ಲಫಂಗ ರಾಜಕಾರಣ ಎನ್ನುವ ಸಿದ್ದು ಗೈರಾದವರ ವಿರುದ್ಧ ಏನು ಕ್ರಮ ಜರುಗಿಸುತ್ತಾರೆ?
Recommended Video

ಬೆಂಗಳೂರು, ಜನವರಿ 18 : 'ಬಿಜೆಪಿಯವರು ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಯಾವ ಶಾಸಕರು ಅವರ ಜೊತೆ ಇಲ್ಲ. 76 ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಗೆ ನಾಲ್ವರು ಶಾಸಕರು ಗೈರಾಗಿದ್ದರು.
ಶುಕ್ರವಾರ ಮಧ್ಯಾಹ್ನ 3.30ಕ್ಕೆ ನಿಗದಿಯಾಗಿದ್ದ ಸಭೆ, ಸಂಜೆ 4.30ರ ಬಳಿ ಆರಂಭವಾಯಿತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯರು ಶಾಸಕಾಂಗ ಪಕ್ಷದ ಸಭೆಯಲ್ಲಿ ಉಪಸ್ಥಿತರಿದ್ದರು. ಕಾಂಗ್ರೆಸ್ನ 80 ಶಾಸಕರ ಪೈಕಿ 76 ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ರಮೇಶ್ ಜಾರಕಿಹೊಳಿ ಸಭೆಯಿಂದ ದೂರವುಳಿದರು.

ಸಿದ್ದರಾಮಯ್ಯ ಪತ್ರಿಕಾಗೋಷ್ಠಿ
ಶಾಸಕಾಂಗ ಪಕ್ಷದ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು, 'ಲಫಂಗ ರಾಜಕಾರಣ ಆರಂಭವಾಗಿದ್ದೇ ಈಗ. ಬಿಜೆಪಿಯವರು ತಮ್ಮ ಬಳಿ 14 ಶಾಸಕರು ಇದ್ದಾರೆ ಎಂದು ಸುಳ್ಳು ಹೇಳುತ್ತಿದ್ದರು. ಇಂದು ಎಲ್ಲವೂ ಜನರಿಗೆ ತಿಳಿದಿದೆ' ಎಂದು ಹೇಳಿದರು.

4 ಶಾಸಕರು ಗೈರಾಗಿದ್ದರು
'76 ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಖುದ್ದು ಹಾಜರಾಗಿದ್ದರು. 4 ಶಾಸಕರು ಸಭೆಗೆ ಗೈರಾಗಿದ್ದರು. ಗೈರು ಹಾಜರಾದವರಿಗೆ ನೋಟಿಸ್ ನೀಡಿ ವಿವರಣೆ ಪಡೆಯುತ್ತೇವೆ. ಕಾಂಗ್ರೆಸ್ನ ಯಾವ ಶಾಸಕರು ಬಿಜೆಪಿಗೆ ಹೋಗಿಲ್ಲ. ಬಿಜೆಪಿಯವರು ಹೇಳಿದ್ದ ಸುಳ್ಳು ಈಗ ಬಯಲಾಗಿದೆ' ಎಂದು ಸಿದ್ದರಾಮಯ್ಯ ಟೀಕಿಸಿದರು.

ಯಾರು-ಯಾರು ಗೈರು ಹಾಜರಿ
ಶಾಸಕಾಂಗ ಪಕ್ಷದ ಸಭೆಗೆ
* ಚಿಂಚೋಳಿ ಶಾಸಕ ಉಮೇಶ್ ಜಾಧವ್
* ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ
* ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ
* ಅಥಣಿ ಶಾಸಕ ಮಹೇಶ್ ಕಮಟಳ್ಳಿ ಗೈರಾಗಿದ್ದರು.
'ಬಿ.ನಾಗೇಂದ್ರ ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಮಾಹಿತಿ ನೀಡಿದ್ದರು. ಉಮೇಶ್ ಜಾಧವ್ ನನಗೆ ಪತ್ರ ಬರೆದಿದ್ದರು' ಎಂದು ಸಿದ್ದರಾಮಯ್ಯ ಹೇಳಿದರು.

ಯಾವುದೇ ಮಾಹಿತಿ ನೀಡಿಲ್ಲ
ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹಿಳಿ ಮತ್ತು ಅಥಣಿ ಶಾಸಕ ಮಹೇಶ್ ಕಮಟಳ್ಳಿ ಯಾವುದೇ ಮಾಹಿತಿ ನೀಡದೆ ಸಭೆಗೆ ಗೈರಾಗಿದ್ದರು. ಇಬ್ಬರು ಶಾಸಕರು ಮುಂಬೈನ ಹೋಟೆಲ್ನಲ್ಲಿ ಇದ್ದಾರೆ. ಈ ಶಾಸಕರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾದು ನೋಡಬೇಕಿದೆ.
|
ಸಿದ್ದರಾಮಯ್ಯ ಟ್ವೀಟ್
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿ ಪಕ್ಷ ನಿಷ್ಠೆಯನ್ನು ಸಾಬೀತುಪಡಿಸಿದ ಶಾಸಕರೆಲ್ಲರಿಗೂ ಧನ್ಯವಾದಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಬಿಜೆಪಿ ನಾಯಕರ ಮಹಾ ಮೂರ್ಖತನ
ಶಾಸಕಾಂಗ ಸಭೆಯ ನಂತರವೂ ಬಿಜೆಪಿಗೆ ಈ ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂದು ಮನವರಿಕೆಯಾಗದಿದ್ದರೆ ಅದು ಬಿಜೆಪಿ ನಾಯಕರ ಮಹಾ ಮೂರ್ಖತನವಾಗುತ್ತದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
|
ದಿನೇಶ್ ಗುಂಡೂರಾವ್ ಟ್ವೀಟ್
80 ಶಾಸಕರ ಪೈಕಿ 76 ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿದ್ದರು. ಉಮೇಶ್ ಜಾಧವ್, ಬಿ.ನಾಗೇಂದ್ರ ಅನುಮತಿ ಪಡೆದುಕೊಂಡಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications