ಫೆಬ್ರವರಿ ಅಂತ್ಯಕ್ಕೆ ಸಾರಿಗೆ ಇಲಾಖೆಗೆ ಬರಲಿವೆ 5500 ಹೊಸ ಬಸ್
ಬೆಂಗಳೂರು, ಡಿಸೆಂಬರ್ 14; ಕರ್ನಾಟಕದ ಕಾಂಗ್ರೆಸ್ ಸರ್ಕಾರ 'ಶಕ್ತಿ' ಯೋಜನೆ ಜಾರಿಗೆ ತಂದ ಬಳಿಕ ಸರ್ಕಾರಿ ಬಸ್ಗಳಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದೆ. ಆದರೆ ಸಾರಿಗೆ ಸಂಸ್ಥೆಗಳು ಬಸ್ಗಳ ಕೊರತೆಯನ್ನು ಎದುರಿಸುತ್ತಿವೆ. ಆದರೆ 2024ರಲ್ಲಿ ಸಾರಿಗೆ ಇಲಾಖೆಗೆ 5,500 ಬಸ್ಗಳು ಸೇರ್ಪಡೆಯಾಗಲಿವೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ವಿಧಾನ ಪರಿಷತ್ನಲ್ಲಿ ಸದಸ್ಯೆ ಉಮಾಶ್ರೀ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡುವಾಗ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೊಸ ಬಸ್ಗಳ ಖರೀದಿ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಚಿವರು ತಮ್ಮ ಉತ್ತರದಲ್ಲಿ, "ಪ್ರಯಾಣಿಕರಿಗೆ ಉಂಟಾಗುವ ತೊಂದರೆ ನಿವಾರಿಸಲು ಮುಂದಿನ ವರ್ಷದ ಫೆಬ್ರವರಿ ಅಂತ್ಯಕ್ಕೆ 5,500 ಹೊಸ ಬಸ್ಗಳನ್ನು ಖರೀದಿ ಮಾಡಲಾಗುತ್ತದೆ. ಬಸ್ ನಿಲ್ದಾಣದಲ್ಲಿ ಅಗತ್ಯ ಮೂಲಕ ಸೌಲಭ್ಯ ಕಲ್ಪಿಸಲು ಸಹ ಆದ್ಯತೆ ನೀಡಲಾಗುತ್ತದೆ" ಎಂದು ಹೇಳಿದರು.
ಪ್ರಯಾಣಿಕರ ಸಂಖ್ಯೆ ಹೆಚ್ಚಳ; ರಾಮಲಿಂಗಾ ರೆಡ್ಡಿ ಮಾತನಾಡಿ, "ಶಕ್ತಿ ಯೋಜನೆ ಜಾರಿಗೆ ಬರುವ ಮುನ್ನ ರಾಜ್ಯದ ನಾಲ್ಕು ನಿಗಮಗಳಲ್ಲಿ 91.16 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆದರೆ ಯೋಜನೆ ಜಾರಿಯಾದ ಬಳಿಕ 114.4 ಲಕ್ಷ ಜನರು ಸಂಚಾರ ನಡೆಸುತ್ತಿದ್ದಾರೆ" ಎಂದು ಮಾಹಿತಿ ನೀಡಿದರು.
"ಹೊಸ ಬಸ್ ಖರೀದಿ ಮಾತ್ರವಲ್ಲ. ನಿಗಮಗಳಲ್ಲಿ ಖಾಲಿ ಇರುವ ಚಾಲಕ, ನಿರ್ವಾಹಕ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇಲಾಖೆಯಲ್ಲಿನ 9 ಸಾವಿರ ಖಾಲಿ ಹುದ್ದೆಗಳ ಭರ್ತಿಗೆ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಲಾಗುತ್ತದೆ" ಎಂದರು.
"ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್ಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಬಸ್ ಸೇವೆಗೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆ ಇರುವ ಮಾರ್ಗದಲ್ಲಿ ಹೆಚ್ಚುವರಿ ಟ್ರಿಪ್ಗಳನ್ನು ಓಡಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ" ಎಂದು ಸಚಿವರು ಹೇಳಿದರು.
