ಎಎಪಿ ಪರ ತೀರ್ಪು : ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ತಪರಾಕಿ
ಬೆಂಗಳೂರು, ಮಾರ್ಚ್ 23 : ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ನಡೆಸಿದ ಕುತಂತ್ರಕ್ಕೆ ದೆಹಲಿ ಹೈಕೋರ್ಟ್ ಸರಿಯಾದ ತಪರಾಕಿ ಕೊಟ್ಟಿದೆ ಎಂದು ಕರ್ನಾಟಕ ಆಮ್ ಆದ್ಮಿ ಪಕ್ಷ ಹೇಳಿದೆ.
ದೆಹಲಿಯ ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಲಾಭದಾಯಕ ಹುದ್ದೆಯ ನೆಪವೊಡ್ಡಿ ಅನರ್ಹಗೊಳಿಸಿದ ಚುನಾವಣಾ ಆಯೋಗದ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ಕರ್ನಾಟಕ ಆಮ್ ಆದ್ಮಿ ಪಕ್ಷ ದೆಹಲಿ ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದೆ. ದೆಹಲಿಯ ಮತದಾರರು ಕೊಟ್ಟ ಫಲಿತಾಂಶವನ್ನು ಅರಗಿಸಿಕೊಳ್ಳಲಾಗದ ಬಿಜೆಪಿಯ ಕೇಂದ್ರ ಸರ್ಕಾರ ವಾಮಮಾರ್ಗಗಳ ಮೂಲಕ ದೆಹಲಿಯ ಜನಪ್ರಿಯ ಸರ್ಕಾರವನ್ನು ಹಣಿಯಲು ಹೊರಟಿತ್ತು ಎಂದು ಪಕ್ಷ ಆರೋಪಿಸಿದೆ.

ಸತತವಾಗಿ ಕಿರುಕುಳ ಕೊಡುವುದು, ಲೆಫ್ಟಿನೆಂಟ್ ಗವರ್ನರ್ ಮೂಲಕ ದೆಹಲಿ ಸರಕಾರದ ಕೆಲಸಗಳಿಗೆ ತಡೆಯೊಡ್ಡುವುದು, ಅಧಿಕಾರವನ್ನು ಕಿತ್ತುಕೊಳ್ಳಲು ಪ್ರಯತ್ನಿಸುವುದು ಮುಂತಾದವುಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.
ವಿವಿಧ ಸರಕಾರಿ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಪೋಲೀಸರಿಂದ ಸುಳ್ಳು ದೂರು ದಾಖಲಿಸುವುದು, ಸಿಬಿಐ ದಾಳಿ ನಡೆಸಿ ಬೇರೇನೂ ಸಿಗದಿದ್ದಾಗ ಕಸದ ಬುಟ್ಟಿ ಹಾಗೂ ಮಫ್ಲರ್ಗಳನ್ನು ಕೊಂಡೊಯ್ದ ಘಟನೆಗಳೂ ನಡೆದಿವೆ ಎಂದು ಪಕ್ಷ ವ್ಯಂಗ್ಯವಾಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಜನಾದೇಶವನ್ನು ಕೆಡಿಸಲು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ತೋರುತ್ತಾ ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡವಲು ಹೊರಟಿದ್ದ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ತಡೆ ಹಾಕಿದೆ.
ಗುಜರಾತ್ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದ, ಅಂದಿನ ಚುನಾವಣಾ ಆಯೋಗದ ಮುಖ್ಯಸ್ಥ ಎ.ಕೆ ಜ್ಯೋತಿ ತನ್ನ ಅಧಿಕಾರವಧಿ ಮುಗಿಯಲು ಎರಡೇ ದಿನಗಳಿರುವಾಗ ಸಂಶಯಾಸ್ಪದವಾಗಿ ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸುವ ಏಕಪಕ್ಷೀಯ ನಿರ್ಧಾರ ಕೈಗೊಂಡರು.
ಆದರೆ, ಆಮ್ ಆದ್ಮಿ ಪಕ್ಷದ ಶಾಸಕರನ್ನು ಅನರ್ಹತೆಗೆ ಒಳಪಡಿಸುವ ಸಮಯದಲ್ಲಿ ಸಹಜ ನ್ಯಾಯತತ್ವಗಳನ್ನು ಪಾಲಿಸದೇ, ದುರುದ್ದೇಶದ ಕ್ರಮ ಕೈಗೊಂಡಿರುವುದನ್ನು ಹೈಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ.
ಇದು ಕೇಂದ್ರ ಬಿಜೆಪಿ ಸರ್ಕಾರದ ಕುತಂತ್ರವನ್ನು ಮತ್ತು ನಿಜಬಣ್ಣವನ್ನು ಬಯಲು ಮಾಡಿದೆ. ಇನ್ನಾದರೂ ಬಿಜೆಪಿ ಬುದ್ದಿ ಕಲಿತು ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಕೈಬಿಟ್ಟು, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕೆಂದು ಪಕ್ಷ ಆಗ್ರಹಿಸಿದೆ.
ಕರ್ನಾಟಕದ ಮತದಾರರು ತನ್ನ ಸ್ವಾರ್ಥಕ್ಕಾಗಿ ಅಧಿಕಾರಲಾಲಸೆಗಾಗಿ, ಸರಕಾರಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆಂದು ಪಕ್ಷ ವಿಶ್ವಾಸ ವ್ಯಕ್ತಪಡಿಸಿದೆ.












Click it and Unblock the Notifications