ಪಿಎಫ್ಐ ತರಬೇತಿಯಲ್ಲಿ ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳ ಭಾಗಿ: ಪೊಲೀಸರ ಹೇಳಿಕೆ
ಬೆಂಗಳೂರು, ಅ.04: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಚಟುವಟಿಕೆಗಳ ಕುರಿತು ತನಿಖೆ ನಡೆಸುತ್ತಿರುವ ರಾಜ್ಯ ಪೊಲೀಸರು, ಅದರ ಕೇಡರ್ಗೆ ತರಬೇತಿ ನೀಡುವಲ್ಲಿ ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವ ಆರೋಪದ ಬಗ್ಗೆ ಪರಿಶೀಲಿಸುತ್ತಿದ್ದಾರೆ.
ಈ ಕುರಿತ ತನಿಖೆಯ ಭಾಗವಾಗಿ ಅಧಿಕಾರಿಗಳ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಜಿ ಪೊಲೀಸ್ ಅಧಿಕಾರಿಗಳು ತಮಿಳುನಾಡು ಮತ್ತು ಕೇರಳ ಪಡೆಗಳಿಗೆ ಸೇರಿದವರು ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಸ್ಟಡಿಯಲ್ಲಿರುವ ಪಿಎಫ್ಐ ಕಾರ್ಯಕರ್ತರ ವಿಚಾರಣೆ ವೇಳೆ ಮಾಜಿ ಅಧಿಕಾರಿಗಳು ತರಬೇತಿ ನೀಡುವಲ್ಲಿ ಶಾಮೀಲಾದ ವಿವರಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪೊಲೀಸ್ ವಿಚಾರಣೆ ನಿರ್ವಹಿಸುವ ಕುರಿತು ತರಬೇತಿ
"ಕೆಲವು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತರಬೇತಿ ನಡೆದಿತ್ತು. ಇಬ್ಬರು ಅಧಿಕಾರಿಗಳು ತನಿಖಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ, ಪೊಲೀಸ್ ವಿಚಾರಣೆಯನ್ನು ಹೇಗೆ ನಿರ್ವಹಿಸಬೇಕು ಮತ್ತು ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಅವರು ಏನು ಮಾಡಬೇಕು ಎಂಬ ಹಲವು ಸಂಗತಿಗಳ ಬಗ್ಗೆ ತರಬೇತಿ ನೀಡಿದ್ದಾರೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ತರಬೇತಿ ನೀಡಿದ ಅಧಿಕಾರಿಗಳಲ್ಲಿ ಒಬ್ಬರು ಮಾಜಿ ಐಪಿಎಸ್ ಅಧಿಕಾರಿ ಎಂದು ತಿಳಿಸಿದ್ದಾರೆ.

ಕಾನೂನಿನ ತರಬೇತಿ ನೀಡಿದ್ದ ಅಧಿಕಾರಿಗಳು
"ಈಗಿನಂತೆ, ಅವರ ಹೇಳಿಕೆಯನ್ನು ತೆಗೆದುಕೊಳ್ಳಲು ನಾವು ಅವರ ವಿವರಗಳನ್ನು ಪಡೆಯುತ್ತಿದ್ದೇವೆ. ಅವರು ಸಂಘಟನೆಯ ಭಾಗವಾಗಿದ್ದಾರೆ ಎಂದು ನಾವು ನಂಬುವುದಿಲ್ಲ," ಎಂದು ಅಧಿಕಾರಿ ಹೇಳಿದರು.
ಆದರೆ, ಮಂಗಳೂರಿನಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪಿಎಫ್ಐ ಮಾಜಿ ಕಾರ್ಯಕರ್ತರೊಬ್ಬರು, ಪೊಲೀಸರು ಸುಳ್ಳು ನಿರೂಪಣೆಯನ್ನು ಸೃಷ್ಟಿಸುತ್ತಿದ್ದಾರೆ ಮತ್ತು ಅಧಿಕಾರಿಗಳು ಕಾನೂನು ತರಬೇತಿ ನೀಡುವಲ್ಲಿ ತೊಡಗಿದ್ದರು ಎಂದಿದ್ದಾರೆ.
"ಕಾನೂನು ತರಬೇತಿ ಮೂಲಭೂತ ಕಾನೂನು ಹಕ್ಕುಗಳ ಬಗ್ಗೆ. ಇದು ಯಾವುದೋ ಭಯೋತ್ಪಾದಕ ಶಿಬಿರ ಎಂದು ಪೊಲೀಸರು ನಿರೂಪಣೆಯನ್ನು ರಚಿಸುತ್ತಿದ್ದಾರೆ" ಎಂದು ಮಾಜಿ ಪಿಎಫ್ಐ ಕಾರ್ಯಕರ್ತ ಆರೋಪಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಕ್ಷಮೆಯಾಚನೆಗೆ ಬಿಜೆಪಿ ಪಟ್ಟು
ಕಳೆದ ವಾರ, ಕೇಂದ್ರ ಸರ್ಕಾರವು PFI ಮತ್ತು ಅದರ ಎಂಟು ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಸಂಘ ಎಂದು ಐದು ವರ್ಷಗಳ ಅವಧಿಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧ ಮಾಡಿದೆ.
ಇತ್ತ, ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪಿಎಫ್ಐ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟ ಆರೋಪದ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಪಿಎಫ್ಐ ವಿರುದ್ಧದ ಪ್ರಕರಣಗಳನ್ನು ಕೈಬಿಡುವ ಮೂಲಕ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
"ಪಿಎಫ್ಐ ಅನ್ನು ಕೇಂದ್ರ ಸರ್ಕಾರ ನಿಷೇಧಿಸಿರುವುದರಿಂದ ಈಗ ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಬೇಕು" ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.