ಕರ್ನಾಟಕದ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಗ್ಯಾರಂಟಿಗಳಲ್ಲಿ 'ಶಕ್ತಿ' ಸಹ ಒಂದು. ಯೋಜನೆಯಡಿ ಮಹಿಳೆಯರು ಸರ್ಕಾರಿ ಬಸ್ನಲ್ಲಿ ಶೂನ್ಯ ದರದ ಟಿಕೆಟ್ ಪಡೆದು ಉಚಿತವಾಗಿ ಪ್ರಯಾಣಿಸಬಹುದು. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಮೊದಲ ಗ್ಯಾರಂಟಿ ಯೋಜನೆ ಸಹ ಇದಾಗಿದೆ.
"ಕೆಎಸ್ಆರ್ಟಿಸಿಯಲ್ಲಿ 2000 ಚಾಲಕ ಕಂ ನಿರ್ವಾಹಕ, 300 ತಾಂತ್ರಿಕ ಸಹಾಯಕ ಹುದ್ದೆ. ವಾಯುವ್ಯ ಕರ್ನಾಟಕ ವಿಭಾಗದಲ್ಲಿ 2 ಸಾವಿರ ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ" ಎಂದು ಸಚಿವರು ಪರಿಷತ್ಗೆ ಮಾಹಿತಿ ನೀಡಿದರು.
107 ಹೊಸ ಬಸ್ ಹಂಚಿಕೆ; ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉತ್ತರ ನೀಡುವಾಗ, "ರಾಯಚೂರು ಜಿಲ್ಲೆಯ 7 ಸಾರಿಗೆ ಘಟಕಗಳಿಗೆ 107 ಹೊಸ ಬಸ್ಗಳನ್ನು ಒದಗಿಸಲಾಗಿದ್ದು, ಅವಶ್ಯಕತೆಗನುಗುಣವಾಗಿ ಜಿಲ್ಲೆಗೆ ಇನ್ನೂ ಹೊಸಬಸ್ಗಳು ಒದಗಿಸಲು ಬದ್ಧ" ಎಂದು ಹೇಳಿದರು.
"ಪೂರ್ಣಕವಚ ನಿರ್ಮಿತ 250 ವೇಗದೂತ ಸಾರಿಗೆಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ. ಪೂರ್ಣಕವಚ ನಿರ್ಮಿತ 93 ನಗರ ಸಾರಿಗೆ ಬಸ್ಗಳನ್ನು ಡಲ್ಟ್ ಆರ್ಥಿಕ ಸಹಾಯದಿಂದ ಖರೀದಿಸಲು ಮಂಜೂರಾತಿ ದೊರೆತಿದ್ದು, ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ" ಎಂದು ವಿವರ ಕೊಟ್ಟರು.
"ಮುಂದಿನ ದಿನಗಳಲ್ಲಿ ಪೂರ್ಣಗೊಂಡ ಹೊಸಬಸ್ ಡಿಪೋ ಜೊತೆಗೆ ಇತರೆ ಘಟಕಗಳಿಗೆ ಅವಶ್ಯಕತೆಗನುಗುಣವಾಗಿ ಹೊಸ ಬಸ್ಗಳನ್ನು ಒದಗಿಸಲಾಗುವುದು. ರಾಯಚೂರಿನಲ್ಲಿ ನೂತನ ಬಸ್ ಘಟಕದ ಕಾಮಗಾರಿ ಪೂರ್ಣಗೊಂಡಿದ್ದು,ಶೀಘ್ರದಲ್ಲಿ ಉದ್ಘಾಟಿಸಿ ಕಾರ್ಯಾಚರಣೆ ಪ್ರಾರಂಭಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟು 7 ಬಸ್ ಘಟಕಗಳಿದ್ದು,665 ಬಸ್ಗಳಿದ್ದು,ಅವುಗಳಲ್ಲಿ 654 ಬಸ್ಗಳು ಚಾಲನೆಯಲ್ಲಿವೆ" ಎಂದರು.












Click it and Unblock the Notifications