ಕುಂದಾಪುರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾವು
ಕುಂದಾಪುರ, ಜನವರಿ, 23: ದ್ವಿತೀಯ ಪಿಯುಸಿ ಪರೀಕ್ಷೆಗೆ ಓದುತ್ತಿದ್ದ ವಿದ್ಯಾರ್ಥಿಯೋರ್ವ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಕೊಡಪಾಡಿಯಲ್ಲಿ ನಡೆದಿದೆ.
ಕೊಡಪಾಡಿಯ ಕಂಚುಗೋಡು ನಿವಾಸಿಯಾದ ರಿಕ್ಸಾನ್ ಡಾಯಾಸ್ (17) ನಿಗೂಢವಾಗಿ ಸಾವನ್ನಪ್ಪಿದ ದುರ್ದೈವಿ. ಈತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ವಾಣಿಜ್ಯ ವಿಷಯದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದನು.[ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬಂತು ಮೊಬೈಲ್ ಆಪ್]
ಏನಿದು ಘಟನೆ?
ಕೊಡಪಾಡಿಯ ಕಂಚುಗೋಡು ನಿವಾಸಿ ವಾಲ್ಟರ್ ಡಾಯಸ್ ಹಾಗೂ ಜನಿಟಾ ಡಾಯಸ್ ಇವರ ಪುತ್ರನಾಗಿರುವ ರಿಕ್ಸಾನ್ ಡಾಯಸ್ ಸರಸ್ವತಿ ವಿದ್ಯಾಲಯದ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ. ಪರೀಕ್ಷೆಗೆ ತಯಾರಾಗಲು ಶುಕ್ರವಾರ ಕಾಲೇಜಿಗೆ ರಜೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಿಕ್ಸಾನ್ ಮನೆಯಲ್ಲಿಯೇ ಓದಿಕೊಳ್ಳುತ್ತಿದ್ದನು.
ಅಣ್ಣ ಒಲ್ವಿನ್ ಕೆಲಸದಿಂದ ಮನೆಗೆ ಬರುವ ಹೊತ್ತಿಗೆ ರಿಕ್ಸಾನ್ ಬಾಯಿಯಲ್ಲಿ ನೊರೆಗಳಿದ್ದು ಮನೆಯ ಸೋಫಾದ ಮೇಲೆ ಹೊರಳಾಡುತ್ತಿದ್ದನು. ಇದನ್ನು ಗಮನಿಸಿದ ಒಲ್ವಿನ್ ತಮ್ಮನನ್ನು ತಕ್ಷಣ ಹೆಲ್ಪ್ ಲೈನ್ 24x7 ಆಂಬುಲೆನ್ಸ್ ನಲ್ಲಿ ಕುಂದಾಪುರ ಆಸ್ಪತ್ರೆಗೆ ದಾಖಲಿಸಿಸುವ ವೇಳೆಗೆ ರಿಕ್ಸಾನ್ ಸಾವನ್ನಪ್ಪಿದ್ದನು. [2016ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ]
ರಿಕ್ಸಾನ್ ಸಾವಿಗೆ ಕಾರಣವೇನೆಂಬುವುದು ತಿಳಿದು ಬಂದಿಲ್ಲ. ವಿಷ ಜಂತು ಹಾವು ಕಚ್ಚಿರಬಹುದೇ ಅಥವಾ ಇನ್ನೇನಾದರೂ ನಡೆದಿದೆಯೇ ಎಂಬ ಅನುಮಾನ ಎಲ್ಲರಲ್ಲೂ ವ್ಯಕ್ತವಾಗಿದೆ. ಸದ್ಯ ರಿಕ್ಸಾನ್ ಮೃತದೇಹ ಕುಂದಾಪುರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದೆ.