ಕಾಂಗ್ರೆಸ್ಸಿಗರು ಬಿಜೆಪಿ ಮಂಡಲ ಅಧ್ಯಕ್ಷರ ಮೇಲೆ ಹಲ್ಲೆ; ಕೊಲೆ ಪ್ರಯತ್ನ ಶೋಭೆ ತರಲ್ಲ : ಎ. ನಾರಾಯಣಸ್ವಾಮಿ
ಬೆಂಗಳೂರು,ಮೇ 08: ಕಾಂಗ್ರೆಸ್ಸಿಗರು ಬಿಜೆಪಿ ಮಂಡಲ ಅಧ್ಯಕ್ಷರ ಮೇಲೆ ಹಲ್ಲೆ ಮಾಡಿದ್ದಾರೆ. ಬಿಟಿಎಂ ಲೇ ಔಟ್, ಚಿತ್ರದುರ್ಗದಲ್ಲಿ ಹಲ್ಲೆ ಮಾಡಿದ್ದು ಕಾಂಗ್ರೆಸ್ ಹತಾಶ ಭಾವನೆಯ ಪ್ರತೀಕ. ಕೊಲೆ ಪ್ರಯತ್ನ ಶೋಭೆ ತರದು ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ.
ಈ ಕುರಿತು ಸೋಮವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ತಿಂಗಳ ಮೊದಲು ಮುಖ್ಯಮಂತ್ರಿ ವಿಚಾರದಲ್ಲಿ ಖರ್ಗೆ, ದಲಿತ ನಾಯಕರ ಹೆಸರು ಪ್ರಸ್ತಾಪ ಆಗುತ್ತಿರಲಿಲ್ಲ. ದಲಿತ ಪದ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದಕ್ಕೆ ಹತಾಶೆಯೇ ಕಾರಣ ಎಂದು ಹೇಳಿದರು.

ಇನ್ನೂ ಛತ್ತೀಸಗಡದಲ್ಲಿ ಕಾಂಗ್ರೆಸ್ಸಿನ ಪ್ರಮುಖ ನಾಯಕನ ಮನೆಗೆ ದಾಳಿ ನಡೆದಾಗ 2 ಸಾವಿರ ಕೋಟಿ ಹಣ ಸಿಕ್ಕಿದ್ದು, ರಮೇಶ್ಕುಮಾರ್ ಅವರ ಮೂರು ತಲೆಮಾರಿಗೆ ಆಗುವಷ್ಟು ಹಣ ಇದೆ ಎಂದಿರುವುದು ಕಾಂಗ್ರೆಸ್ಸಿನ ಭ್ರಷ್ಟತೆಗೆ ಸ್ಪಷ್ಟ ಸಾಕ್ಷಿ. ಲೂಟಿಗಾಗಿ ಅಧಿಕಾರಕ್ಕೆ ಬರುವುದು, ದೆಹಲಿಗೆ ಸೂಟ್ಕೇಸ್ ಕಳುಹಿಸಿಕೊಡಲು ಕಾಂಗ್ರೆಸ್ ಪಕ್ಷ ಅಧಿಕಾರ ಬಯಸುತ್ತಿದೆ ಎಂದು ಟೀಕಿಸಿದರು.
ಅನೇಕ ರಾಜ್ಯಗಳಲ್ಲಿ ಒಳ ಮೀಸಲಾತಿಯ ಅರಿವು ಮೂಡಿದೆ. 15 ಜಿಲ್ಲೆಗಳಲ್ಲಿ ಮಾದಿಗ ಮತ್ತು ಇತರ ಸಮುದಾಯಕ್ಕೆ ಒಳ ಮೀಸಲಾತಿಯಿಂದ ಆಗಿರುವ ಪ್ರಯೋಜನದ ಜಾಗೃತಿ ಮೂಡಿದೆ. ರಾಜ್ಯದ 16-17 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಬಿಜೆಪಿ ಪರವಾದ ಸ್ಪಷ್ಟವಾದ ಅಲೆ ಇದೆ ಎಂದು ಹೇಳಿದರು.

