40% ಕಮೀಷನ್ ದಂಧೆ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದರೆ 100 ಶಾಸಕರ ಅಕ್ರಮ ಬಯಲು: ಕೆಂಪಣ್ಣ
ಬೆಂಗಳೂರು, ಆ. 25: ರಾಜ್ಯ ಸರ್ಕಾರದ ಸಚಿವರ 40 ಪರ್ಸೆಂಟ್ ಕಮೀಷನ್ ದಂಧೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆದರೆ ಸಚಿವರು ಸೇರಿ ನೂರಕ್ಕೂ ಹೆಚ್ಚು ಶಾಸಕರ ಅಕ್ರಮ ಬಯಲಾಗಲಿದೆ. ಸಚಿವರು ಸೇರಿ 25 ಶಾಸಕರ ಕಮೀಷನ್ ದಂಧೆಯ ದಾಖಲೆಗಳನ್ನು ನಮ್ಮ ಸಂಘ ಒದಗಿಸಲಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಅರೋಪ ಮಾಡಿದ್ದಾರೆ.
ಬೊಮ್ಮಾಯಿ ಸರ್ಕಾರದ 40 ಪರ್ಸೆಂಟ್ ಕಮೀಷನ್ ದಂಧೆಯ ಬಗ್ಗೆ 'ಒನ್ಇಂಡಿಯಾ ಕನ್ನಡ' ಜತೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಹಲವು ಮಹತ್ವದ ಅರೋಪ ಮಾಡಿದರು.
ಮೋದಿ ಆಗಮನದ ಹೊತ್ತಲ್ಲೇ ಬಸವಳಿದ ಬಿಜೆಪಿಗೆ ಮತ್ತೆ 40% ಗುಮ್ಮ!
ಬೊಮ್ಮಾಯಿ ಸರ್ಕಾರದ 40 ಪರ್ಸೆಂಟ್ ಕಮೀಷನ್ ದಂಧೆಯ ಬಗ್ಗೆ ಎರಡನೇ ಸಲ ಬಹಿರಂಗ ಆರೋಪ ಮಾಡಿರುವ ಗುತ್ತಿಗೆದಾರರ ಸಂಘ ಈ ಸಲ ಸಚಿವರ - ಶಾಸಕರ ಕಮೀಷನ್ ದಂಧೆಯ ಬಗ್ಗೆ ತನಿಖೆ ನಡೆಸಲು ಸ್ವತಂತ್ರ್ಯ ನ್ಯಾಯಾಂಗ ತನಿಖೆಗೆ ಅಗ್ರಹಿಸಿ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸುವ ನಿರ್ಣಯ ಕೈಗೊಂಡಿದೆ. ಈ ಸಂಬಂಧ ವಕೀಲರ ಸಲಹೆಗೆ ಮುಂದಾಗಿದೆ.
ಗುತ್ತಿಗೆ ಪಡೆಯುವ ಗುತ್ತಿಗೆದಾರರು ಸಚಿವರಿಗೆ ಹಾಗೂ ಶಾಸಕರಿಗೆ 40 ಪರ್ಸೆಂಟ್ ಕಮೀಷನ್ ರೂಪದಲ್ಲಿ ಲಂಚ ಕೊಡಬೇಕು. ಭ್ರಷ್ಟಾಚಾರ ಕ್ಯಾನ್ಸರ್ ಗಿಂತಲೂ ದೊಡ್ಡ ಅಪಾಯಕಾರಿಯಾಗಿ ಬೆಳೆದಿದೆ. ಸ್ವತಂತ್ರ ನ್ಯಾಯಾಂಗ ತನಿಖೆ ನಡೆದರೆ 100 ಕ್ಕೂ ಹೆಚ್ಚು ಸಚಿವರು, ಶಾಸಕರ ಅಕ್ರಮ ಬಯಲಾಗಿದೆ. ಈ ಕಮೀಷನ್ ಕೇವಲ ಬಿಜೆಪಿ ಪಕ್ಷದ ಸಚಿವರು ಮತ್ತು ಶಾಸಕರಿಗೆ ಸೀಮಿತವಾಗಿಲ್ಲ. ಎಲ್ಲಾ ಪಕ್ಷಗಳ ಶಾಸಕರು ಬೆತ್ತಲೆಯಾಗಲಿದ್ದಾರೆ. ನ್ಯಾಯಾಂಗ ತನಿಖೆ ನಡೆದರೆ, ನಮ್ಮ ಸಂಘವೊಂದೇ ಪ್ರಭಾವಿ ಸಚಿವರು ಸೇರಿದಂತೆ 25 ಶಾಸಕರ ವಿರುದ್ಧ ದಾಖಲೆಗಳನ್ನು ಸಲ್ಲಿಸಲು ತಯಾರಿದ್ದೇವೆ. ನಮಗೆ ಕಾನೂನು ಬಗ್ಗೆ ಅರಿವು ಕಡಿಮೆ. ಈ ಸಲ ನಮ್ಮ ನಡೆ ಅರೋಪಕ್ಕೆ ಸೀಮಿತವಾಗಿಲ್ಲ. ನ್ಯಾಯಾಂಗ ತನಿಖೆಗೆ ಮನವಿ ಮಾಡಿ ನ್ಯಾಯಾಲಯದ ಮೊರೆ ಹೋಗುವ ಸಂಬಂಧ ವಕೀಲರೊಂದಿಗೆ ಚರ್ಚಿಸುತ್ತಿದ್ದೆವೆ. ವಕೀಲರ ಕಾನೂನು ಸಲಹೆ ಪಡೆದು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇವೆ. ಅತಿ ಶೀಘ್ರದಲ್ಲಿಯೇ ನ್ಯಾಯಾಲಯಕ್ಕೆ ರಿಟ್ ಸಲ್ಲಿಸುವ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಕೆಂಪಣ್ಣ 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದರು.
