ಸಂದರ್ಶನ : ಕೆ.ಜೆ.ಜಾರ್ಜ್ ವಿರುದ್ಧ ಸ್ಪರ್ಧಿಸುವುದು ದೊಡ್ಡ ಸವಾಲು ಅಲ್ಲ!

Recommended Video

      ಆಮ್ ಆದ್ಮಿ ಪಕ್ಷದ ನಾಯಕ ಪೃಥ್ವಿ ರೆಡ್ಡಿ ಸಂದರ್ಶನ | Oneindia Kannada

      ಬೆಂಗಳೂರು, ಮಾರ್ಚ್ 02 : 'ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಸವಾಲು ಎನಿಸುವುದಿಲ್ಲ. ಅವರದ್ದು ಹಣ ಬಲ, ನಮ್ಮದು ಜನ ಬಲ' ಎಂದು ಆಮ್ ಆದ್ಮಿ ಪಕ್ಷದ ನಾಯಕ ಪೃಥ್ವಿ ರೆಡ್ಡಿ ಹೇಳಿದರು.

      ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ, ಪಕ್ಷದ ಕರ್ನಾಟಕ ಘಟಕದ ಸಂಚಾಲಕ ಪೃಥ್ವಿ ರೆಡ್ಡಿ ಅವರು ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಸರ್ವಜ್ಞ ನಗರ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಕ್ಷೇತ್ರ.

      'ಕರ್ನಾಟಕದಲ್ಲಿ ಬದಲಾವಣೆ ಅಂದರೆ ಕಾಂಗ್ರೆಸ್ ಅಥವ ಬಿಜೆಪಿಗೆ ಮತ ಹಾಕುವುದು ಅಲ್ಲ. ಈ ಬಾರಿಯ ಚುನಾವಣೆಯಲ್ಲಿ ಜನರಿಗೆ ಪ್ರಾಮಾಣಿಕವಾದ ಆಯ್ಕೆ ಸಿಕ್ಕಿದೆ. ಅದರಿಂದಾಗಿ ಅವರು ಸಹ ಸಂತೋಷಗೊಂಡಿದ್ದಾರೆ. ಆಮ್ ಆದ್ಮಿ ಪಕ್ಷಕ್ಕೆ ಚುನಾವಣೆಯಲ್ಲಿ ಜನರು ಬೆಂಬಲ ನೀಡಲಿದ್ದಾರೆ' ಎಂದು ಪೃಥ್ವಿ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

      ಆಮ್ ಆದ್ಮಿ ಪಕ್ಷದ ಚುನಾವಣಾ ಸಿದ್ಧತೆ, ಪ್ರಣಾಳಿಕೆ, ಅಭ್ಯರ್ಥಿಗಳ ಆಯ್ಕೆ, ಕರ್ನಾಟಕ ಸರ್ಕಾರದ ಆಡಳಿತ ಮುಂತಾದ ವಿಚಾರಗಳ ಕುರಿತು ಪೃಥ್ವಿ ರೆಡ್ಡಿ ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದರು. ಸಂದರ್ಶನದ ವಿವರಗಳು ಚಿತ್ರಗಳಲ್ಲಿವೆ...

      ಪಕ್ಷದ ಚುನಾವಣಾ ಕೆಲಸಗಳು ಹೇಗೆ ಸಾಗಿವೆ?

      ಪಕ್ಷದ ಚುನಾವಣಾ ಕೆಲಸಗಳು ಹೇಗೆ ಸಾಗಿವೆ?

