Get Updates
Get notified of breaking news, exclusive insights, and must-see stories!

ರಾಜ್ಯ ಬಿಜೆಪಿ ಸರ್ಕಾರದಿಂದ ಮತ್ತೊಂದು ವಿವಾದಾತ್ಮಕ ಆದೇಶ!

ಬೆಂಗಳೂರು, ನ. 24: ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರೋಧಿ ಎಂದು ವಿಪಕ್ಷಗಳ ನಾಯಕರು ಆಗಾಗ ಆರೋಪ ಮಾಡುತ್ತಲೇ ಇರುತ್ತಾರೆ. ಅಲ್ಪಸಂಖ್ಯಾತ ವಿರೋಧಿ ಎಂಬ ಹಣೆಪಟ್ಟಿ ಕಳಚಿಕೊಳ್ಳುವ ಬದಲು, ವಿಪಕ್ಷಗಳ ಆರೋಪಕ್ಕೆ ಪುಷ್ಟಿಕೊಡುವಂತೆ ರಾಜ್ಯ ಬಿಜೆಪಿ ಸರ್ಕಾರ ನಡೆದುಕೊಂಡಿದೆ. ಅದಕ್ಕೆ ಕಾರಣವಾಗಿರುವುದು ಕೊರೊನಾ ಸಂಕಷ್ಟದ ನೆಪದಲ್ಲಿ ರಾಜ್ಯ ಅಲ್ಪಸಂಖ್ಯಾತರ ಇಲಾಖೆ ಹೊರಡಿಸಿರುವ ಆದೇಶ.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜ್ಯ ಬಿಜೆಪಿ ಸರ್ಕಾರ ಇದೀಗ ಮತ್ತೊಂದು ವಿವಾದವನ್ನು ಎಳೆದುಕೊಂಡಿದೆ. ಬಸವಕಲ್ಯಾಣ ಉಪ ಚುನಾವಣೆ ಹಿನ್ನೆಲೆಯಲ್ಲಿ ನೂರಾರು ಕೋಟಿ ರೂಪಾಯಿಗಳ ಅನುದಾನ ಒದಗಿಸಿ ಮರಾಠ ಅಭಿವೃದ್ಧಿ ಪ್ರಾಧಿಕಾರ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ಸರ್ಕಾರ, ಕೋವಿಡ್ ನೆಪದಲ್ಲಿ ಅಲ್ಪಸಂಖ್ಯಾತ ಶೈಕ್ಷಣಿಕ ವಲಯಕ್ಕೆ ನೀಡಿದ್ದ ಅನುದಾನಕ್ಕೆ ಕತ್ತರಿ ಹಾಕಿದೆ. ಸ್ವತಃ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಬಿಜೆಪಿ ನಾಯಕ ಹಾಗೂ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರು ಈ ಬಗ್ಗೆ ಗಮನ ಸೆಳೆದು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಅಷ್ಟಕ್ಕೂ ಸರ್ಕಾರ ಮಾಡಿರುವ ಆದೇಶ ಏನು? ಅಬ್ದುಲ್ ಅಜೀಂ ಅವರು ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಜಾತಿ ನಿಗಮಗಳಿಗೆ ನೂರಾರು ಕೋಟಿ

ಜಾತಿ ನಿಗಮಗಳಿಗೆ ನೂರಾರು ಕೋಟಿ

ಬಸವಕಲ್ಯಾಣ ಉಪ ಚುನಾವಣೆ ಹಿನ್ನೆಲೆಯಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ.ಗಳು ಹಾಗೂ ವೀರಶೈವ ಅಭಿವೃದ್ಧಿ ಪ್ರಾಧಿಕಾರಕ್ಕೆ 500 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.

ಈ ಮಧ್ಯೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಬರುವ ಡಿಸೆಂಬರ್ 5ರಂದು ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿವೆ. ಆದರೆ ವಿಪರ್ಯಾಸ ಎಂದರೆ ರಾಜಕೀಯ ಕಾರಣಗಳಿಗೆ ನೂರಾರು ಕೋಟಿ ವ್ಯಯಿಸುತ್ತಿರುವ ರಾಜ್ಯ ಸರ್ಕಾರ ಶೈಕ್ಷಣಿಕ ವಲಯದ ಕಾರ್ಯಕ್ರಮಗಳ ಅನುದಾನಕ್ಕೆ ಕತ್ತರಿ ಹಾಕಿ ಆದೇಶ ಮಾಡಿರುವುದು.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಫೆಲೊಶಿಪ್

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಫೆಲೊಶಿಪ್

ಪಿಎಚ್‌ಡಿ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ಅಲ್ಪಸಂಖ್ಯಾತ ಅರ್ಹ ವಿದ್ಯಾರ್ಥಿಗಳಿಗೆ 3 ವರ್ಷ ಹಾಗೂ ಎಂ.ಫಿಲ್ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ಅರ್ಹ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್. ಮಾದರಿಯಲ್ಲಿ 2 ವರ್ಷಗಳ ಅವಧಿಗೆ ಪ್ರತಿ ತಿಂಗಳು 25 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು. ಅದರ ಬದಲಿಗೆ ಪ್ರತಿ ವರ್ಷ 1 ಲಕ್ಷ ರೂಪಾಯಿ ಮಾತ್ರ ನೀಡಲು ತಿದ್ದುಪಡಿ ಆದೇಶ ಮಾಡಿದೆ. ಇದು ಅಲ್ಪಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ನೂಕಿದೆ.

ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಡಬೇಕಾಗಿದ್ದ ರಾಜ್ಯ ಸರ್ಕಾರ, ಕೊಟ್ಟಿದ್ದ ಅನುದಾನವನ್ನೇ ಕಡಿತಗೊಳಿಸಿ ಆದೇಶ ಮಾಡಿದೆ. ಇದೇ ನವೆಂಬರ್ 10 ರಂದು ಮಾಡಿರುವ ಆದೇಶದಲ್ಲಿ ಪಿಎಚ್‌ಡಿ ಮತ್ತು ಎಂಫಿಲ್ ಮಾಡುತ್ತಿರುವ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ವಾರ್ಷಿಕ 3 ಲಕ್ಷ ರೂ. ಫೆಲೊಶಿಪ್ ನೀಡುವುದನ್ನು ಕಡಿತಗೊಳಿಸಿ ಅದರ ಬದಲು ವಾರ್ಷಿಕ 1 ಲಕ್ಷ ರೂ.ಗಳ ಫೆಲೊಶಿಪ್ ನೀಡುವುದಾಗಿ ತಿಳಿಸಿದೆ.

ಯಡಿಯೂರಪ್ಪಗೆ ಅಬ್ದುಲ್ ಅಜೀಂ ಪತ್ರ

ಯಡಿಯೂರಪ್ಪಗೆ ಅಬ್ದುಲ್ ಅಜೀಂ ಪತ್ರ

ಆ ಆದೇಶವನ್ನು ಮರುಪರಿಶೀಲನೆ ಮಾಡುವಂತೆ ಬಿಜೆಪಿ ನಾಯಕ ಹಾಗೂ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಪತ್ರ ಬರೆದಿದ್ದಾರೆ. ಪ್ರತಿ ತಿಂಗಳು 25 ಸಾವಿರ ರೂ.ಗಳನ್ನು ಪಡೆಯುತ್ತಿದ್ದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಸರ್ಕಾರದ ಹೊಸ ಆದೇಶದಿಂದ ತಿಂಗಳಿಗೆ ಕೇವಲ 8,334 ರೂಪಾಯಿಗಳನ್ನು ಪಡೆಯುವಂತಾಗಿದೆ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಅಜೀಂ ಅವರು ವಿವರಿಸಿದ್ದಾರೆ.

ಸಂಶೋಧನಾ ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡಬೇಕು. ಪುಸ್ತಕ ಕೊಳ್ಳಬೇಕು. ಜೊತೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಬಿತ್ತನೆಯಿಂದ ಹಿಡಿದು ಬೆಳೆ ಕಟಾವಿನ ವರೆಗೆ ಬೀಜ, ಗೊಬ್ಬರ ಖರೀದಿ ಹಾಗೂ ಇತರೆ ಸಾಮಗ್ರಿಗಳಿಗೆ 8,334 ರೂ. ಗಳಲ್ಲಿಯೆ ಖರ್ಚು ಮಾಡಬೇಕಾಗುತ್ತದೆ.

ಸಂಶೋಧನಾ ವಿದ್ಯಾರ್ಥಿಗಳು ತಾವು ಮಾಡುತ್ತಿದ್ದ ಉದ್ಯೋಗ ಬಿಟ್ಟು ಸಂಶೋಧನೆಯಲ್ಲಿ ತೊಡಗಿರುತ್ತಾರೆ. ಅವರ ಜೀವನ ನಿರ್ವಹಣೆ ಕೂಡ ಸರ್ಕಾರ ಕೊಡುತ್ತಿದ್ದ 25 ಸಾವಿರ ರೂಪಾಯಿಗಳ ಫೆಲೊಶಿಪ್‌ನಲ್ಲಿಯೇ ಆಗಬೇಕು. ಈಗ ಅದಕ್ಕೂ ಕಂಟಕ ಬಂದಿದೆ ಎಂದು ಪತ್ರದಲ್ಲಿ ಅಜೀಂ ತಿಳಿಸಿದ್ದಾರೆ.

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ

ಅಲ್ಪಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳಂತೆ ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 23 ಸಾವಿರ ರೂ.ಗಳ ಫೆಲೊಶಿಪ್‌ ನೀಡಲಾಗುತ್ತಿದ್ದು, ಅದೇ ರೀತಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೂ ಫೆಲೊಶಿಪ್ ಕೊಡುವುದು ಸಮಂಜಸ.

