ಕುಡುಕರಿಗೂ ಬಂತು ಅಚ್ಛೇ ದಿನ್: ನಿಂತಲ್ಲೇ ಅಮಲೇರಿಸುವ ಸುದ್ದಿ!
ಬೆಂಗಳೂರು, ಆಗಸ್ಟ್ 31: ಇನ್ನು ಮುಂದೆ ಸೀದಾ ಮದ್ಯದಂಗಡಿಗೆ ಹೋಗಿ ದುಡ್ಡುಕೊಟ್ಟು ಮದ್ಯ ಖರೀದಿ ಮಾಡುವಂತಿಲ್ಲ. ನಿಮ್ಮ ಜೇಬಿನಲ್ಲಿ ಹಣದ ಜತೆಗೆ ಆಧಾರ್ ಕೂಡ ಇರಲೇಬೇಕು.
ಮದ್ಯ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚರ್ಚೆಗಳು ನಡೆಯುತ್ತಿವೆ. ಮದ್ಯ ಖರೀದಿಗೆ ಆಧಾರ್ ಕಡ್ಡಾಯ ಮಾಡುವ ಸಂಬಂಧ ಅಭಿಪ್ರಾಯ ತಿಳಿಸುವಂತೆ ಅಬಕಾರಿ ಇಲಾಖೆಯ ಕಾರ್ಯದರ್ಶಿಯವರು ಅಬಕಾರಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ.
ಪರಿಸರದ ಕುರಿತ ಕಾಳಜಿಯಿಂದ ಎನ್ಜಿಓ ಒಂದು ನೀಡಿರುವ ಶಿಫಾರಸಿನಂತೆ ಮದ್ಯ ಖರೀದಿಗೆ ಆಧಾರ್ ಕಡ್ಡಾಯ ಮಾಡುವ ಉದ್ದೇಶಕ್ಕೆ ಬರಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಶಿಫಾರಸುಗಳಲ್ಲಿ ಕೆಲವು ಗಂಭೀರವಾಗಿದ್ದರೂ, ಅನೇಕ ಶಿಫಾರಸುಗಳು ತೀರಾ ಹಾಸ್ಯಾಸ್ಪದವಾಗಿವೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ಈ ಶಿಫಾರಸುಗಳಲ್ಲಿ ಕೆಲವು ಮದ್ಯಪ್ರಿಯರಿಗೆ ಒಂದಷ್ಟು ಕಿರಿಕಿರಿ ಉಂಟುಮಾಡಬಹುದು. ಹೆಚ್ಚಿನ ಶಿಫಾರಸುಗಳು ಅವರಿಗೆ ಖುಷಿ ನೀಡುವಂತಿವೆ.

ಟೆಟ್ರಾ ಪ್ಯಾಕ್, ಬಾಟಲಿಯಿಂದ ಹಾನಿ
ಮದ್ಯದ ಟೆಟ್ರಾ ಪ್ಯಾಕ್ಗಳು ಮತ್ತು ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಕೆರೆಗಳು, ನದಿಗಳು, ಉದ್ಯಾನಗಳು, ರಸ್ತೆ ಬದಿ ಹೀಗೆ ಎಲ್ಲ ಕಡೆಯೂ ಮದ್ಯದ ಬಾಟಲಿಗಳು ಕಾಣಿಸುತ್ತಿವೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಅಲ್ಲದೆ, ಪ್ರಾಣಿಗಳಿಗೆ ಅಪಾಯ ತಂದೊಡ್ಡುತ್ತಿರುವ ಅನೇಕ ದೂರುಗಳು ಕೂಡ ಬಂದಿವೆ. ಹೀಗಾಗಿ ಅದನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಆಧಾರ್ ಕಡ್ಡಾಯ ಮಾಡಿ
ಮಂಗಳೂರಿನ 'ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ'ವು ಮದ್ಯದ ಬಾಟಲಿಗಳನ್ನು ಎಸೆಯುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಿತ್ತು. ಬಳಿಕ ಅದರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ, ಟೆಟ್ರಾ ಪ್ಯಾಕ್ ಹಾಗೂ ಬಾಟಲಿಗಳಿಂದ ಆಗುತ್ತಿರುವ ಹಾನಿ ತಡೆಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿತ್ತು. ಅದರೊಂದಿಗೆ ಕೆಲವು ಶಿಫಾರಸುಗಳನ್ನು ನೀಡಿತ್ತು. ಅವುಗಳಲ್ಲಿ ಮದ್ಯ ಖರೀದಿಗೆ ಆಧಾರ್ ಕಡ್ಡಾಯ ಮಾಡುವುದೂ ಒಂದಾಗಿದೆ.