      ಮೂರು ತಿಂಗಳುಗಳಿಂದ ನಿರಂತರವಾಗಿ ವಿಧಾನಸಭೆ ಚುನಾವಣೆ ಕೆಲಸ ಮಾಡುತ್ತಿದ್ದೇವೆ. ಬೂತ್ ಮ್ಯಾಪಿಂಗ್ ಮಾಡಿಕೊಂಡು ಮನೆ-ಮನೆಗೆ ಹೋಗಿ ನಮ್ಮ ಅಭ್ಯರ್ಥಿ, ಪಕ್ಷ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮಾಡಿರುವ ಜನಪರ ಕೆಲಸಗಳನ್ನು ಜನರಿಗೆ ತಿಳಿಸುತ್ತಿದ್ದೇವೆ. ಸದ್ಯ, ಪ್ರಚಾರಕ್ಕೆ ಉತ್ತಮ ಬೆಂಬಲ ಸಿಕ್ಕಿದೆ. ಕರ್ನಾಟಕದಲ್ಲಿ ಬದಲಾವಣೆ ಅಂದರೆ ಕಾಂಗ್ರೆಸ್ ಅಥವ ಬಿಜೆಪಿಗೆ ಮತ ಹಾಕುವುದು ಮಾತ್ರವಲ್ಲ. ಈ ಬಾರಿ ಜನರಿಗೆ ಪ್ರಾಮಾಣಿಕವಾದ ಆಯ್ಕೆ ಸಿಕ್ಕಿದೆ. ಅದರಿಂದಾಗಿ ಅವರು ಸಹ ಸಂತೋಷಗೊಂಡಿದ್ದಾರೆ.

      ಆಮ್ ಆದ್ಮಿ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ?

      ಆಮ್ ಆದ್ಮಿ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ?

      ಮುಂದಿನ ವಾರ 30 ರಿಂದ 40 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಪಾರಂಪರಿಕ ರಾಜಕಾರಣ ಬಿಟ್ಟು ಜನಪರ ಕೆಲಸ ಮಾಡುವ ಅಭ್ಯರ್ಥಿಗಳನ್ನು ಹುಡುಕಿ, ಕಣಕ್ಕಿಳಿಸಲಾಗುತ್ತಿದೆ. ನಮ್ಮ ಪಕ್ಷದಿಂದ ಅಭ್ಯರ್ಥಿಯಾಗಿ ನಿಲ್ಲುವ ವ್ಯಕ್ತಿಗಳ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಇರಬಾರದು. ಆದ್ದರಿಂದ, ಅಭ್ಯರ್ಥಿಗಳ ಆಯ್ಕೆಯಾದರೂ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಹೆಸರನ್ನು ಅಂತಿಮಗೊಳಿಸಲಾಗುತ್ತಿದೆ.

      ಎಎಪಿ ಹೋರಾಟ ಯಾವ ಪಕ್ಷದ ವಿರುದ್ಧ?

      ಎಎಪಿ ಹೋರಾಟ ಯಾವ ಪಕ್ಷದ ವಿರುದ್ಧ?

      ನಮ್ಮ ರಾಜ್ಯದ ಬಗ್ಗೆ ಮಾತನಾಡುವುದಾದರೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಅವರೆಲ್ಲರದ್ದು ಬೇರೆ-ಬೇರೆ ಪಕ್ಷವಾಗಿರಬಹುದು. ಆದರೆ, ರಾಜಕೀಯ ಒಂದೇ. ಜನಪರ ಕೆಲಸ ಮಾಡುವುದನ್ನು ಬಿಟ್ಟು, ಲೂಟಿ ಮಾಡುವ ಎಲ್ಲಾ ಪಕ್ಷದ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ.

      ಎಎಪಿ ಕಾಂಗ್ರೆಸ್ ಸರ್ಕಾರಕ್ಕೆ ಕೊಡುವ ಅಂಕ ಎಷ್ಟು?

      ಎಎಪಿ ಕಾಂಗ್ರೆಸ್ ಸರ್ಕಾರಕ್ಕೆ ಕೊಡುವ ಅಂಕ ಎಷ್ಟು?

      ನಾಲ್ಕೂವರೆ ವರ್ಷದ ಕರ್ನಾಟಕ ಸರ್ಕಾರಕ್ಕೆ 2ರಿಂದ 3 ಅಂಕ ನೀಡುವೆ. ಸರ್ಕಾರ ಏನೂ ಕೆಲಸ ಮಾಡಿಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ. ಕಳೆದ ಚುನಾವಣೆಯಲ್ಲಿ ಅವರು ಲೋಕಾಯುಕ್ತದಿಂದಾಗಿ ಗೆದ್ದು ಬಂದರು.