ಗುತ್ತಿಗೆದಾರರು ವೈಯಕ್ತಿಕವಾಗಿ ದೂರು ಸಲ್ಲಿಸುವುದಿಲ್ಲ
ಕಮೀಷನ್ ದಂಧೆ ವಿರುದ್ಧ ಯಾಕೆ ದೂರು ನೀಡುತ್ತಿಲ್ಲ ? ನಿಮಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲವೇ ? ಅಥವಾ ನಿಮ್ಮ ಯೋಗಕ್ಷೇಮಕ್ಕಾಗಿ ಭ್ರಷ್ಟ ವ್ಯವಸ್ಥೆ ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೆಂಪಣ್ಣ ಅವರು, ಅನೇಕ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ವೈಯಕ್ತಿಕ ಶಾಸಕರು, ಸಚಿವರ ಮೇಲೆ ಕೇಸು ದಾಖಲಿಸಿದರೆ ಗುತ್ತಿಗೆದಾರರೇ ಸಲ್ಲಿಸಬೇಕು. ಈಗಾಗಲೇ ಹಲವಾರು ಗುತ್ತಿಗೆ ಕಾಮಗಾರಿ ನಡೆಸಿದ್ದು, ವರ್ಷಗಳಿಂದ ಹಣ ಬಿಡುಗಡೆ ಮಾಡದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಒಂದು ವೇಳೆ ವೈಯಕ್ತಿಕವಾಗಿ ಕೇಸು ದಾಖಲಿಸಿದರೆ ಹಣ ಬಿಡುಗಡೆ ಮಾತ್ರವಲ್ಲ, ಜೀವನ ಪರ್ಯಂತ ಅವರು ಗುತ್ತಿಗೆ ಕೆಲಸವನ್ನು ಕೈ ಬಿಡಬೇಕಾದ ಸನ್ನಿವೇಶಗಳು ಎದುರಾಗುತ್ತವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷನಾಗಿ ಅವರ ಹಿತ ಕಾಯುವ ಉದ್ದೇಶದಿಂದ ವೈಯಕ್ತಿಕ ಶಾಸಕರು ಹಾಗೂ ಸಚಿವರ ವಿರುದ್ಧ ಕೇಸು ದಾಖಲಿಸುತ್ತಿಲ್ಲ. ಇನ್ನು ಮುಂದೆ ಭ್ರಷ್ಟಾಚಾರದ ಬಗ್ಗೆ ಸಹಿಸಿಕೊಳ್ಳುವ ಪ್ರಮೇಯವೇ ಇಲ್ಲ ಎಂದು ಕೆಂಪಣ್ಣ ಸ್ಪಷ್ಟಪಡಿಸಿದ್ದಾರೆ.
ಸಚಿವರೊಬ್ಬರು ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ
ಕೇವಲ ಅರೋಪ ಮಾಡಿದ್ದಕ್ಕೆ ಕೆಲವು ಗುತ್ತಿಗೆದಾರರಿಗೆ ಗುತ್ತಿಗೆ ನೀಡದಂತೆ ಸಚಿವರೊಬ್ಬರು ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಇಬ್ಬರು ಗುತ್ತಿಗೆದಾರರು ಉಪ ಗುತ್ತಿಗೆ ಪಡೆದ ಕೆಲಸ ಮಾಡುವಂತಾಗಿದೆ. ಸಚಿವರ, ಶಾಸಕರ ಬೆದರಿಕೆಗೆ ಒಳಗಾಗುವ ಅಧಿಕಾರಿಗಳು ನ್ಯಾಯ ಬದ್ಧವಾಗಿದ್ದರೂ ಗೊತ್ತಿಗೆದಾರರಿಗೆ ಗುತ್ತಿಗೆ ನೀಡುತ್ತಿಲ್ಲ. ಹೀಗಾಗಿ ನಾವು ಕ್ರಿಮಿನಲ್ ಕೇಸು ದಾಖಲಿಸಲು ಹಿಂದೇಟು ಹಾಕುತ್ತಿದ್ದೇವೆ. ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ರೆ, ಖಂಡಿತ ನಮ್ಮ ಸಂಘದಲ್ಲಿ ಈಗಾಗಲೇ ಲಭ್ಯ ಇರುವ ದಾಖಲೆಗಳನ್ನು ಒದಗಿಸುತ್ತೇವೆ. ಎಲ್ಲಾ ಪಕ್ಷಗಳ ಶಾಸಕರು ಕಮೀಷನ್ ದಂಧೆಯಲ್ಲಿ ಭಾಗಿಯಾಗಿರುವ ಸತ್ಯ ಹೊರ ಬರಲಿದೆ ಎಂದು ಕೆಂಪಣ್ಣ ತಿಳಿಸಿದ್ದಾರೆ.