ಹಳೆ ಬಾಟಲಿಗೆ ಹೊಸ ಮದ್ಯ!
ಮದ್ಯ ಬಾಟಲಿಗೆ ಆಧಾರ್ ಕಡ್ಡಾಯ ಮಾಡಿದರೆ ಖರೀದಿದಾರರಲ್ಲಿ ಅದನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂಬ ಪ್ರಜ್ಞೆ ಮೂಡಬಹುದು. ಖರೀದಿದಾರರ ವಿವರಗಳು ಸರ್ಕಾರಕ್ಕೆ ಲಭ್ಯವಾಗಲಿದೆ. ಈ ಮೊದಲು ಖರೀದಿ ಮಾಡಿದ ಬಾಟಲಿಯನ್ನು ವಾಪಸ್ ತಂದುಕೊಟ್ಟರೆ ಮಾತ್ರ ಹೊಸ ಬಾಟಲಿ ನೀಡುವ ನಿಯಮ ಜಾರಿಗೆ ಸಹ ಸಲಹೆ ನೀಡಲಾಗಿದೆ.

ಮದ್ಯದ ಅಂಗಡಿಗಳಿಗೆ ಬರೆ
ಮದ್ಯದಂಗಡಿಯವರು ಮದ್ಯ ಮಾರಾಟ ಮಾಡುವ ಮೊದಲು ವ್ಯಕ್ತಿಯ ಆಧಾರ್ ಪಡೆದು ಕಂಪ್ಯೂಟರ್ನಲ್ಲಿ ಮಾಹಿತಿ ದಾಖಲಿಸಬೇಕು. ಎಲ್ಲೆಂದರಲ್ಲಿ ಮದ್ಯದ ಬಾಟಲಿ ಬಿದ್ದಿದ್ದರೆ, ಅವುಗಳ ಬಾರ್ ಕೋಡ್ ಸ್ಕ್ಯಾನ್ ಮಾಡಬೇಕು. ಬಾಟಲಿಯನ್ನು ಮಾರಾಟ ಮಾಡಿದ ಅಂಗಡಿಗೆ ದಂಡ ವಿಧಿಸಬೇಕು. ಅವರ ಪರವಾನಗಿ ರದ್ದುಗೊಳಿಸಬೇಕು.

ಅಬಕಾರಿ ಇಲಾಖೆಗೆ ಡ್ರಾಪ್ ಸರ್ವೀಸ್ ಕೆಲಸ!
ಮದ್ಯ ಕುಡಿದು ಸಾರ್ವಜನಿಕ ಸ್ಥಳದಲ್ಲಿ ಬೀಳುವವರನ್ನು ಅಬಕಾರಿ ಇಲಾಖೆಯವರೇ ತಮ್ಮ ವಾಹನದಲ್ಲಿ ಸುರಕ್ಷಿತವಾಗಿ ಮತ್ತು ಗೌರವಯುತವಾಗಿ ಅವರ ಮನೆಗೆ ಕರೆದೊಯ್ಯಬೇಕು. ಅವರು ದುಡಿದ ಎಲ್ಲ ಹಣವನ್ನೂ ಮದ್ಯಕ್ಕಾಗಿ ಖರ್ಚು ಮಾಡಿದರೆ ಅವರ ಕುಟುಂಬಕ್ಕೆ ಬೇಕಾಗುವ ದಿನಸಿ ಸಾಮಗ್ರಿಗಳನ್ನು ಇಲಾಖೆಯೇ ಉಚಿತವಾಗಿ ನೀಡಬೇಕು.












Click it and Unblock the Notifications