      ಆದರೆ, ಅಧಿಕಾರಕ್ಕೆ ಬಂದ ಮೇಲೆ ಲೋಕಾಯುಕ್ತವನ್ನು ಮುಚ್ಚಿದರು. ಕರ್ನಾಟಕ ಸರ್ಕಾರದ ಕೆಲವು ಭಾಗ್ಯಗಳು ಗ್ರಾಮೀಣ ಭಾಗದಲ್ಲಿ ಸಹಾಯಕವಾಗಿದೆ. ಸ್ಪಷ್ಟ ಬಹುಮತವನ್ನು ಹೊಂದಿರುವ ಸರ್ಕಾರ ಇನ್ನಷ್ಟು ಕೆಲಸಗಳನ್ನು ಮಾಡಬಹುದಿತ್ತು.


      ಚುನಾವಣೆ ಎದುರಾಗುತ್ತಿರುವಾಗ ನವ ಕರ್ನಾಟಕ ನಿರ್ಮಾಣ ಮಾಡುತ್ತೇವೆ ಎಂದು ಜನರಿಗೆ ಆಶ್ವಾಸನೆ ಕೊಡುತ್ತಿದ್ದಾರೆ. ಇದು ಜನರಿಗೆ ಅರ್ಥವಾಗುತ್ತದೆ, ನೀವು ಮತಕ್ಕಾಗಿ ಎಲ್ಲಾ ಮಾಡುತ್ತಿದ್ದೀರಿ. ಮತದಾರರಿಗಾಗಿ ಏನೂ ಮಾಡುತ್ತಿಲ್ಲ ಎಂದು.

      ಬೆಂಗಳೂರು ನಗರ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಭಷ್ಟಾಚಾರದಲ್ಲಿ ನಮ್ಮ ರಾಜ್ಯ ನಂಬರ್ 1, ರೈತರ ಆತ್ಮಹತ್ಯೆಯಲ್ಲಿ ನಂಬರ್ 2. ಇಂತಹ ಆಡಳಿತ ನೋಡಿದರೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಂತಹ ವ್ಯತ್ಯಾವವಿಲ್ಲ ಎಂದು ಅನ್ನಿಸುತ್ತದೆ.

      ಯಾವ-ಯಾವ ನಾಯಕರ ವಿರುದ್ಧ ಎಎಪಿ ಸ್ಪರ್ಧೆ?

      ಯಾವ-ಯಾವ ನಾಯಕರ ವಿರುದ್ಧ ಎಎಪಿ ಸ್ಪರ್ಧೆ?

      ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಸರ್ವಜ್ಞ ನಗರದಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಕೆ.ಆರ್.ಪುರ ಕ್ಷೇತ್ರದಲ್ಲಿ ಭೈರತಿ ಬಸವರಾಜ್ ವಿರುದ್ಧ ದೇವರಾಜ್ ಅರಸ್ ಕುಟುಂಬದ ಲಿಂಗರಾಜ್ ಅರಸ್ ಸ್ಪರ್ಧೆ ಮಾಡಲಿದ್ದಾರೆ ಹೆಬ್ಬಾಳ, ಸಿ.ವಿ.ರಾಮನ್ ನಗರ, ಶಿಕಾರಿಪುರ ಹೀಗೆ ಹಲವು ಕ್ಷೇತ್ರಗಳಲ್ಲಿ ಅತೀ ಭ್ರಷ್ಟ ನಾಯಕರ ವಿರುದ್ಧ ಸ್ಪರ್ಧೆ ಮಾಡಲಿದ್ದೇವೆ.