ರೈತ, ದಲಿತ, ಕಾರ್ಮಿಕ, ಕಮ್ಯುನಿಸ್ಟರ ಮೇಲಿನ ಕೇಸ್ ವಾಪಸ್;ಸಿದ್ದರಾಮಯ್ಯ
ಆದರೆ, ಆರೋಪಗಳನ್ನು ನಿರಾಕರಿಸಿರುವ ಸಿದ್ದರಾಮಯ್ಯ, ಬಿಜೆಪಿ ಮತ್ತು ಸಂಘ ಪರಿವಾರದವರು ಸುಳ್ಳನ್ನು ಪೂಜಿಸುವ ದೇವರು ಎಂದು ಕಿಡಿಕಾರಿದ್ದಾರೆ.
"ಪಿಎಫ್ಐ ಬೆಳೆಯಲು ಸಹಾಯ ಮಾಡುತ್ತಿದ್ದೇನೆ ಮತ್ತು ಕಾಂಗ್ರೆಸ್ ಸರ್ಕಾರವು ಪಿಎಫ್ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂಪಡೆದಿದೆ ಎಂದು ಅವರು ನನ್ನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.
ಪಿಎಫ್ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂಪಡೆದಿರುವ ಕುರಿತು ವಿವರ ನೀಡುವಂತೆ ಬಿಜೆಪಿ ಸರ್ಕಾರಕ್ಕೆ ನಾಲ್ಕು ಪತ್ರಗಳನ್ನು ಬರೆದಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
"ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಿಎಫ್ಐ ಕಾರ್ಯಕರ್ತರ ವಿರುದ್ಧದ ಯಾವುದೇ ಪ್ರಕರಣವನ್ನು ಹಿಂಪಡೆದಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಬದಲಿಗೆ, ನಾನು ಸಿಎಂ ಆಗಿದ್ದಾಗ ರೈತರು, ದಲಿತರು, ಕಾರ್ಮಿಕರು, ಕಮ್ಯುನಿಸ್ಟರು ಮತ್ತು ಇತರ ನಾಯಕರ ಮೇಲೆ ಹಾಕಲಾಗಿದ್ದ ಕೇಸ್ಗಳನ್ನು ಹಿಂಪಡೆಯಲಾಗಿತ್ತು"ಎಂದು ಮಾಹಿತಿ ನೀಡಿದ್ದಾರೆ.
ಕಳೆದ ವಾರ, ಕರ್ನಾಟಕ ಪೊಲೀಸರು PFI ಮತ್ತು ಅಂಗಸಂಸ್ಥೆಗಳ 42 ಕಚೇರಿಗಳನ್ನು ಮುಚ್ಚಿಸಿದ್ದಾರೆ. ಶೋಧ, ಜಪ್ತಿ ಮತ್ತು ಕಚೇರಿ ಮುಚ್ಚುವ ಕಾರ್ಯಾಚರಣೆಯಲ್ಲಿ ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ 28 ಕಚೇರಿಗಳನ್ನು ಸೀಲ್ ಮಾಡಲಾಗಿದೆ.
ಹಿರಿಯ ಅಧಿಕಾರಿಗಳ ಪ್ರಕಾರ, ಮಂಗಳೂರು ನಗರ (12), ಉಡುಪಿ (9), ದಕ್ಷಿಣ ಕನ್ನಡ (7), ಕಲ್ಬುರ್ಗಿ (4), ಬೆಂಗಳೂರು ನಗರ (4) ಮತ್ತು ಇತರೆಡೆ ಕಚೇರಿ ಸೀಲ್ ಮಾಡುವ ಕಾರ್ಯಾಚರಣೆ ನಡೆದಿದೆ.












Click it and Unblock the Notifications