7th Pay Commission; ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಭೆ
ಬೆಂಗಳೂರು, ಸೆಪ್ಟೆಂಬರ್ 26; ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಲಾಗಿದೆ. ಈ ಆಯೋಗ ಯಾವಾಗ ಸರ್ಕಾರಕ್ಕೆ ವರದಿ ನೀಡಲಿದೆ? ಎಂದು ಸರ್ಕಾರಿ ನೌಕರರು ಕಾದು ಕುಳಿತಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಪರಿಷ್ಕರಿಸಲು ಮತ್ತು ನೂತನ ವೇತನ ಶ್ರೇಣಿ ರಚನೆ ಇತ್ಯಾದಿಗಳನ್ನು ರೂಪಿಸಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಲಾಗಿದೆ. ಸರ್ಕಾರಿ ನೌಕರರ ವಿವಿಧ ಸಂಘಗಳ ಜೊತೆ ಆಯೋಗ ಸರಣಿ ಸಭೆಗಳನ್ನು ನಡೆಸುತ್ತಿದೆ.

ಈಗ ವೇತನ ಆಯೋಗ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಸಭೆಯನ್ನು ಕರೆದಿದೆ. ಸೆಪ್ಟೆಂಬರ್ 30ರಂದು 1.30ಕ್ಕೆ ಈ ಸಭೆ ನಡೆಯಲಿದೆ. ಈ ಕುರಿತು ಪತ್ರದ ಮೂಲಕ 7ನೇ ರಾಜ್ಯ ವೇತನ ಆಯೋಗದ ಕಾರ್ಯದರ್ಶಿಯಾದ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾಹಿತಿ ನೀಡಿದ್ದಾರೆ.
ಪತ್ರದ ವಿವರ; ಈ ಸಭೆಯ ಕುರಿತು ರಾಜ್ಯಾಧ್ಯಕ್ಷರು, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಇವರಿಗೆ ಪತ್ರವನ್ನು ಬರೆಯಲಾಗಿದೆ. ಸಂಘದ ಮುಖ್ಯಸ್ಥರೊಂದಿಗೆ ಸಂಘದ ಪ್ರತಿಕ್ರಿಯೆ/ ಬೇಡಿಕೆಗಳ ಕುರಿತು ಸಭೆ ಎಂಬ ವಿಷಯವನ್ನು ಪತ್ರ ಒಳಗೊಂಡಿದೆ. 7ನೇ ರಾಜ್ಯ ವೇತನ ಆಯೋಗ ರಚನೆಯ ಸರ್ಕಾರದ ಆದೇಶ ದಿನಾಂಕ 19/11/2022. ಅಧಿಕೃತ ಜ್ಞಾಪನ ದಿನಾಂಕ 17/01/2023 ಮತ್ತು ಕಛೇರಿ ಪತ್ರ ದಿನಾಂಕ 25/9/2023 ಉಲ್ಲೇಖ ಮಾಡಿದ್ದಾರೆ.
ರಾಜ್ಯ ಸರ್ಕಾರವು ಸರ್ಕಾರಿ ನೌಕರರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ, ಪರಿಷ್ಕರಿಸಿ ಸರ್ಕಾರಕ್ಕೆ ವರದಿ ನೀಡಲು ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿರುವ ಬಗ್ಗೆ, ನೆನಪಿಸಲು ಇಚ್ಛಿಸುತ್ತೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾರ್ಹ ಅಂಶಗಳ ಕುರಿತು ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರು, ಸಂಘ ಸಂಸ್ಥೆಗಳಿಂದ ಮುಕ್ತ ಸಲಹೆ, ಅನಿಸಿಕೆ ಅಲ್ಲದೇ ಇಲಾಖೆಗಳಿಂದ ಮಾಹಿತಿ ಹಾಗೂ ಮುಕ್ತ ಸಲಹೆ ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಆಯೋಗವು ಪ್ರಶ್ನಾವಳಿ ರಚಿಸಿ, ಬಿಡುಗಡೆ ಮಾಡಿತ್ತು.
