ಕಾಂಗ್ರೆಸ್ ಟಿಕೆಟ್ಗೆ 200 ಅರ್ಜಿ, ನವೆಂಬರ್ 15 ಅರ್ಜಿ ಹಾಕಲು ಕೊನೆ ದಿನ
ಬೆಂಗಳೂರು, ನವೆಂಬರ್ 13; ಕರ್ನಾಟಕ ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಕರೆ ನೀಡಿತ್ತು. ಅರ್ಜಿ ಪಡೆದುಕೊಂಡಿದ್ದ 800 ಆಕಾಂಕ್ಷಿಗಳ ಪೈಕಿ 200 ಮಂದಿ ಅರ್ಜಿ ಹಾಕಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿ 5 ಸಾವಿರ ಶುಲ್ಕ ಪಾವತಿ ಮಾಡಿ ಕೆಪಿಸಿಸಿಯಿಂದ 800 ಆಕಾಂಕ್ಷಿಗಳು ಅರ್ಜಿ ಪಡೆದಿದ್ದರು. ಇವರಲ್ಲಿ 200 ಜನರು ಅರ್ಜಿ ಹಾಕಿದ್ದು, ಅರ್ಜಿ ಸಲ್ಲಿಕೆ ಮಾಡಲು ನವೆಂಬರ್ 15 ಕೊನೆಯ ದಿನವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಕಾಂಕ್ಷಿಗಳು ಅರ್ಜಿ ಹಾಕುವ ಕುರಿತು ಮಾಹಿತಿ ನೀಡಿದ್ದರು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕದ ಜೊತೆ 2 ಲಕ್ಷದ ಡಿಡಿ ಸಲ್ಲಿಸಬೇಕು ಎಂದು ಹೇಳಿದ್ದರು. ಪರಿಶಿಷ್ಟರಿಗೆ ಡಿಡಿಯಲ್ಲಿ ಶೇ 50ರಷ್ಟು ರಿಯಾಯಿತಿ ಇದೆ ಎಂದು ಸ್ಪಷ್ಟಪಡಿಸಿದ್ದರು.
ಟಿಕೆಟ್ ಆಕಾಂಕ್ಷಿಗಳಿಂದ ಸಂಗ್ರಹಣೆ ಮಾಡಲಾದ ಹಣ ಕೆಪಿಸಿಸಿ ಕಟ್ಟಡ ಕಾಮಗಾರಿ ನಿಧಿಗೆ ಜಮೆಯಾಗಲಿದೆ. ಪಕ್ಷದ ಕಟ್ಟಡ, ಪಕ್ಷದ ನಿಧಿ, ಚುನಾವಣಾ ಪ್ರಚಾರ ಮತ್ತು ಜಾಹೀರಾತಿಗೆ ಬಳಕೆ ಮಾಡಲಾಗುತ್ತದೆ ಎಂದು ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದರು.
ಯಾರು ಎಲ್ಲಿಂದ ಅರ್ಜಿ?; 92 ವರ್ಷದ ಶಾಮನೂರು ಶಿವಶಂಕರಪ್ಪ ಟಿಕೆಟ್ಗಾಗಿ ಅರ್ಜಿ ಹಾಕಿದ ಅತಿ ಹಿರಿಯರು. ಪ್ರಸ್ತುತ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರು. ಕೆ. ಆರ್. ನಗರದಿಂದ ಕಣಕ್ಕಿಳಿಯಲು ಅರ್ಜಿ ಹಾಕಿರುವ ಐಶ್ವರ್ಯಾ ಮಹದೇವ್ (27) ಅತಿ ಕಿರಿಯರು.
ಬಸವನಬಾಗೇವಾಡಿಯಿಂದ ಹಾಲಿ ಶಾಸಕ ಶಿವಾನಂದ ಪಾಟೀಲ್ ಮತ್ತೆ ಟಿಕೆಟ್ಗಾಗಿ ಅರ್ಜಿ ಹಾಕಿದ್ದಾರೆ. ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.
