ಕಾರವಾರದಲ್ಲಿ ಅಂಗಡಿ ತೆರವು: ಬೆಂಕಿ ಹಚ್ಚಿಕೊಂಡ ವ್ಯಾಪಾರಸ್ಥ
ಕಾರವಾರ, ಸೆಪ್ಟೆಂಬರ್ 14: ಭಟ್ಕಳ ತಾಲ್ಲೂಕಿನ ಪುರಸಭೆ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಸ್ಥಳದಲ್ಲೇ ಓರ್ವ ಅಂಗಡಿಕಾರ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಇಂದು(ಸೆ.14) ನಡೆದಿದೆ. ಅಂಗಡಿಕಾರ ರಾಮಚಂದ್ರ ನಾಯ್ಕ ಆತ್ಮಹತ್ಯೆಗೆ ಯತ್ನಿಸಿದವನು.
ಗುರುವಾರ ಬೆಳಗ್ಗೆ 6:30ರ ಸುಮಾರಿಗೆ ಪುರಸಭೆ ಕಾರ್ಯಾಲಯದೊಳಗೆ ಅಧಿಕಾರಿಗಳು ಅಂಗಡಿ ತೆರವುಗೊಳಿಸಲು ಮುಂದಾದಾಗ ಈತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದನ್ನು ತಪ್ಪಿಸಲು ಹೋದ ಇನ್ನೋರ್ವ ಈಶ್ವರ ನಾಯ್ಕ ಎಂಬಾತನಿಗೂ ಸಹ ಬೆಂಕಿಯ ಕೆನ್ನಾಲಿಗೆ ತಗುಲಿದೆ.

ಇಬ್ಬರಿಗೂ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ರವಾನೆ ಮಾಡಲಾಗಿದೆ.
ಘಟನೆಯಿಂದ ಅಂಗಡಿಕಾರರು ಆಕ್ರೋಶ ಭರಿತರಾಗಿದ್ದು, ಸ್ಥಳದಲ್ಲಿ ಸಂಪೂರ್ಣ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಕರ್ಫ್ಯೂ ಘೋಷಣೆಯ ಸಾಧ್ಯತೆ ಇದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎನ್ನಲಾಗಿದೆ. ಅಲ್ಲದೇ ನಗರದಾದ್ಯಂತ ಬಂದ್ ಕರೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಬಿಗಿ ಪೋಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.












Click it and Unblock the Notifications