ಸದರಿ ಪ್ರಶ್ನಾವಳಿಗಳಿಗೆ ತಮ್ಮ ಸಂಘದ ವತಿಯಿಂದ ಪ್ರತಿಕ್ರಿಯೆಗಳು/ ಉತ್ತರಗಳು/ ಬೇಡಿಕೆಗಳು ಆಯೋಗದಲ್ಲಿ ಸ್ವೀಕೃತಗೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ ಆಯೋಗವು ತಮ್ಮ ಸಂಘದ ಬೇಡಿಕೆಗಳು/ ವಿನಂತಿಗಳು/ ಅಭಿಪ್ರಾಯಗಳ ಕುರಿತು ಚರ್ಚಿಸಲು ಇಚ್ಚಿಸುತ್ತದೆ ಎಂದು ವಿವರಣೆ ನೀಡಲಾಗಿದೆ.
ಆದ್ದರಿಂದ ದಿನಾಂಕ 30/9/2023ರಂದು, ಸಭಾ ಕೊಠಡಿ, 7ನೇ ರಾಜ್ಯ ವೇತನ ಆಯೋಗ, 3ನೇ ಮಹಡಿ, ಹಳೆಯ ಕಲ್ಲು ಕಟ್ಟಡ, ಔಷಧ ನಿಯಂತ್ರಣ ಸಂಕೀರ್ಣ, ಅರಮನೆ ರಸ್ತೆ, ಬೆಂಗಳೂರು ಇಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಸಭೆಯಲ್ಲಿ ತಮ್ಮ ಸಂಘದ ವತಿಯಿಂದ ಪ್ರಾತ್ಯಕ್ಷಿಕೆಯನ್ನು (PPT) ಪ್ರಸ್ತುತಪಡಿಸಬಹುದು ಎಂದು ತಿಳಿಸಿದೆ.
ಪ್ರಶ್ನಾವಳಿಯ ಉತ್ತರಗಳು, ಬೇಡಿಕೆಗಳು ಮತ್ತು ಇತರ ವಿಷಯಗಳ ಸಂಕ್ಷಿಪ್ತ ಮಾಹಿತಿ ಇರಲಿ. ಮಾಹಿತಿಯು ವಸ್ತುನಿಷ್ಟ ಹಾಗೂ ನಿರ್ದಿಷ್ಟವಾಗಿರಲಿ (Specific to the point). ಪ್ರಾತ್ಯಕ್ಷಿಕೆಯು 10 ಸ್ಲೈಡ್ಗಳಿಗೆ ಸೀಮಿತಗೊಳಿಸುವುದು. ಮಾಹಿತಿಯು/ ಸ್ಲೈಡ್ಗಳು ಪುನರಾವರ್ತನೆಯಾಗದಿರಲಿ. ಸಭೆಗೆ ಪೂರ್ವ ಸಿದ್ಧತೆ ಹಾಗೂ ಅಗತ್ಯ ಮಾಹಿತಿಯೊಂದಿಗೆ ಹಾಜರಾಗುವಂತೆ ಪತ್ರದಲ್ಲಿ ಕೋರಲಾಗಿದೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಆಯೋಗಕ್ಕೆ ನಿಗದಿಪಡಿಸಿರುವ ಕಾಲಾವಧಿಯನ್ನು ದಿನಾಂಕ 19/5/2023 ರಿಂದ 6 ತಿಂಗಳು ವಿಸ್ತರಣೆ ಮಾಡಲಾಗಿದೆ. ಆದ್ದರಿಂದ ಆಯೋಗ ನವೆಂಬರ್ನಲ್ಲಿ ಸರ್ಕಾರಕ್ಕೆ ವೇತನ, ಭತ್ಯೆ ಹೆಚ್ಚಳ ಕುರಿತು ಶಿಫಾರಸು ವರದಿ ನೀಡುವ ಸಾಧ್ಯತೆ ಇದೆ.












Click it and Unblock the Notifications