      ಕಳೆದ ವಾರದಿಂದ ಶಾಂತಿನಗರ ಕ್ಷೇತ್ರದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಎನ್‌.ಎ.ಹ್ಯಾರೀಸ್ ವಿರುದ್ಧ ಶಾಂತಿನಗರದಲ್ಲಿ ಮಾಜಿ ಐಎಎಸ್ ಅಧಿಕಾರಿ ರೇಣುಕಾ ವಿಶ್ವನಾಥ್ ಸ್ಪರ್ಧಿಸಲಿದ್ದಾರೆ. ನಮ್ಮ ರಾಜ್ಯದ ಮೊದಲ ಮಹಿಳಾ ಡಿಸಿ ಆಗಿದ್ದ ಅವರು, ಕೇಂದ್ರ ಸರ್ಕಾರದ ಪ್ಲಾನಿಂಗ್ ಕಮೀಷನ್‌ನಲ್ಲಿಯೂ ಕೆಲಸ ಮಾಡಿದ್ದಾರೆ.


      ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರ ವಿರುದ್ಧ ಯುವಕ ಮತ್ತು ಏರೋನಾಟಿಕಲ್ ಇಂಜಿನಿಯರ್ ಸ್ಪರ್ಧೆ ಮಾಡಲಿದ್ದಾರೆ.

      ಎಎಪಿ ಪ್ರಣಾಳಿಕೆ ಹೇಗಿರುತ್ತದೆ?

      ಎಎಪಿ ಪ್ರಣಾಳಿಕೆ ಹೇಗಿರುತ್ತದೆ?

      ಪ್ರಚಾರದ ಜೊತೆಗೆ ಪ್ರಣಾಳಿಕೆಯ ಕೆಲಸವನ್ನು ನಾವು ಆರಂಭಿಸಿದ್ದೇವೆ. 'ಕರ್ನಾಟಕ ಚರ್ಚೆ' ಎಂಬ ಶೀರ್ಷಿಕೆಯಡಿ ರಾಜ್ಯಕ್ಕೆ ಒಂದು ಪ್ರಣಾಳಿಕೆ ಮಾಡಲಿದ್ದೇವೆ. ರೈತರು, ಯುವಕರು, ಮಹಿಳೆಯರು ಹೀಗೆ ಹಲವರ ಅಭಿಪ್ರಾಯ ಸಂಗ್ರಹಣೆ ಮಾಡಿ ಅದನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗುತ್ತಿದೆ.


      ಜನರ ಜೊತೆ ಮಾತುಕತೆ ನಡೆಸಿ, ಅವರಿಗೆ ಏನು ಬೇಕು? ಎಂಬುದನ್ನು ತಿಳಿದುಕೊಂಡು ಪ್ರಣಾಳಿಕೆ ರಚಿಸಲಾಗುತ್ತಿದೆ. ಬೆಂಗಳೂರು ನಗರಕ್ಕೆ ಒಂದು ಪ್ರಣಾಳಿಕೆ, ಒಂದು ಮಹಿಳಾ ಪ್ರಣಾಳಿಕೆ, ಯುವಕರ ಪ್ರಣಾಳಿಕೆ ಬಿಡುಗಡೆ ಮಾಡಲಾಗುತ್ತದೆ.

      ಸರ್ವಜ್ಞ ನಗರ ಆಯ್ಕೆ ಮಾಡಿಕೊಂಡಿದ್ದು ಏಕೆ?

      ಸರ್ವಜ್ಞ ನಗರ ಆಯ್ಕೆ ಮಾಡಿಕೊಂಡಿದ್ದು ಏಕೆ?

