ಕುಮಾರಪರ್ವ ಯಾತ್ರೆಯಿಂದ ಜೆಡಿಎಸ್ಗೆ ಆಗುವ 6 ಲಾಭಗಳು!
Recommended Video

ಬೆಂಗಳೂರು, ನವೆಂಬರ್ 23 : 'ಮುಖ್ಯಮಂತ್ರಿಯಾಗಿ ನನ್ನ 20 ತಿಂಗಳ ಆಡಳಿತ ಕೇವಲ ಸಿನಿಮಾ ಬಿಡುಗಡೆಗೂ ಮುನ್ನ ಬರುವ ಟ್ರೈಲರ್. ನಮಗೆ ಒಂದು ಬಾರಿ ಅವಕಾಶ ನೀಡಿ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ' ಎಂದು ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಜನರಿಗೆ ಮನವಿ ಮಾಡುತ್ತಿದ್ದಾರೆ.
2018ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಸಂಕಲ್ಪದೊಂದಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ 'ಕುಮಾರಪರ್ವ ಯಾತ್ರೆ'ಯನ್ನು ನಡೆಸುತ್ತಿದ್ದಾರೆ. ಎಚ್.ಡಿ.ದೇವೇಗೌಡರು ಅನಾರೋಗ್ಯವನ್ನು ಬದಿಗೊತ್ತಿ, ಪ್ರವಾಸ ಮಾಡುತ್ತಿದ್ದಾರೆ.
ನವೆಂಬರ್ 7ರಂದು ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ 'ಕುಮಾರಪರ್ವ ಯಾತ್ರೆಗೆ' ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಸದ್ಯ, ಅಧಿವೇಶನ ನಡೆಯುತ್ತಿರುವುದರಿಂದ ಕುಮಾರಸ್ವಾಮಿ ಅದರಲ್ಲಿ ಬ್ಯುಸಿಯಾಗಿದ್ದಾರೆ.
ಕರ್ನಾಟಕ ಬಿಜೆಪಿ ಚುನಾವಣೆ ಪ್ರಚಾರಕ್ಕಾಗಿ 'ನವ ಕರ್ನಾಟಕ ಪರಿವವರ್ತನಾ ಯಾತ್ರೆ' ಆರಂಭಿಸಿದೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್ 'ಕುಮಾರಪರ್ವ ಯಾತ್ರೆ' ಆರಂಭಿಸಿದೆ. ರಾಜ್ಯದ 224 ಕ್ಷೇತ್ರಗಳಲ್ಲಿಯೂ ಯಾತ್ರೆ ಸಂಚಾರ ನಡೆಸಲಿದೆ. ಈ ಯಾತ್ರೆಯಿಂದ ಜೆಡಿಎಸ್ ಪಕ್ಷಕ್ಕೆ ಆಗುವ ಲಾಭವೇನು? ಇಲ್ಲಿವೆ ವಿವರ...

ಕುಮಾರಸ್ವಾಮಿ ವರ್ಚಸ್ಸು ವೃದ್ಧಿ
ಜೆಡಿಎಸ್ ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಮಾಡುವುದರಿಂದ ಅವರ ವರ್ಚಸ್ಸು ವೃದ್ಧಿಯಾಗಲಿದೆ. ಆದ್ದರಿಂದ, ಚುನಾವಣೆಯಲ್ಲಿ ಪಕ್ಷಕ್ಕೆ ಮತ್ತು ಕುಮಾರಸ್ವಾಮಿ ಅವರಿಗೆ ಲಾಭವಾಗಲಿದೆ.

ಪ್ರಾದೇಶಿಕ ಪಕ್ಷದ ಬಲ ಹಚ್ಚಳ
ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳಾಗಿದ್ದು ಚುನಾವಣೆಯ ಸಮಯದಲ್ಲಿ ರಾಷ್ಟ್ರೀಯ ನಾಯಕರನ್ನು ಕರೆಸಿ ಪ್ರಚಾರ ನಡೆಸುತ್ತವೆ. ಜೆಡಿಎಸ್ ಪ್ರಾದೇಶಿಕ ಪಕ್ಷ. ಚುನಾವಣೆ ಸಮಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸಂಚಾರ ನಡೆಸಿ ಪ್ರಚಾರ ಮಾಡುವುದಿರಿಂದ ಪಕ್ಷದ ಬಲ ಹೆಚ್ಚಲಿದೆ.

ಹಣೆ ಪಟ್ಟಿ ಕಳಚಲಿದೆ
ಜೆಡಿಎಸ್ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿಲ್ಲ. ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತ ಎಂಬ ಹಣೆ ಪಟ್ಟಿ ಇದೆ. ಇದನ್ನು ಕಳಚಿ ಉತ್ತರ ಕರ್ನಾಟಕ ಭಾಗದಲ್ಲಿಯೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದು ಕುಮಾರಸ್ವಾಮಿ ಪ್ರಯತ್ನ ನಡೆಸುತ್ತಿದ್ದಾರೆ. ರಾಜ್ಯ ಪ್ರವಾಸ ಮಾಡುವುದರಿಂದ ಪಕ್ಷ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತ ಎಂಬ ಹಣೆ ಪಟ್ಟಿ ಕಳಚಲಿದೆ.

ರಾಷ್ಟ್ರಿಯ ಪಕ್ಷಗಳಿಗೆ ಸೆಡ್ಡು
ಕರ್ನಾಟಕ ಬಿಜೆಪಿ 'ನವ ಕರ್ನಾಟಕ ಪರಿವರ್ತನಾ ಯಾತ್ರೆ' ನಡೆಸುತ್ತಿದೆ. ಅತ್ತ ಕಾಂಗ್ರೆಸ್ ಮನೆ-ಮನೆಗೆ ಕಾಂಗ್ರೆಸ್ ಎಂಬ ಅಭಿಯಾನ ನಡೆಸುತ್ತಿದೆ. ಕಾಂಗ್ರೆಸ್ ನಾಯಕರು ಡಿಸೆಂಬರ್ ತಿಂಗಳಿನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಜೆಡಿಎಸ್ ಸಹ ಯಾತ್ರೆ ಮಾಡುವುದಿರಂದ ಪ್ರಚಾರದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದಂತಾಗುತ್ತದೆ.

ಹಿಂದಿನ ಕೆಲಸಗಳ ನೆನಪು
ಕುಮಾರಪರ್ವ ಯಾತ್ರೆಯ ಸಮಾವೇಶಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳ ಬಗ್ಗೆ ಜನರಿಗೆ ನೆನಪು ಮಾಡಿಕೊಡುತ್ತಿದ್ದಾರೆ. ಇದರಿಂದ, ಚುನಾವಣೆ ಸಮಯದಲ್ಲಿ ಜನ ಬೆಂಬಲ ಪಡೆಯಲು ಸಾಧ್ಯವಾಗುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತು.

ಗ್ರಾಮ ವಾಸ್ತವ್ಯ ಕಾರ್ಯಕ್ರಮ
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಆರಂಭಿಸಿದ್ದರು. ಈಗ ಕುಮಾರಪರ್ವ ಯಾತ್ರೆಯಲ್ಲೂ ಇದನ್ನು ಮುಂದುವರೆಸಿದ್ದಾರೆ. ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸುತ್ತಾರೆ. ಇದರಿಂದ ಜನರ ಜೊತೆ ಬೆರೆತಂತೆ ಆಗುತ್ತದೆ. ಇದು ಪಕ್ಷಕ್ಕೆ ಸಹಕಾರಿಯಾಗಲಿದೆ.












Click it and Unblock the Notifications