ಮಾಜಿ ಸಚಿವ ಎಚ್. ಸಿ. ಮಹದೇವಪ್ಪ ನಂಜನಗೂಡು ಕ್ಷೇತ್ರದಿಂದ ಟಿಕೆಟ್ಗಾಗಿ ಅರ್ಜಿ ಹಾಕಿದ್ದಾರೆ. ಮಹದೇವಪ್ಪ ಪುತ್ರ ಸುನೀಲ್ ಬೋಸ್ ಟಿ. ನರಸೀಪುರ ಕ್ಷೇತ್ರದಿಂದ ಟಿಕೆಟ್ ಬಯಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಆರ್. ಧ್ರುವನಾರಾಯಣ ನಂಜನಗೂಡು ಕ್ಷೇತ್ರದಿಂದ ಟಿಕೆಟ್ ಬಯಸಿದ್ದಾರೆ. ಚಿತ್ರನಟ ರಾಜೇಶ್ ಕೋಟ್ಯಾನ್ ಮೂಡಬಿದಿರೆ ಕ್ಷೇತ್ರದಿಂದ ಅರ್ಜಿ ಹಾಕಿದ್ದಾರೆ.
ಕಾಂಗ್ರೆಸ್ ಟಿಕೆಟ್ಗೆ ಬೇಡಿಕೆ; 2023ರ ಚುನಾವಣೆಗೆ ಕಾಂಗ್ರೆಸ್ ಪಕ್ಷ ಭರದಿಂದ ತಯಾರಿ ಆರಂಭಿಸಿದೆ. ಪಕ್ಷದ ಟಿಕೆಟ್ ಪಡೆಯಲು ಬಹು ಬೇಡಿಕೆ ಇದೆ. ಅದರಲ್ಲೂ ಕೆಲವೊಂದು ಕ್ಷೇತ್ರಗಳಲ್ಲಿ ಮೂರು, ನಾಲ್ಕು ಜನ ಆಕಾಂಕ್ಷಿಗಳು ಇದ್ದಾರೆ.
ಟಿಕೆಟ್ ಹಂಚಿಕೆ ಸುಸೂತ್ರವಾಗಿ ಬಗೆಹರಿಯುವುದಿಲ್ಲ ಎಂಬುದು ಕಾಂಗ್ರೆಸ್ ನಾಯಕರಿಗೂ ತಿಳಿದಿದೆ. ಆದ್ದರಿಂದ ಯಾವ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಒಂದು ಕಡೆ ಡಿ. ಕೆ. ಶಿವಕುಮಾರ್, ಮತ್ತೊಂದು ಕಡೆ ಸಿದ್ದರಾಮಯ್ಯ ಮಗದೊಂದು ಕಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರು ಟಿಕೆಟ್ಗಾಗಿ ಬೇಡಿಕೆ ಇಡಲಿದ್ದಾರೆ. ಖರ್ಗೆ ಅವರೇ ಕಾಂಗ್ರೆಸ್ ಅಧ್ಯಕ್ಷರಾಗಿರುವುದರಿಂದ ರಾಜ್ಯದ ರಾಜಕೀಯ ಪರಿಸ್ಥಿತಿ ಅವರಿಗೆ ಚೆನ್ನಾಗಿ ಅರಿವಿದೆ.
ಬೇರೆ ಪಕ್ಷದಿಂದ ಬಂದವರು; ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಮಾಜಿ ಶಾಸಕರು ಅನೇಕರು ಕಾಂಗ್ರೆಸ್ಗೆ ಆಗಮಿಸುತ್ತಿದ್ದಾರೆ. ಹಾಲಿ ಶಾಸಕರು ಸಹ ಬರುವ ಸಾಧ್ಯತೆ ಇದೆ.
ಬೇರೆ ಪಕ್ಷದಿಂದ ಬಂದ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗಲಿದೆಯೇ?. ಅವರಿಗೆ ಟಿಕೆಟ್ ನೀಡಿದರೆ ಸ್ಥಳೀಯ ನಾಯಕರ ಕಥೆ ಏನು? ಎಂಬುದು ಪ್ರಶ್ನೆಯಾಗಿದೆ.
ಹೈಕಮಾಂಡ್ ಟಿಕೆಟ್ ನೀಡಲು ಯಾವ ಮಾನದಂಡ ಅನುಸರಿಸುತ್ತದೆ. ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಟಿಕೆಟ್ ಹಂಚಿಕೆ ಮಾಡಲು ಯಾವ ಸೂತ್ರ ಅನುಸರಿಸುತ್ತಾರೆ? ಎಂದು ಕಾದು ನೋಡಬೇಕಿದೆ.












Click it and Unblock the Notifications