      ನಾನು ಸರ್ವಜ್ಞ ನಗರ ಕ್ಷೇತ್ರದವನು. ನಾವು ಮಾಡುವ ರಾಜಕಾರಣದಲ್ಲಿ ಪ್ರಭಾವಶಾಲಿ ವ್ಯಕ್ತಿಗಳ ವಿರುದ್ಧ ನಿಂತು ಜನರಿಗೆ ನಿಮಗೆ ಬೇರೆ ಆಯ್ಕೆ ಎಂದು ತೋರಿಸಬೇಕು. ಕ್ಷೇತ್ರದಲ್ಲಿ ಕೆ.ಜೆ.ಜಾರ್ಜ್ ಅವರ ವಿರುದ್ಧ ಸಾಕಷ್ಟು ಆಕ್ರೋಶವಿದೆ. ಬೆಂಗಳೂರು ಅಭಿವೃದ್ಧಿ ಸಚಿವರಾದ ಜಾರ್ಜ್, ಅವರ ಅಭಿವೃದ್ಧಿ ಮಾಡಿಕೊಂಡರು ಬಿಟ್ಟರೆ ಕ್ಷೇತ್ರದ ಕಡೆ ತಿರುಗಿ ನೋಡಿಲ್ಲ.


      ಉದ್ಯಮ ಮಾಡುವುದು ತಪ್ಪಲ್ಲ. ಆದರೆ, ಜನರ ಸೇವೆಗೆಂದು ರಾಜಕಾರಣಕ್ಕೆ ಬಂದು ಲೂಟಿ ಮಾಡುವುದು ತಪ್ಪು. ಬೆಂಗಳೂರು ನಗರದ ಪ್ರತಿ ಕ್ಷೇತ್ರಕ್ಕೆ ಬಿಬಿಎಂಪಿ, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಇಷ್ಟೊಂದು ಅನುದಾನ ಬರುತ್ತದೆ. ಆದರೆ, ಅದು ಹೇಗೆ ಖರ್ಚಾಗುತ್ತದೆ? ಎಂದು ಯಾರೂ ಕೇಳಿಲ್ಲ.


      ಸರ್ವಜ್ಞ ನಗರ ಕ್ಷೇತ್ರದ 8 ವಾರ್ಡ್‌ಗಳ ಪೈಕಿ 4ರಲ್ಲಿ ವಾರಕ್ಕೆ ಎರಡು ಅಥವ ಮೂರು ಸಲ ನೀರು ಬರುತ್ತದೆ. ನೀರಿನ ವಾಲ್ ತೆರೆಯಲು ಮನೆ-ಮನೆಯಿಂದ 30 ರೂ. ಸಂಗ್ರಹಣೆ ಮಾಡಲಾಗುತ್ತದೆ. ಕ್ಷೇತ್ರದ ಜನರು ಇವರ ಆಡಳಿತ ನೋಡಿ ಬೇಸತ್ತಿದ್ದು, ನಾವು ಪರ್ಯಾವಯವನ್ನು ಮುಂದಿಡುತ್ತಿದ್ದೇವೆ.

      ಜಾರ್ಜ್ ವಿರುದ್ಧದ ಸ್ಪರ್ಧೆ ಚಾಲೆಂಜ್ ಅಲ್ಲವೇ?

      ಜಾರ್ಜ್ ವಿರುದ್ಧದ ಸ್ಪರ್ಧೆ ಚಾಲೆಂಜ್ ಅಲ್ಲವೇ?

      ಕೆ.ಜೆ.ಜಾರ್ಜ್ ಅವರ ವಿರುದ್ಧದ ಹೋರಾಟ ದೊಡ್ಡ ಸವಾಲು ಎಂದು ನನಗೆ ಅನ್ನಿಸುವುದಿಲ್ಲ. ನಾವು ಮತದಾರರನ್ನು ದೂರಬಾರದು. ಅವರಿಗೆ ಆಯ್ಕೆ ನೀಡಿದಾಗ ಅವರು ತಮ್ಮ ಮತವನ್ನು ಸರಿಯಾದ ವ್ಯಕ್ತಿಗೆ ಹಾಕುತ್ತಾರೆ. ಇಷ್ಟು ದಿನ ಇಬ್ಬರು ಕಳ್ಳರು ನಿಂತಾಗ ಹಣ, ಜಾತಿ ನೋಡಿ ಮತ ಹಾಕುತ್ತಿದ್ದರು. ಈಗ ಪ್ರಾಮಾಣಿಕ ಅಭ್ಯರ್ಥಿ ಸಿಕ್ಕಾಗ ಅವರಿಗೂ ಸಂಸತವಾಗುತ್ತದೆ.


