7th Pay Commission: 7ನೇ ವೇತನ ಆಯೋಗ ರಚನೆ; ಸರ್ಕಾರಿ ನೌಕರರ ನಿರೀಕ್ಷೆಗಳು
ಬೆಂಗಳೂರು, ನವೆಂಬರ್ 10; ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ನೀಡಿ ಮಾತು ಉಳಿಸಿಕೊಂಡಿದೆ. 7ನೇ ವೇತನ ಆಯೋಗದ ರಚನೆಗೆ ಚಾಲನೆ ನೀಡಿದೆ. ವೇತನ ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾಗಿದ್ದ ಸುಧಾಕರ್ ರಾವ್ ನೇಮಕ ಮಾಡಿದೆ.
ಬುಧವಾರ ದಾವಣಗೆರೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದಂತೆ ಅಧ್ಯಯನ, ವೇತನ ಭತ್ಯೆಗಳ ಪರಿಷ್ಕರಣೆ ಹಾಗೂ ಸುಧಾರಣೆಗಾಗಿ 7ನೇ ವೇತನ ಆಯೋಗವನ್ನು ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಸುಧಾಕರ್ರಾವ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದೆ. ಮುಖ್ಯಮಂತ್ರಿಗಳಿಗೆ ಅಭಿನಂದನೆಯನ್ನು ಸಲ್ಲಿಕೆ ಮಾಡಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ನುಡಿದಂತೆ ನಡೆದು ನಿಗದಿತ ಅವಧಿಯಲ್ಲಿ ವೇತನ ಆಯೋಗ ರಚನೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಾಜ್ಯದ 6 ಲಕ್ಷ ಸರ್ಕಾರಿ ಅಧಿಕಾರಿ/ ನೌಕರರರು, 3.40 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ ಮತ್ತು ವಿಶ್ವವಿದ್ಯಾಲಯ ಸಿಬ್ಬಂದಿಗಳು ಹಾಗೂ 4 ಲಕ್ಷ ನಿವೃತ್ತ ನೌಕರರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತದೆ ಎಂದು ಹೇಳಿದೆ.
ಸಂಘವು ಆಯೋಗ ರಚನೆ ಕಾರ್ಯದಲ್ಲಿ ಸಹಕರಿಸಿದ ನಿಕಟಪೂರ್ವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಸರ್ಕಾರದ ಸಚಿವರಿಗೆ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದೆ. ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಸುಧಾಕರ್ರಾವ್ಗೆ ಸಂಘವು ಅಭಿನಂದನೆ ಸಲ್ಲಿಸಿದೆ.

ಸಂಘದ ಮನವಿ ಮತ್ತು ಸರ್ಕಾರದ ನಿರ್ಧಾರ
ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಗಳ ಪರಿಷ್ಕರಣೆಗಾಗಿ 7ನೇ ವೇತನ ಆಯೋಗವನ್ನು ರಚಿಸುವಂತೆ ಸಂಘವು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತ್ತು. ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳು 2022-23ನೇ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಉತ್ತರ ನೀಡುವಾಗ ಮತ್ತು ಹಲವು ಕಾರ್ಯಕ್ರಮಗಳ ವೇದಿಕೆಯಲ್ಲಿ 7ನೇ ವೇತನ ಆಯೋಗ ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದರು.

