7th Pay Commission: ನಿವೃತ್ತ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ?
ಬೆಂಗಳೂರು, ಅಕ್ಟೋಬರ್ 05: ಕರ್ನಾಟಕದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಓಪಿಎಸ್) ಜಾರಿಗೊಳಿಸುವುದು. ರಾಜ್ಯ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ಮುಂದೆಯೂ ಸರ್ಕಾರಿ ನೌಕರರು, ಸರ್ಕಾರಿ ನೌಕರರ ವಿವಿಧ ಸಂಘಗಳು ಈ ಕುರಿತು ಮನವಿಯನ್ನು ಸಲ್ಲಿಕೆ ಮಾಡಿವೆ. ಈ ಕುರಿತು ನೌಕರರ ಬೇಡಿಕೆ ಇನ್ನೂ ಸರ್ಕಾರದ ಮಟ್ಟದಲ್ಲಿಯೇ ಇದೆ.
7ನೇ ರಾಜ್ಯ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ 558 ಪುಟಗಳ ಸಂಪುಟ-1ರ ವರದಿಯಲ್ಲಿ ನಿವೃತ್ತ ನೌಕರರ ಸೌಲಭ್ಯಗಳ ಕುರಿತು ಸಹ ಹಲವು ಶಿಫಾರಸುಗಳನ್ನು ಮಾಡಿದೆ. ಇದರಲ್ಲಿ ನಿವೃತ್ತರ ಪಿಂಚಣಿ ಕುರಿತು ಗಮನ ಸೆಳೆಯಲಾಗಿದೆ. ಈ ವಿವರಣೆ ವೇಳೆ ಎನ್ಪಿಎಸ್ ಮತ್ತು ಓಪಿಎಸ್ ಕುರಿತು ಸಹ ಆಯೋಗ ಸರ್ಕಾರಕ್ಕೆ ವಿವರಣೆಯನ್ನು ಕೊಟ್ಟಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆ: ಆಯೋಗ ತನ್ನ ವರದಿಯಲ್ಲಿ ಈ ಮೊದಲೇ ಹೇಳಿದಂತೆ, ದಿನಾಂಕ 01.01.2006ರ ನಂತರ ಸೇವೆಗೆ ಸೇರಿದ ತನ್ನ ಎಲ್ಲಾ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಎನ್ಪಿಎಸ್ ಯೋಜನೆಯನ್ನು ಕಾಡ್ಡಾಯಗೊಳಿಸಿರುತ್ತದೆ. ಓಪಿಎಸ್ ಯೋಜನೆಯು ನೌಕರನಿಂದ ಯಾವುದೇ ವಂತಿಗೆಯನ್ನು ನಿರೀಕ್ಷಿಸದ, ಹಣದುಬ್ಬರಕ್ಕೆ ಸರಿದೂಗಿಸಿ ಮತ್ತು ಕಾಲಕಾಲಕ್ಕೆ ಪರಿಷ್ಕೃತಗೊಂಡ ನಿವೃತ್ತಿ ವೇತನ ಪಾವತಿಸುವ ಭರವಸೆಯನ್ನು ನೀಡುತ್ತಿದ್ದು, ಮತ್ತೊಂದೆಡೆ, ಎನ್ಪಿಎಸ್ ಯೋಜನೆಯು, ಉದ್ಯೋಗದಾತ ಮತ್ತು ನೌಕರನ ವಂತಿಗೆಗಳ ಮೇಲೆ ರಚಿತವಾಗಿದೆ ಮತ್ತು ಅದರ ಲಾಭವು ಮಾರುಕಟ್ಟೆ ಆಧಾರಿತವಾಗಿದೆಯೆ ಹೊರತು ನೌಕರನು ನಿವೃತ್ತಿ ಹೊಂದುವ ಸಂದರ್ಭದಲ್ಲಿ, ಪಡೆದ ವೇತನದ ಪ್ರಮಾಣಕ್ಕೆ ಅನುಸಾರವಾಗಿ ನಿಗದಿ ಪಡಿಸಿದ ಮೊತ್ತವಾಗಿರುವುದಿಲ್ಲ.
ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘವು ಹಳೆ ಓಪಿಎಸ್ ಪದ್ಧತಿಯನ್ನು ಪುನರ್ ಸ್ಥಾಪಿಸಬೇಕೆಂದು ಆಯೋಗದ ಮುಂದೆ ಮನವಿಯನ್ನು ಸಲ್ಲಿಸಿರುತ್ತದೆ. ಜೊತೆಗೆ, ರಾಜ್ಯಾದ್ಯಂತ ಸೇವೆಯಲ್ಲಿರುವ ಮತ್ತು ನಿವೃತಿಯಾದ ನೌಕರರಿಂದ ನೂತನ ಪಿಂಚಣಿಯನ್ನು ರದ್ದುಗೊಳಿಸಿ ಹಳೆಯ ಓಪಿಎಸ್ ಪದ್ಧತಿಯನ್ನು ಮರು ಜಾರಿಗೊಳಿಸಲು 2280ಕ್ಕೂ ಹೆಚ್ಚು, ಮನವಿಗಳನ್ನು ಆಯೋಗವು ಸ್ವೀಕರಿಸಿರುತ್ತದೆ.
ರಾಜ್ಯ ಸರ್ಕಾರವು, ದಿನಾಂಕ 01.03.2023 ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ ಈಗಾಗಲೇ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ (ಪುನರ್ ಸ್ಥಾಪಿಸಿರುವು ಮಾಡಿರುವ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ಸೂಚಿಸಿದೆ.
ಎನ್ಪಿಎಸ್ಗೆ ಸಂಬಂಧಿಸಿದ ಈ ಎಲ್ಲಾ ಮನವಿಗಳನ್ನು ರಾಜ್ಯ ಆರ್ಥಿಕ ಇಲಾಖೆಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ. ಇದಕ್ಕೆ ಹೊರತಾಗಿಯೂ, ಇದು ರಾಜ್ಯ ಸರ್ಕಾರಕ್ಕೆ ಮಹತ್ವದ ವಿಷಯವಾಗಿರುವುದನ್ನು ಮನಗಂಡು ಹಾಗೂ ಪ್ರಸ್ತುತ ಇದು ತೀವ್ರ ಚರ್ಚೆಗೆ ಒಳಪಟ್ಟಿದ್ದು, ಆಯೋಗವು, ಈ ಕುರಿತು ವಿವಿಧ ಅಂಶಗಳ ವಿವರವಾದ ಅಧ್ಯಯನವನ್ನು ಕೈಗೊಂಡಿರುತ್ತದೆ ಎಂದು ಹೇಳಿದೆ.
ಸರ್ಕಾರದ ಕ್ರಮವೇನು?: ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಓಪಿಎಸ್) ಪುನರ್ ಸ್ಥಾಪನೆ ವಿಚಾರದಲ್ಲಿ ಸದ್ಯದ ಬೆಳವಣಿಗೆ ಎಂದರೆ ಆಗಸ್ಟ್ನಲ್ಲಿ ಅರುಳ್ ಕುಮಾರ್ ಕೆಎಎಸ್, ಸರ್ಕಾರದ ಉಪ ಕಾರ್ಯದರ್ಶಿ ಆರ್ಥಿಕ ಇಲಾಖೆ (ಆಡಳಿತ ಮತ್ತು ಸಮನ್ವಯ) ಆದೇಶವೊಂದನ್ನು ಹೊರಡಿಸಿದ್ದಾರೆ. ಈ ವಿಚಾರದಲ್ಲಿ ಸರ್ಕಾರಿ ನೌಕರರ ಬೇಡಿಕೆ ಪರಿಶೀಲಿಸಲು ಈ ಹಿಂದೆ ರಚನೆ ಮಾಡಿದ್ದ ಸಮಿತಿಯನ್ನು ಪುನರ್ ರಚನೆ ಮಾಡಿ ಆದೇಶವನ್ನು ಹೊರಡಿಸಲಾಗಿದೆ.
ಈ ಆದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ದಿನಾಂಕ 01/04/2006 ರಂದು ಮತ್ತು ತದನಂತರ ಸರ್ಕಾರಿ ಸೇವೆಗೆ ಸೇರಿರುವ ಎಲ್ಲಾ ನೌಕರರಿಗೆ ಕಡ್ಡಾಯವಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸೂಕ್ತ ಬದಲಾವಣೆ/ ಮಾರ್ಪಾಡು ಮಾಡಲು ಪರಿಶೀಲಿಸಲು ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ. ಸರ್ಕಾರಿ ನೌಕರರ ಬೇಡಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ಸೂಕ್ತ ವರದಿಯನ್ನು ಸಲ್ಲಿಸಲು ಅನುಕೂಲವಾಗುವಂತೆ ಸಮಿತಿಯನ್ನು ಪುನರ್ ರಚಿಸಲಾಗಿದೆ ಎಂದು ಸರ್ಕಾರ ಹೇಳಿದೆ.












Click it and Unblock the Notifications