      ನಾವು ಜನರಿಂದಲೇ 100 ರೂ. ಹಣ ಸಂಗ್ರಹ ಮಾಡಿ ಪ್ರಚಾರ ಮಾಡುತ್ತಿದ್ದೇವೆ. ಅವರು 1 ವೋಟಿಗೆ 10 ಸಾವಿರ ರೂ. ಕೊಡಲಿ. ನಮ್ಮ ಪ್ರಚಾರಕ್ಕೆ 10 ರೂ. ಕೊಟ್ಟ ಜನರು ನಮ್ಮನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ.

      ಎಎಪಿಯನ್ನು ಚುನಾವಣೆಯಲ್ಲಿ ಏಕೆ ಬೆಂಬಲಿಸಬೇಕು?

      ಎಎಪಿಯನ್ನು ಚುನಾವಣೆಯಲ್ಲಿ ಏಕೆ ಬೆಂಬಲಿಸಬೇಕು?

      5 ವರ್ಷದ ಹಿಂದೆ ನಾವು ಪ್ರಾಮಾಣಿಕ ರಾಜಕಾರಣದ ಬಗ್ಗೆ ಮಾತನಾಡಿದ್ದು ಕನಸಾಗಿತ್ತು. ಆದರೆ, ಈಗ ಜನರು ಬೆಂಬಲ ಕೊಟ್ಟು ಅದನ್ನು ನನಸು ಮಾಡಿದ್ದಾರೆ. ಮೂರು ವರ್ಷದಿಂದ ನಾವು ದೆಹಲಿಯಲ್ಲಿ ಆಡಳಿತ ಮಾಡುತ್ತಿದ್ದೇವೆ. ಹಲವಾರು ಜನಪರ ಕೆಲಸಗಳನ್ನು ಮಾಡಿದ್ದೇವೆ. ಪ್ರಾಮಾಣಿಕರಿಗೆ ಅಧಿಕಾರ ಕೊಟ್ಟರೆ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಜನರಿಗೆ ಬಂದಿದೆ. ಕರ್ನಾಟಕದ ಜನರೂ ಇದೇ ನಂಬಿಕೆ ಮೇಲೆ ನಮ್ಮನ್ನು ಬೆಂಬಲಿಸಲಿದ್ದಾರೆ ಎಂಬ ಆಶಯ ನಮ್ಮದು.

      ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರ್ತಾರಾ?

      ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರ್ತಾರಾ?

      ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಂತೆ ನಾವು ರಾಷ್ಟ್ರೀಯ ನಾಯಕರನ್ನು ಕರೆಸಿ ಪ್ರಚಾರ ಮಾಡಿಸುವುದಿಲ್ಲ. ನರೇಂದ್ರ ಮೋದಿ ಬಂದರೆ ಮಾತ್ರ ಗೆಲುವು ಎಂಬ ಬಿಜೆಪಿ ಪಕ್ಷದ ಥರದ ವಾತಾವರಣ ನಮ್ಮಲ್ಲಿ ಇಲ್ಲ. ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಆಗಮಿಸಲಿದ್ದಾರೆ. ಅಕ್ಕ-ಪಕ್ಕದ ರಾಜ್ಯದ ನಿವಾಸಿಗಳು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇದ್ದಾರೆ. ಕೇರಳ, ತಮಿಳುನಾಡು, ಮುಂಬೈ, ಮಹಾರಾಷ್ಟ್ರ, ತೆಲಂಗಾಣದಿಂದಲೂ ನಮ್ಮ ಪಕ್ಷದ ನಾಯಕರು ಇಲ್ಲಿಗೆ ಬಂದು ಪ್ರಚಾರ ನಡೆಸಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+