ಈ ವೇಳೆ ಕೇಂದ್ರ ಸಚಿವ ಎಲ್. ಮುರುಗನ್ ಅವರು ಮಾತನಾಡಿ, ಮೀಸಲಾತಿಯು ತಳಮಟ್ಟದ ಸಮಾಜಕ್ಕೆ ತಲುಪಬೇಕೆಂಬುದು ದೀನದಯಾಳ ಉಪಾಧ್ಯಾಯರ ಆಶಯವಾಗಿತ್ತು. ಅದರ ನಿಟ್ಟಿನಲ್ಲಿ ಬೊಮ್ಮಾಯಿಯವರ ಸರಕಾರವು ಒಳ ಮೀಸಲಾತಿ ಅನುಷ್ಠಾನಕ್ಕೆ ತಂದಿದೆ. ಇದೊಂದು ಚಾರಿತ್ರಿಕ ನಿರ್ಧಾರ. ಸದಾಶಿವ ಆಯೋಗದ ವರದಿ, ಸಚಿವ ಸಂಪುಟದ ಸಮಿತಿ ಶಿಫಾರಸಿನ ಅನುಗುಣವಾಗಿ ಒಳ ಮೀಸಲಾತಿ ಜಾರಿಯಾಗಿದೆ. ಇದರಿಂದ ಸಾಮಾಜಿಕ ನ್ಯಾಯವಂಚಿತ ಸಮುದಾಯಗಳಿಗೆ ನ್ಯಾಯ ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾದಿಗರು ಕಾಂಗ್ರೆಸ್ಸಿಗೆ ಮತ ಕೊಟ್ಟು ಮೋಸ ಹೋಗದಿರಿ.
ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರು ಮಾತನಾಡಿ, ರಾಜ್ಯದ ಮಾದಿಗರೆಲ್ಲರೂ ಬಿಜೆಪಿಗೆ ಮತ ಕೊಡಲು ಮಾದಿಗ ದಂಡೋರ ರಾಜ್ಯ- ರಾಷ್ಟ್ರ ಸಮಿತಿ ತೀರ್ಮಾನ ಮಾಡಿದೆ ಎಂದು ತಿಳಿಸಿದರು. ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಒಳ ಮೀಸಲಾತಿ ಅನುಷ್ಠಾನಕ್ಕೆ ಮುಂದಾಗಲಿಲ್ಲ. ಬಿಜೆಪಿಗೆ ಮತ ಕೊಟ್ಟರೆ ಮಾದಿಗರ ಅಭಿವೃದ್ಧಿ ಖಚಿತ. ಕಾಂಗ್ರೆಸ್ಸಿಗೆ ಮತ ಕೊಟ್ಟರೆ ಪ್ರಯೋಜನವಿಲ್ಲ. ಮಾದಿಗರು ಕಾಂಗ್ರೆಸ್ಸಿಗೆ ಮತ ಕೊಟ್ಟು ಮೋಸ ಹೋಗದಿರಿ. ನಷ್ಟ ಮಾಡಿಕೊಳ್ಳದಿರಿ ಎಂದು ಮನವಿ ಮಾಡಿದರು.
ಆಕಸ್ಮಿಕವಾಗಿ ಈ ನಿರ್ಣಯ ಮಾಡಿಲ್ಲ. ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯ, ಬಸವರಾಜ ಬೊಮ್ಮಾಯಿಯವರ ಕಾರ್ಯ, ಯೋಜನೆಗಳನ್ನು ಗಮನಿಸಿ ಈ ನಿರ್ಧಾರ ಮಾಡಿದ್ದೇವೆ. ಕೇಂದ್ರ ಸರಕಾರವು ಗರಿಷ್ಠ ಸಚಿವ ಸ್ಥಾನಗಳನ್ನು ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಕ್ಕೆ ನೀಡಿದೆ. ಇದು ನೈಜ ಸಾಮಾಜಿಕ ನ್ಯಾಯದ ಪ್ರತೀಕ. ಕಾಂಗ್ರೆಸ್ ಪಕ್ಷವು ಕೇವಲ ಮಾತಿನಲ್ಲಿ ಸಾಮಾಜಿಕ ನ್ಯಾಯದ ವಿಚಾರವನ್ನು ತರುತ್ತಿದೆ. ಆದರೆ, ಬಿಜೆಪಿ ಅದನ್ನು ಜಾರಿಗೊಳಿಸಿದೆ ಎಂದರು.












Click it and Unblock the Notifications