ಅಲ್ಪಸಂಖ್ಯಾತ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 25 ಸಾವಿರ ರೂ. ಗಳ ಫೆಲೊಶಿಪ್ ಸೌಲಭ್ಯ ಮುಂದುವರೆಸುವಂತೆ ಆದೇಶ ಮಾಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಅಬ್ದುಲ್ ಅಜೀಂ ಅವರು ಮನವಿ ಮಾಡಿದ್ದಾರೆ.

ಒನ್‌ಇಂಡಿಯಾಕ್ಕೆ ಅಬ್ದುಲ್ ಅಜೀಂ ಹೇಳಿಕೆ

ಒನ್‌ಇಂಡಿಯಾಕ್ಕೆ ಅಬ್ದುಲ್ ಅಜೀಂ ಹೇಳಿಕೆ

ಬರುವ ಬಜಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಹಣ ಕಾಯ್ದಿರಿಸುವಂತೆ ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅವರು 'ಒನ್‌ಇಂಡಿಯಾ ಕನ್ನಡ'ಕ್ಕೆ ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್, ನೆರೆ ಹಿನ್ನೆಲೆಯಲ್ಲಿ ಸರ್ಕಾರ ಹೀಗೆ ಮಾಡಿರಬಹುದು. ಆದರೆ ನಾವು ಸರ್ಕಾರದ ಮೇಲೆ ಒತ್ತಡವನ್ನು ಹಾಕಿದ್ದೇವೆ. ನಮಗೆ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ನಂಬಿಕೆಯಿದ್ದು, ಈಗ ಕಡಿತ ಮಾಡಿರುವ ಅನುದಾನವನ್ನು ಮುಂದುವರೆಸುವಂತೆ ಒತ್ತಾಯ ಮಾಡಿದ್ದೇವೆ. ಹೀಗಾಗಿ ಯಾವುದೇ ರೀತಿಯ ತಾರತಮ್ಯ ಆಗುವುದಿಲ್ಲ. ಸರ್ಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಅನುದಾನ ಹೆಚ್ಚು ಮಾಡಲಿದೆ ಎಂದು ಅಬ್ದುಲ್ ಅಜೀಂ ಅವರು ಒನ್‌ಇಂಡಿಯಾಕ್ಕೆ ತಿಳಿಸಿದ್ದಾರೆ.

ಕೇವಲ ಅಲ್ಪಸಂಖ್ಯಾತರ ಅನುದಾನ ಕಡಿತವೇಕೆ?

ಕೇವಲ ಅಲ್ಪಸಂಖ್ಯಾತರ ಅನುದಾನ ಕಡಿತವೇಕೆ?

ಕೋವಿಡ್ ಸಂಕಷ್ಟದಿಂದ ಇಡೀ ರಾಜ್ಯದ ಆರ್ಥಿಕ ಪರಿಸ್ಥಿತಿ ಕೆಟ್ಟಿರಬಹುದು. ಆದರೆ ಎಸ್‌ಸಿ, ಎಸ್‌ಟಿ ಸೇರಿದಂತೆ ಬೇರಾವುದೇ ವಿದ್ಯಾರ್ಥಿಗಳ ಫೆಲೊಶಿಪ್ ಕಡಿತವನ್ನು ರಾಜ್ಯ ಸರ್ಕಾರ ಮಾಡಿಲ್ಲ. ಕೇವಲ ಅಲ್ಪಸಂಖ್ಯಾತ ಸಮುದಾಯದ ಸಂಶೋಧನಾ ವಿದ್ಯಾರ್ಥಿಗಳ ಫೆಲೊಶಿಪ್ ಕಡಿತಗೊಳಿಸಿದೆ. ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆ 160ನ್ನೂ ಮೀರುವುದಿಲ್ಲ. ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಮುಸ್ಲಿಂ ಸಮುದಾಯ ದೊಡ್ಡದು. ಅವರಲ್ಲಿಯೇ ಸಂಶೋಧನೆ ಮಾಡುವ ವಿದ್ಯಾರ್ಥಿಗಳ ಪ್ರಮಾಣ ಕೇವಲ ಶೇಕಡಾ 1ರಷ್ಟು ಮಾತ್ರ.

ಜೊತೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ಮೀಸಲಿಡುತ್ತಿದ್ದ ಅನುದಾನದಲ್ಲಿ ಶೇಕಡಾ 44ರಷ್ಟನ್ನು ಕಡಿತಗೊಳಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ? ಎಂದು ಸಂಶೋಧನಾ ವಿದ್ಯಾರ್ಥಿ ಅಶ್ಫಕ್ ಅಹ್ಮದ್ ಅವರು 'ಒನ್‌ಇಂಡಿಯಾ' ಜೊತೆಗೆ ಮಾತನಾಡಿ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರ ಏನು ಉತ್ತರ ಕೊಡುತ್ತದೆ ಎಂಬುದನ್ನು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+