ವೇತನ ಆಯೋಗದಿಂದ ನಿರೀಕ್ಷೆಗಳು
ಹಾಲಿ ಇರುವ ಮೂಲ ವೇತನಕ್ಕೆ ತುಟ್ಟಿಭತ್ಯೆಯನ್ನು ವಿಲೀನಗೊಳಿಸಿದ ನಂತರನಿಗದಿಯಾಗುವ ಮೂಲ ವೇತನಕ್ಕೆ ಶೇ. 40 ಫಿಟ್ಮೆಂಟ್ ಸೌಲಭ್ಯವನ್ನು ಪಡೆಯುವುದು.
ದಿನಾಂಕ 01/07/2022 ರಿಂದ ಕಾಲ್ಪನಿಕವಾಗಿ ವೇತನ ಸೌಲಭ್ಯಗಳನ್ನು ಹಾಗೂ ದಿನಾಂಕ 01/01/2023 ರಿಂದ ಆರ್ಥಿಕ ಸೌಲಭ್ಯವನ್ನು ಪಡೆಯುವುದು.
ಕೇಂದ್ರ ಸರ್ಕಾರಿ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಹಾಗೂ ವಿಶೇಷ ಭತ್ಯೆಗಳ ಪರಿಷ್ಕರಣೆ ಮಾಡುವುದು.
ವಿವಿಧ ಇಲಾಖಾ ವೃಂದಗಳ ವೇತನ ಶ್ರೇಣಿಯಲ್ಲಿನ ತಾರತಮ್ಯಗಳನ್ನು ಸರಿಪಡಿಸುವುದು.

ಆರ್ಥಿಕ ಸೌಲಭ್ಯಗಳ ನಿರೀಕ್ಷೆಗಳು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ 7ನೇ ವೇತನ ಆಯೋಗದ ರಚನೆ ಸಂಬಂಧ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಆರ್ಥಿಕ ಸೌಲಭ್ಯಗಳ ನಿರೀಕ್ಷೆಗಳನ್ನು ಸಹ ಹೇಳಿದೆ.
ಪ್ರಸ್ತುತ ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ಎಲ್ಲಾ ವೃಂದಗಳ ಒಟ್ಟು ನೌಕರರ ಮೂಲ ವೇತನ ರೂ. 23,908. ಪ್ರಸ್ತುತ ತುಟ್ಟಿಭತ್ಯೆ ದರ ಶೇ 31. ರೂ 7,411.48 ಕೋಟಿ. ಪ್ರಸ್ತುತ ಮೂಲ ವೇತನ + 31 % ತುಟ್ಟಿಭತ್ಯೆ ವಿಲೀನ ಸೇರಿ ಒಟ್ಟು ರೂ. 31.319 ಕೋಟಿ.
ಪ್ರಸ್ತುತ ಮೂಲ ವೇತನ + 31 % ತುಟ್ಟಿಭತ್ಯೆ ವಿಲೀನದ ನಂತರ ನಿಗದಿಯಾಗುವ ವೇತನಕ್ಕೆ ಶೇ 40 % ಫಿಟ್ಮೆಂಟ್ ನೀಡಿದಲ್ಲಿ ಆಗುವ ಹೆಚ್ಚುವರಿ ಹೊರೆ ಆರ್ಥಿಕ ವೆಚ್ಚ ರೂ. 12,527.79 ಕೋಟಿ.

7ನೇ ವೇತನ ಆಯೋಗದ ಜವಾಬ್ದಾರಿಗಳು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ವೇತನ ಆಯೋಗದ ಜವಾಬ್ದಾರಿಗಳು ಏನು ಎಂಬುದನ್ನು ಹೇಳಿದೆ.
ಆಡಳಿತಾತ್ಮಕ ಸುಧಾರಣೆ, ಖಾಲಿ ಇರುವ ಹುದ್ದೆಗಳ ಭರ್ತಿ, ನೇಮಕಾತಿ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ ಶಿಫಾರಸು, ಅನವಶ್ಯಕ ವೆಚ್ಚಗಳಿಗೆ ಕಡಿವಾಣ, ಸರ್ಕಾರಿ ಕಚೇರಿಗಳಲ್ಲಿ ಮೂಲಸೌಲಭ್ಯಗಳು ಹಾಗೂ ಮಹಿಳಾ ನೌಕರರ ಸಮಸ್ಯೆಗಳ ಸುಧಾರಣೆ.












Click it and Unblock the Notifications