ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ: ಎಸಿಬಿಯಿಂದ FIR?
ವಿಧಾನಸೌಧದ ಆವರಣದ ಕಾರೊಂದರಲ್ಲಿ ಸಿಕ್ಕ ಎರಡು ಕೋಟಿ ರೂಪಾಯಿ ಹಣದ ವಿಚಾರದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಯಡಿಯೂರಪ್ಪನವರ ವಿರುದ್ದ FIR ದಾಖಲಿಸುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರು, ಸೆ 18: ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.
ವಿಧಾನಸೌಧದ ಆವರಣದ ಕಾರೊಂದರಲ್ಲಿ ಸಿಕ್ಕ ಎರಡು ಕೋಟಿ ರೂಪಾಯಿ ಹಣದ ವಿಚಾರದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಯಡಿಯೂರಪ್ಪನವರ ವಿರುದ್ದ FIR ದಾಖಲಿಸಲಿದೆ ಎಂದು ತಿಳಿದುಬಂದಿದೆ.
ಉತ್ತರ ಕರ್ನಾಟಕದಿಂದ ಬಿಎಸ್ವೈ ಸ್ಪರ್ಧೆ : ಯಾರು, ಏನು ಹೇಳಿದರು
ಯಡಿಯೂರಪ್ಪನವರ ವಕೀಲ ಸಿದ್ದಾರ್ಥ ಅವರ ಕಾರಿನಲ್ಲಿ ಈ ಭಾರೀ ಮೊತ್ತ ಸಿಕ್ಕಿತ್ತು ಮತ್ತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು. ಮೂಲಗಳ ಪ್ರಕಾರ ಇಂದು ಅಥವಾ ನಾಳೆ ಎಸಿಬಿ ಎಫ್ ಐಆರ್ ದಾಖಲಿಸುವ ಸಾಧ್ಯತೆಯಿದೆ.
ಸಾಮಾಜಿಕ ಹೋರಾಟಗಾರ ರವಿಕೃಷ್ಣ ರೆಡ್ಡಿ, ವಕೀಲ ಸಿದ್ದಾರ್ಥ ಬಳಿ ಸಿಕ್ಕ ದುಡ್ಡಿನ ಬಗ್ಗೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಪತ್ರ ಕೂಡಾ ಬರೆದಿದ್ದರು.
ಯಡಿಯೂರಪ್ಪನವರ ಬಳಿ ಕೇಳಿದರೆ ಈ ಹಣದ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕೂಡಾ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಕಳೆದ ವರ್ಷ ಅಕ್ಟೋಬರ್ 22ರಂದು ವಿಧಾನಸೌಧದ ಪಶ್ಚಿಮ ದ್ವಾರಕ್ಕೆ ಆಗಮಿಸಿದ ವೋಕ್ಸ್ ವ್ಯಾಗನ್ ಕಾರಿನಲ್ಲಿ ಈ ಭಾರೀ ಮೊತ್ತದ ಹಣ ಪತ್ತೆಯಾಗಿತ್ತು. ಈ ಸಂಬಂಧ, ವಕೀಲ ಸಿದ್ಧಾರ್ಥ ಅವರನ್ನು ಕಬ್ಬನ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.