ಕರಾಳ ಶುಕ್ರವಾರ, ಅಪಘಾತಕ್ಕೆ 18 ಜನರು ಬಲಿ
ಬೆಂಗಳೂರು, ಫೆಬ್ರವರಿ 19 : ರಾಜ್ಯದ ಮೂರು ಜಿಲ್ಲೆಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 18 ಜನರು ಮೃತಪಟ್ಟಿದ್ದಾರೆ. ಚಿತ್ರದುರ್ಗ, ಗದಗ ಮತ್ತು ಹಾಸನ ಜಿಲ್ಲೆಯಲ್ಲಿ ಈ ಅಪಘಾತಗಳು ನಡೆದಿವೆ. ಚಿತ್ರದುರ್ಗದಲ್ಲಿ ಸಂಭವಿಸಿದ ಅಪಘಾತದಲ್ಲಿ 12 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಹಾಸನ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಂಡೀಹಳ್ಳಿ ಸಮೀಪ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಮೃತಪಟ್ಟವರೆಲ್ಲೂ ಬಂಟ್ವಾಳ ಮೂಲದವರಾಗಿದ್ದು, ಬೆಂಗಳೂರಿನಿಂದ ಮೂಡಬಿದಿರೆಗೆ ತೆರಳುತ್ತಿದ್ದರು. [ಅಪಘಾತದಲ್ಲಿ ಮೃತಪಟ್ಟ ಟೆಕ್ಕಿ ದೇಹ ಆಸ್ಪತ್ರೆಗೆ ದಾನ]

ಮೃತಪಟ್ಟವರನ್ನು ಜೈಕೀರ್ತಿ ಇಂದ್ರ (55), ವಾಗೇಶ್ವರಿ (50) ಮತ್ತು ಪ್ರಶಾಂತ್ (30) ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಶವಗಳು ಒಳಗೆ ಸಿಲುಕಿಕೊಂಡಿದ್ದವು. ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. [ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]
ಗದಗ ವರದಿ : ಬೈಕ್ಗೆ ಟಾಟಾ ಸಫಾರಿ ಕಾರು ಡಿಕ್ಕಿ ಹೊಡೆದು ಮೂರು ಜನರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶಿರಹಟ್ಟಿ ತಾಲೂಕಿನ ಚಿಕ್ಕಸವಣೂರು-ನೆಲೋಗಲ್ ರಸ್ತೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ಅಜಿತ್ (35), ಮಲ್ಲೇಶಪ್ಪ (55), ಫಕ್ಕಿಲೇಶ್ (45) ಎಂದು ಗುರುತಿಸಲಾಗಿದೆ. ಶಿರಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿತ್ರದುರ್ಗ : ಶುಕ್ರವಾರ ಮುಂಜಾನೆ ಚಿತ್ರದುರ್ಗ ತಾಲೂಕಿನ ಮಾಡಗನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 12 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾರಿ ಮತ್ತು ಟಾಟಾ ಏಸ್ ವಾಹನದ ನಡುವೆ ಈ ಅಪಘಾತ ಸಂಭವಿಸಿದೆ. ಟಾಟಾ ಏಸ್ಗೆ ಡಿಕ್ಕಿ ಹೊಡೆದ ಲಾರಿ, ಅದರ ಮೇಲೆ ಉರುಳಿ ಬಿದ್ದಿದೆ. ಇದರಿಂದಾಗಿ ವಾಹನದಲ್ಲಿದ್ದ 12 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. [ಅಪಘಾತದ ವರದಿ ಇಲ್ಲಿದೆ]











Click it and Unblock the Notifications