ಎಲ್ಲ ಪಕ್ಷಗಳಿಗೆ ಮರ್ಮಾಘಾತ : ಕರ್ನಾಟಕ ಆಪ್ ಶಪಥ
ಬೆಂಗಳೂರು, ಡಿಸೆಂಬರ್. 08 : 'ಯಾವುದೇ ಅಬ್ಬರವಿಲ್ಲದಂತೆ ಪ್ರಚಾರ ನಡೆಸಿ 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಗೂ ಮರ್ಮಾಘಾತ ನೀಡುತ್ತೇವೆ' ಎಂದು ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕದ ಸಹ ಸಹ ಸಂಚಾಲಕ ಸಿ.ಶಿವಕುಮಾರ್ ಹೇಳಿದರು.
'ಬೆಂಗಳೂರಿನ 28 ಕ್ಷೇತ್ರಗಳಲ್ಲಿಯೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ರಾಜ್ಯದ 70ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇವೆ. 30 ಶಾಸಕರನ್ನು ವಿಧಾನಸಭೆ ಆರಿಸಿ ಕಳಿಸುವುದು ನಮ್ಮ ಗುರಿ' ಎಂದರು.
ಕರ್ನಾಟಕದ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಕ್ಷ ಚುನಾವಣಾ ಪ್ರಚಾರಕ್ಕೆ ಚಾಲನೆ ಕೊಟ್ಟಿದೆ. ಭ್ರಷ್ಟಾಚಾರ ವಿರೋಧಿ ಹೋರಾಟದ ಸಮಯದಿಂದಲೂ ಪಕ್ಷಕ್ಕೆ ರಾಜ್ಯದಲ್ಲಿ ಉತ್ತಮ ಬೆಂಬಲವಿದೆ. ಈ ಬೆಂಬಲವನ್ನು ಉಪಯೋಗಿಸಿಕೊಂಡು ಶಾಸಕರನ್ನು ಆರಿಸಿ ಕಳಿಸಲು ಪಕ್ಷ ತಂತ್ರ ರೂಪಿಸಿದೆ.
ಪಕ್ಷದ ಚುನಾವಣೆ ಸಿದ್ಧತೆ, ಪ್ರಚಾರ ಕಾರ್ಯ, ಅಭ್ಯರ್ಥಿಗಳ ಆಯ್ಕೆ ಮುಂತಾದ ವಿಚಾರಗಳ ಕುರಿತು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ ಸಹ ಸಂಚಾಲಕ ಸಿ.ಶಿವಕುಮಾರ್ ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ್ದಾರೆ. ಸಂದರ್ಶನದ ವಿವರಗಳು ಇಲ್ಲಿವೆ.....

ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದೆಯೇ?
ಚುನಾವಣೆಗಾಗಿ ತಂಡಗಳನ್ನು ರಚನೆ ಮಾಡಲಾಗಿದೆ. ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಗುಪ್ತಾ ಅವರು ಕರ್ನಾಟಕದ ಚುನಾವಣೆಯ ವಿಶೇಷ ವೀಕ್ಷಕರಾಗಿದ್ದಾರೆ. ಅವರು ರಾಜ್ಯಕ್ಕೆ ಆಗಮಿಸಿದ್ದು, ಧಾರವಾಡ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಕರ್ನಾಟದ ಎಲ್ಲಾ ಭಾಗಗಳಲ್ಲಿ ಸಂಚಾರ ನಡೆಸಲಿದ್ದಾರೆ. ಕೆಲವು ಸಂಘಟನೆಗಳು, ಕೆಲವು ವ್ಯಕ್ತಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಅಭ್ಯರ್ಥಿಯಾಗಲು ಇಚ್ಛಿಸುವ ವ್ಯಕ್ತಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ.

ಎಷ್ಟು ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಲಿದೆ?
ಪ್ರಸ್ತುತ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. 25 ಅಭ್ಯರ್ಥಿಗಳು ಅಂತಿಮವಾಗಿದ್ದಾರೆ. ಬೆಂಗಳೂರು ನಗರದ ಎಲ್ಲಾ 28 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಜಿಲ್ಲೆಗಳಲ್ಲಿ ಹೆಚ್ಚು ಶಕ್ತಿ ಇರುವ ಕಡೆ ಎಲ್ಲಾ ಕ್ಷೇತ್ರದಲ್ಲಿ, ಉಳಿದ ಕಡೆ 2 ರಿಂದ 3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

70 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆಯೇ?
ಗೋವಾ, ಪಂಜಾಬ್ ವಿಧಾನಸಭೆ ಚುನಾವಣೆಗೂ ಮೊದಲು 224 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕು ಎಂದು ಕೊಂಡಿದ್ದೆವು. ಈಗ 70 ಕ್ಷೇತ್ರಗಳು ಮಾತ್ರವಲ್ಲ. ಹಲವು ಕಡೆ ನಮ್ಮ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಸ್ಪರ್ಧಿಸುವ ಕ್ಷೇತ್ರಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲೂ ಬಹುದು. ಸುಮ್ಮನೆ ಸ್ಪರ್ಧೆ ಮಾಡಬೇಕು ಎಂದು ಸ್ಪರ್ಧಿಸುತ್ತಿಲ್ಲ. ಗೆಲ್ಲುವ ಕ್ಷೇತ್ರಗಳ ಕಡೆ ಹೆಚ್ಚು ಗಮನ ಹರಿಸಿದ್ದೇವೆ. 35 ಶಾಸಕರನ್ನು ಗೆಲ್ಲಿಸುವ ಗುರಿ ಇದೆ.

ಏಕಾಂಗಿಯಾಗಿ ಸ್ಪರ್ಧೆಯೇ?
ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಬಿಟ್ಟು ಕೆಲವು ಚಿಕ್ಕಪುಟ್ಟ ಸಂಘಟನೆಗಳು, ಪಕ್ಷಗಳ ಜೊತೆ ಮಾತುಕತೆ ನಡೆಯುತ್ತಿದೆ. ಮಹಾಮೈತ್ರಿ ಒಕ್ಕೂಟದ ಜೊತೆ ಡಿ.16 ರಂದು ಮಾತುಕತೆ ನಿಗದಿಯಾಗಿದೆ. ರೈತರ ಮತಗಳು ಹಂಚಿಕೆ ಆಗಬಾರದು ಎಂಬುದು ನಮ್ಮ ಕಾಳಜಿ. ರೈತ ಮುಖಂಡರು ಜೊತೆಗೂ ಮಾತುಕತೆ ನಡೆಯುತ್ತಿದೆ. ಯಾವುದೇ ಅಬ್ಬರವಿಲ್ಲದೇ ಎಲ್ಲಾ ಪಕ್ಷಗಳಿಗೂ ಮರ್ಮಾಘಾತ ಕೊಡುವುದಂತೂ ಖಚಿತ.

ಪಕ್ಷ ಪ್ರಚಾರ ಆರಂಭಿಸಿದೆಯೇ?
ಹೌದು, ಕಳೆದ ಭಾನುವಾರ ಪಕ್ಷ ಅಧಿಕೃತವಾಗಿ 2018ರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ. ನಿವೃತ್ತ ಐಎಎಸ್ ಅಧಿಕಾರಿ ರೇಣುಕಾ ಅವರು ಬೆಂಗಳೂರಿನಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ನಾವು ಗುರುತಿಸಿರುವ 70 ಕ್ಷೇತ್ರಗಳಲ್ಲಿ ಮನೆ-ಮನೆ ಪ್ರಚಾರವನ್ನು ಈಗಾಗಲೇ ಆರಂಭಿಸಲಾಗಿದೆ. ಪ್ರಚಾರ ಸಮೀಕ್ಷೆಯಂತೆಯೂ ನಡೆಯುತ್ತಿದೆ. ನಮಗೆ ಬೆಂಬಲ ಹೇಗಿದೆ? ಎಂದು ಕಾರ್ಯಕರ್ತರ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದೇವೆ.

ಪಕ್ಷದ ಪ್ರಣಾಳಿಕೆ ಹೇಗಿರುತ್ತದೆ?
ದೆಹಲಿ ಮತ್ತು ಪಂಜಾಬ್ ಚುನಾವಣೆ ಮಾದರಿಯಲ್ಲಿ ಕ್ಷೇತ್ರಕ್ಕೊಂದು ಪ್ರಣಾಳಿಕೆ ನಾವು ಮಾಡುತ್ತಿದ್ದೇವೆ. ಆ ಕ್ಷೇತ್ರಕ್ಕೆ, ಜಿಲ್ಲೆಗೆ, ರಾಜ್ಯಕ್ಕೆ ಹೀಗೆ ಪಕ್ಷದ ಪ್ರಣಾಳಿಕೆ ಇರುತ್ತದೆ. ನಮ್ಮ ಪ್ರಚಾರದಲ್ಲಿ ಅಬ್ಬರ ಇರುವುದಿಲ್ಲ. ಮನೆ-ಮನೆ ಪ್ರಚಾರ ನಡೆಸುತ್ತೇವೆ. ಪ್ರಭಾವಿ ವ್ಯಕ್ತಿಗಳನ್ನು ನಾವು ಕಣಕ್ಕಿಳಿಸುವುದಿಲ್ಲ. ಪ್ರಚಾರಕ್ಕೆ ಹೋಗುವ ಕಾರ್ಯಕರ್ತರು ಬರೀ ಪಾಂಪ್ಲೆಟ್ ಕೊಟ್ಟು ಮುಂದೆ ಹೋಗುವುದಿಲ್ಲ. ಜನರ ಹತ್ತಿರ ಕನಿಷ್ಠ 5 ನಿಮಿಷ ಮಾತನಾಡುತ್ತಾರೆ. ಆಡಳಿತದ ವೈಫಲ್ಯತೆಯನ್ನು ತಿಳಿಸಿ ಬದಲಾವಣೆ ಏಕೆ ಬೇಕು? ಎಂದು ತಿಳಿಸುತ್ತಾರೆ.

ಪ್ರಚಾರಕ್ಕೆ ಅರವಿಂದ್ ಕೇಜ್ರಿವಾಲ್ ಬರ್ತಾರಾ?
ಗುಜರಾತ್ ಚುನಾವಣೆಗಳು ಮುಗಿದ ನಂತರ ಆಶುತೋಷ್, ಸಂಜಯ್ ಸಿಂಗ್ ರಾಜ್ಯಕ್ಕೆ ಬರುತ್ತಾರೆ. ಇಲ್ಲೇ ವಾಸ್ತವ್ಯ ಹೂಡಿ ಚುನಾವಣಾ ಕಾರ್ಯ ಆರಂಭಿಸುತ್ತಾರೆ. ಅರವಿಂದ್ ಅವರು ಚುನಾವಣೆ ಹತ್ತಿರವಿರುವಾಗ ಬರುತ್ತಾರೆ. ದೆಹಲಿ ನಂತರ ಪಕ್ಷಕ್ಕೆ ಉತ್ತಮ ಬೆಂಬಲವಿರುವ ರಾಜ್ಯ ಕರ್ನಾಟಕ. ಆದ್ದರಿಂದ, ಇದು ನಮಗೆ ಮಹತ್ವದ್ದು.












Click it and Unblock the Notifications