ನಾವು ಸುಮ್ಮನೆ ಆರೋಪ ಮಾಡಲ್ಲ
ಇನ್ನು ಗುತ್ತಿಗೆದಾರರ ಸಂಘ ಒಂದು ಪಕ್ಷದ ಮಾತು ಕೇಳಿ ಆರೋಪ ಮಾಡುತ್ತಿದೆ ಎಂದು ಬಿಜೆಪಿ ಸರ್ಕಾರದ ಕೆಲವು ಸಚಿವರು ಆರೋಪ ಮಾಡುತ್ತಿದ್ದಾರೆ. ಈ ಸರ್ಕಾರದ ಸಚಿವರು, ಶಾಸಕರು ಪ್ರಾಮಾಣಿಕರಾಗಿದ್ದರೆ, ಧರ್ಮಸ್ಥಳ ಮಂಜುನಾಥ ಸ್ವಾಮಿ ಮುಂದೆ ಎದುರು ಆಣೆ ಮಾಡಲಿ. ಒಂದು ರೂಪಾಯಿ ಕಮೀಷನ್ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ. ನಾವು ಈ ಸವಾಲು ಸ್ವೀಕರಿಸೋಕೆ ಸಿದ್ಧ ಇದ್ದೀವಿ. ಯಾರ ವಿರುದ್ಧವೂ ನಾವು ಸುಮ್ಮನೆ ಆರೋಪ ಮಾಡಲ್ಲ. ನಮ್ಮ ಗುತ್ತಿಗೆದಾರರಿಗೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಸುಮ್ಮನಿರುವಂತಾಗಿದೆ. ಸಂಘದ ಬಗ್ಗೆ ಆರೋಪ ಮಾಡುವ ಸಚಿವರು ಧರ್ಮಸ್ಥಳ ಮಂಜುನಾಥ ಸ್ವಾಮಿ ಮುಂದೆ ಆಣೆ ಮಾಡಲಿ ಎಂದು ಪರೋಕ್ಷವಾಗಿ ಅರೋಗ್ಯ ಸಚಿವ ಡಾ.ಕೆ. ಸುಧಾಕರ್ ವಿರುದ್ಧ ಗುಡುಗಿದ್ದಾರೆ.
ಈಗಾಗಲೇ ದಾಖಲೆಗಳನ್ನು ಕ್ರೋಢೀಕರಿಸಲಾಗಿದೆ
ಕರ್ನಾಟಕ ಗುತ್ತಿಗೆದಾರರ ಸಂಘ ನ್ಯಾಯಾಂಗ ತನಿಖೆ ಕೋರಿ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ. ಸಂಘದ ಮೂಲಗಳ ಪ್ರಕಾರ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮತ್ತು ಮುನಿರತ್ನ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಲು ಗುತ್ತಿಗೆದಾರರ ಸಂಘ ಮುಂದಾಗಿದೆ ಎಂದು ತಿಳಿದು ಬಂದಿದೆ. ಕೆಂಪಣ್ಣ ಆರೋಪದ ಬಗ್ಗೆ ಅವಹೇಳನ ಮಾಡಿದ ಅರೋಗ್ಯ ಸಚಿವರ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಈಗಾಗಲೇ ದಾಖಲೆಗಳನ್ನು ಕ್ರೋಢೀಕರಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋದಲ್ಲಿ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಲು ಸಂಘ ತೀರ್ಮಾನಿಸಿದೆ. ಒಂದು ವೇಳೆ ನ್ಯಾಯಾಂಗ ತನಿಖೆಗೆ ವಹಿಸಿದಲ್ಲಿ 25 ಕ್ಕೂ ಹೆಚ್ಚು ಶಾಸಕರು, ಸಚಿವರ ಅಕ್ರಮದ ದಾಖಲೆಗಳನ್ನು ಒದಗಿಸಲು ಚಿಂತನೆ ನಡೆದಿದೆ ಎಂದು ಗೊತ್ತಾಗಿದೆ.