗೆ
ಚಿಕ್ಕಬಳ್ಳಾಪುರ ಜಿಲ್ಲೆಯ ಹಂಪಸಂದ್ರದ ಗ್ರಾಮಲೆಕ್ಕಿಗ ಸಂಜಯ್ ಮತ್ತು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಪುನರ್ವಸತಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಅಪ್ಪೋಜಿ ಮಾದರ್ ಅವರು ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ/ಬಾಗಲಕೋಟೆ, ಡಿಸೆಂಬರ್. 01 : ಚಿಕ್ಕಬಳ್ಳಾಪುರ ಜಿಲ್ಲೆಯ ಹಂಪಸಂದ್ರದ ಗ್ರಾಮಲೆಕ್ಕಿಗ ಹಾಗೂ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೃಷ್ಣಾ ಭಾಗ್ಯ ಜಲ ನಿಗಮದ ಪುನರ್ವಸತಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಈ ಇಬ್ಬರು ಗುರುವಾರ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಡೆಸೆಂಬರ್ 01 ರಂದು ಪ್ರತ್ಯೆಕವಾಗಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಈ ಇಬ್ಬರು ಅಧಿಕಾರಿಗಳು ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಹಂಪಸಂದ್ರದ ಗ್ರಾಮಲೆಕ್ಕಿಗ ಸಂಜಯ್ ಖಾತಾ ವರ್ಗಾವಣೆ ಮಾಡಲು ಅರ್ಜಿದಾರರಿಂದ 8,000 ರು ಲಂಚ ಸ್ವೀಕರಿಸುವ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದು. ಆರೋಪಿ ಸಂಜಯ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ಅವರನ್ನು ದಸ್ತಗಿರಿ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ: ಸಾರ್ವಜನಿಕರೊಬ್ಬರಿಗೆ ಸರ್ಕಾರದ ವತಿಯಿಂದ ನೀಡಲಾಗಿದ್ದ ನಿವೇಶನವನ್ನು ಮಾರಾಟ ಮಾಡಲು ನಿರಾಕ್ಷೇಪಣಾ ಪತ್ರವನ್ನು ನೀಡುವಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಪುನರ್ವಸತಿ ಕಛೇರಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ.
ಆದರೆ, ಪುನರ್ವಸತಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಅಪ್ಪೋಜಿ ಮಾದರ್ ಅವರು ನಿರಾಕ್ಷೇಪಣಾ ಪತ್ರವನ್ನು ವಿತರಿಸಲು 10,000 ರುಗಳ ಲಂಚದ ಹಣವನ್ನು ನೀಡುವಂತೆ ಅರ್ಜಿದಾರರನ್ನು ಒತ್ತಾಯಿಸಿದ್ದಾರೆ.
ನಂತರ 4,000 ರುಗಳನ್ನು ಪಡೆದುಕೊಂಡು ನಿರಾಕ್ಷೇಪಣಾ ಪತ್ರವನ್ನು ವಿತರಿಸಲು ಒಪ್ಪಿಕೊಂಡಿದ್ದಾನೆ. 4,000 ರು ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಅಪ್ಪೋಜಿ ಮಾದರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಅವರನ್ನು ದಸ್ತಗಿರಿ ಮಾಡಲಾಗಿದೆ.