'ಸಿ' ಗ್ರೂಪ್ ಸಿಬ್ಬಂದಿ 'ಬಿ' ಗ್ರೂಪನಲ್ಲಿ ವಿಲೀನ: ಯುಡಿಡಿ ಕಾರ್ಯದರ್ಶಿಗೆ ಬುಲಾವ್
ಬೆಂಗಳೂರು, ಜೂ.1. ರಾಜ್ಯದ ಹಲವು ಪೌರ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್-ಸಿ ಸಿಬ್ಬಂದಿಯನ್ನು ಗ್ರೂಪ್-ಬಿಗೆ ವಿಲೀನಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶ ಪಾಲನೆ ಮಾಡದಿರುವುದಕ್ಕೆ ಹೈಕೋರ್ಟ್, ಯುಡಿಡಿ ಕಾರ್ಯದರ್ಶಿಗೆ ಬುಲಾವ್ ಹೊರಡಿಸಿದೆ.
ವಿಲೀನ ಸಂಬಂಧ ಕರಡು ನಿಯಮಗಳನ್ನು ಪ್ರಕಟಿಸದ ಬಗ್ಗೆ ವಿವರಣೆ ನೀಡಲು ಜೂ.6ರಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಗೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕರ್ನಾಟಕ ನಗರ ಪಾಲಿಕೆಗಳ ಉದ್ಯೋಗಿಗಳ ಸಂಘ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಸರ್ಕಾರದ ಉತ್ತರಕ್ಕೆ ಅತೃಪ್ತಿ:
ಕರಡು ನಿಯಮ ಸಿದ್ಧವಿದೆ, ಸಚಿವ ಸಂಪುಟದ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ಸರ್ಕಾರಿ ವಕೀಲರು ನೀಡಿದ ಉತ್ತರದಿಂದ ತೃಪ್ತವಾಗದ ನ್ಯಾಯಾಲಯ ಈ ಆದೇಶ ಮಾಡಿತು.
ಗ್ರೂಪ್-ಸಿ ಉದ್ಯೋಗಗಳನ್ನು ಗ್ರೂಪ್-ಬಿಗೆ ವಿಲೀನಗೊಳಿಸುವ ನಿಟ್ಟಿನಲ್ಲಿ ವೃಂದ ಮತ್ತು ನೇಮಕ ನಿಯಮಗಳಿಗೆ ತಿದ್ದುಪಡಿ ತರಬೇಕು. ಆ ಕುರಿತು ಎರಡು ತಿಂಗಳಲ್ಲಿ ಕರಡು ನಿಯಮಗಳನ್ನು ಪ್ರಕಟಿಸುವಂತೆ 2021ರ ಜು.19ರಂದು ಏಕಸದಸ್ಯಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ. ಆದರೆ, ಈವರೆಗೂ ಕರಡು ನಿಯಮಗಳನ್ನು ಪ್ರಕಟಿಸಿಲ್ಲ. ಆ ಮೂಲಕ ಕೋರ್ಟ್ ಆದೇಶ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ನ್ಯಾಯಪೀಠ ಹೇಳಿತು.
ಜೊತೆಗೆ ಪ್ರಕರಣದ ಕುರಿತು ವಿವರಣೆ ನೀಡಲು ಜೂ.6ರಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಎಂ.ಎಸ್. ಅರ್ಚನಾ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.
ಪ್ರಕರಣ ಹಿನ್ನೆಲೆ ಏನು?
ರಾಜ್ಯದ ಪೌರಸಂಸ್ಥೆಯಲ್ಲಿ 10,000 ರಿಂದ 21,600 ರೂ. ವೇತನ ಶ್ರೇಣಿ ಹೊಂದಿರುವ ಕಂದಾಯ ಅಧಿಕಾರಿಗಳು, ಕಚೇರಿ ವ್ಯವಸ್ಥಾಪಕರು ಮತ್ತು ಹಿರಿಯ ಆರೋಗ್ಯಾಧಿಕಾರಿಗಳ ಗ್ರೂಪ್-ಸಿ ಉದ್ಯೋಗಗಳನ್ನು ಗ್ರೂಪ್-ಬಿಗೆ ವಿಲೀನಗೊಳಿಸಿ 2020ರ ಸೆ.29ರಂದು ಸರ್ಕಾರ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿದ್ದ ಅರ್ಜಿದಾರರು, ವೃಂದ ಮತ್ತು ನೇಮಕ ಅಧಿನಿಯಮಗಳಿಗೆ ತಿದ್ದುಪಡಿ ತರದೇ ಕೇವಲ ಕಾರ್ಯಕಾರಿ ಆದೇಶದ ಮೂಲಕ ನೇರವಾಗಿ ಗ್ರೂಪ್-ಸಿ ಉದ್ಯೋಗಿಗಳನ್ನು ಗ್ರೂಪ್-ಬಿಗೆ ವಿಲೀನಗೊಳಿಸಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದ್ದರು.
ಏಕ ಸದಸ್ಯಪೀಠ, ಗ್ರೂಪ್-ಸಿ ಉದ್ಯೋಗಗಳನ್ನು ಗ್ರೂಪ್-ಬಿಗೆ ವಿಲೀನಗೊಳಿಸಲು ವೃಂದ ಮತ್ತು ನೇಮಕ ನಿಯಮಗಳಿಗೆ ಎರಡು ತಿಂಗಳಲ್ಲಿ ಕರಡು ತಿದ್ದುಪಡಿ ನಿಯಮಗಳ ಪ್ರಕಟಿಸಬೇಕೆಂದು ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿ ಅರ್ಜಿದಾರರು ಮತ್ತೆ ಹೈಕೋರ್ಟ್ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.