ಪ್ರಶ್ನೆ ಪತ್ರಿಕೆ ಸೋರಿಕೆ, ಪಿಯು ವಿದ್ಯಾರ್ಥಿಗಳಲ್ಲಿ ಭುಗಿಲೆದ್ದ ಆಕ್ರೋಶ
ಬೆಂಗಳೂರು,ಮಾರ್ಚ್,31: 'ಬೇಕೇ ಬೇಕು ನ್ಯಾಯ ಬೇಕು, ಧಿಕ್ಕಾರ ಧಿಕ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಧಿಕ್ಕಾರ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಶಿಕ್ಷಣ ಇಲಾಖೆ ಉತ್ತರ ನೀಡಬೇಕು' ಎಂದು ರಸಾಯನ ಪ್ರಶ್ನೆ ಪತ್ರಿಕೆ ಇಂದು ಪುನಃ ಸೋರಿಕೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಕೇಳಿ ಬಂದ ಆತಂಕ, ಆಕ್ರೋಶದ ದನಿಗಳಿವು.
ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಪುನಃ ಸೋರಿಕೆಯಾಗಿ ಪರೀಕ್ಷೆ ರದ್ದಾದ ಕಾರಣ ಮಲ್ಲೇಶ್ವರಂ ಬಳಿ ಇರುವ ಪಿಯು ಮಂಡಳಿ ಎದುರು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದು, ಅವರ ಸಹನೆಯ ಕಟ್ಟೆ ಒಡೆದು ಆಕ್ರೋಶ ಭುಗಿಲೆದ್ದಿದೆ. ಶಿಕ್ಷಣ ಇಲಾಖೆಯ ವಿರುದ್ಧ ಪ್ರತಿರೋಧದ ಧ್ವನಿಗಳು ಕೇಳಿ ಬರುತ್ತಿವೆ.[ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ, ಇಬ್ಬರು ಸಿಐಡಿ ವಶಕ್ಕೆ]
ದ್ವಿತೀಯ ಪಿಯುಸಿ ಪರೀಕ್ಷೆ ರಸಾಯನ ಶಾಸ್ತ್ರ ಪರೀಕ್ಷೆ ಮಾರ್ಚ್ 21ರಂದು ನಡೆಯಬೇಕಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯದಾದ ಕಾರಣ ಮಾರ್ಚ್ 31ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೆ ಪ್ರಶ್ನೆ ಪತ್ರಿಕೆ ಗುರುವಾರ ಮುಂಜಾನೆ 3.30 ರ ಸಮಯದಲ್ಲಿ ಬೆಂಗಳೂರು ಮತ್ತು ತುಮಕೂರು ಭಾಗದಲ್ಲಿ ವಾಟ್ಸಪ್ ಮೂಲಕ ಹರಿದಾಡಿದ ಕಾರಣ ಪರೀಕ್ಷೆಯನ್ನು ರದ್ದು ಪಡಿಸಲಾಗಿದ್ದು, ಇಂದು ಸಂಜೆಯೊಳಗೆ ಮರ ಪರೀಕ್ಷೆಯ ದಿನಾಂಕವನ್ನು ಘೋಷಿಸಲಾಗುವುದು. ['ಇಂದು ಸಂಜೆಯೊಳಗೆ ಮರು ಪರೀಕ್ಷೆ ದಿನಾಂಕ ಘೋಷಣೆ']
ವಿದ್ಯಾರ್ಥಿಗಳ ಆಕ್ರೋಶ ಎಷ್ಟಿದೆ?
ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಪಿಯು ಮಂಡಳಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಟ್ಟಡ ಗಾಜು ಪುಡಿಪುಡಿಯಾಗಿದೆ.['ಕಿಮ್ಮನೆ ರತ್ನಾಕರ ರಾಜೀನಾಮೆ ಅಗತ್ಯವಿಲ್ಲ']
ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಅಸ್ವಸ್ಥ
ಬೆಳಿಗ್ಗೆಯಿಂದಲೇ ತಿಂಡಿ, ನೀರು ಎಲ್ಲವನ್ನು ತೊರೆದು ಪ್ರತಿಭಟನೆಗೆ ನಿಂತ ವಿದ್ಯಾರ್ಥಿಗಳು ನಮಗೆ ನ್ಯಾಯ ಸಿಗುವವರೆಗೆ ನಮ್ಮ ಪ್ರತಿಭಟನೆ ಮುಂದುವರೆಯುವುದು ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ಸಮಯದಲ್ಲಿ ಕೆಲವು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
ಜೆಡಿಎಸ್ ವಿದ್ಯಾರ್ಥಿ ನಾಯಕ ಪೊಲೀಸರ ವಶ
ಪ್ರತಿಭಟನಾ ನಿರತ ಜೆಡಿಎಸ್ ವಿದ್ಯಾರ್ಥಿ ನಾಯಕ ಚಂದ್ರಶೇಖರ್ ಪ್ರತಿಭಟನೆ ವೇಳೆ ಕಟ್ಟಡದ ಮೇಲೇರಿ ಘೋಷಣೆ ಕೂಗಿದ್ದಾನೆ. ನ್ಯಾಯ ಸಿಗದಿದ್ದರೆ ಕಟ್ಡದ ಮೇಲಿನಿಂದ ಜಿಗಿಯುತ್ತೇನೆ ಎಂದು ಬೆದರಿಕೆ ಹಾಕಿದ ಕಾರಣ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಕಣ್ಣೀರಿಡುತ್ತಾ ಪೋಷಕರು ಹೇಳುವುದೇನು?
ಈ ವಿಷಯ ತಿಳಿದ ಪಿಯು ವಿದ್ಯಾರ್ಥಿಗಳು ಹಾಗೂ ಪೋಷಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಮೇಲೆ ಹರಿಹಾಯ್ದಿದ್ದು, ಈ ಅವ್ಯವಸ್ಥೆಯನ್ನು ಖಂಡಿಸಿದ್ದಾರೆ. ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಭವಿಷ್ಯದಲ್ಲಿ ಆಟವಾಡಲು ಯಾವ ಹಕ್ಕಿದೆ ಎಂದು ಪ್ರಶ್ನಿಸುತ್ತಿದ್ದಾರೆ. [ಫೋಟೋ: ಎಎನ್ ಐ ಟ್ವಿಟ್ಟರ್]
ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವವರಿದ್ದರು?
ಇಡೀ ಕರ್ನಾಟಕದಾದ್ಯಂತ 1.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವವರಿದ್ದರು. ಇದೀಗ ಇವರಲ್ಲಿ ಭವಿಷ್ಯದ ಬಗ್ಗೆ ಚಿಂತೆ ಮೂಡಿದೆ. ಸಿಇಟಿ, ಕಾಮೆಡ್ ಕೆ ಪರೀಕ್ಷೆಯ ಬಗ್ಗೆ ಆತಂಕ ಹೆಚ್ಚಿದೆ. ಈ ರೀತಿಯಾಗಿ ಪರೀಕ್ಷೆ ದಿನಾಂಕಗಳನ್ನು ಮುಂದೂಡುತ್ತಿದ್ದರೆ ಯಾವುದಕ್ಕೆ ಹೆಚ್ಚು ಒತ್ತು ನೀಡುವುದು ಎನ್ನುತ್ತಿದ್ದಾರೆ
ಕಿಮ್ಮನೆ ರತ್ನಾಕರ್ ಹೇಳುವುದೇನು?
ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಈ ಗೊಂದಲದ ನೈತಿಕ ಹೊಣೆಯನ್ನು ನಾನು ಹೊರುತ್ತೇನೆ. ಈಗಾಗಲೇ ತನಿಖೆಗೆ ಆದೇಶ ನೀಡಿದ್ದೇನೆ ಎಂದು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿರುವ ರಾಜಕೀಯ ಪ್ರತಿನಿಧಿಗಳಿಗೆ ಉತ್ತರಿಸಿದ್ದಾರೆ.
Bengaluru: Students angry over repeated question paper leak of class 12th,say "will not take re-examination anymore"https://t.co/w7BjeYbmQr
— ANI (@ANI_news) March 31, 2016