ಪಿಎಸ್ಐ ನೇಮಕಾತಿ ಅಕ್ರಮ ಸರಿಯಾಗಿ ತನಿಖೆಯಾದರೆ ಸಿಎಂ ಬದಲು ನಿಶ್ಚಿತ: ಪ್ರಿಯಾಂಕ್ ಖರ್ಗೆ
ಕಲಬುರಗಿ, ಏಪ್ರಿಲ್ 29: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿನಿತ್ಯ ಒಂದೊಂದು ಮಾಹಿತಿ, ಸಾಕ್ಷಿ ನೀಡಿ ಸರ್ಕಾರನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಪಿಎಸ್ಐ ನೇಮಕಾತಿಗೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ವಿಚಾರ ತಿಳಿಸಿದ್ದಾರೆ.
ಶುಕ್ರವಾರ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಸ್ಥಳೀಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನ ಸರ್ಕಾರದ ಸಾಧನೆಯಲ್ಲ, ಇದೀಗ ದಿವ್ಯಾ ಹಾಗರಗಿ ಅವರನ್ನು ಬಂಧಿಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಇದು ಹಾಸ್ಯಾಸ್ಪದ ವಿಚಾರ. ಸಂಪೂರ್ಣ ತನಿಖೆ ಯಾವ ದಿಕ್ಕಿನಲ್ಲಿ ಸಾಗಿದೆ ಎನ್ನುವ ಮಾಹಿತಿ ಗೃಹ ಸಚಿವರಿಗೆ ಅರಿವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಆರ್.ಡಿ. ಪಾಟೀಲ್, ದಿವ್ಯಾ ಹಾಗರಗಿ ಬಂಧನ ಇದು ಪ್ರಾಥಮಿಕ ಹಂತ ಅಷ್ಟೇ, ಹಗರಣದಲ್ಲಿ ಯಾರು ಯಾರಿಗೆ ಹಣ ನೀಡಿದ್ದಾರೆ, ಹಗರಣದ ವ್ಯಾಪ್ತಿ ಎಷ್ಟು ಎಂಬುದರ ಬಗ್ಗೆ ತನಿಖೆಯಾಗಬೇಕು. 545 ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ ಪಟ್ಟಿಯನ್ನು ರದ್ದುಗೊಳಿಸಿದ್ದು ಸ್ವಾಗತಾರ್ಹ. ಆದರೆ ಸಾಕಷ್ಟು ಅಭ್ಯರ್ಥಿಗಳಲ್ಲಿ ಈ ನಿರ್ಣಯ ಗೊಂದಲ ಮೂಡಿಸಿದೆ. ಸರ್ಕಾರ ತನ್ನ ನಿಲುವು ಸ್ಪಷ್ಟವಾಗಿ ತಿಳಿಸಿಲ್ಲ. ಕೆಲವು ಆತಂಕಗಳು ಅಭ್ಯರ್ಥಿಗಳಲ್ಲಿ ಇದೆ. ಆರೋಪಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ಅಂತ ಸರ್ಕಾರ ಹೇಳಿದೆ. ಇದು ಲಿಖಿತ ಪರೀಕ್ಷೆಯೋ ಅಥವಾ ದೈಹಿಕ ಪರೀಕ್ಷೆಯೋ ಅನ್ನುವುದನ್ನು ಸ್ಪಷ್ಟಪಡಿಸಿಲ್ಲ ಎಂದರು.

ಫಿಜಿಕಲ್, ಓಎಮ್ಆರ್, ಬ್ಲೂಟೂತ್ ಸೇರಿದಂತೆ ಮೂರು ರೀತಿಯಲ್ಲಿ ಅಕ್ರಮ
ಬೆಳಗಾವಿಯಲ್ಲಿ ವಿಗ್ ಹಾಕಿಕೊಂಡು ಪರೀಕ್ಷೆ ಬರೆಯಲು ಬಂದಿದ್ದ, ಫಿಜಿಕಲ್, ಓಎಮ್ಆರ್, ಬ್ಲೂಟೂತ್ ಸೇರಿದಂತೆ ಮೂರು ರೀತಿಯಲ್ಲಿ ಅಕ್ರಮ ನಡೆದಿದೆ. ಅಕ್ರಮ ಕೇವಲ ಕಲಬುರಗಿಗೆ ಸೀಮಿತವಾಗಿಲ್ಲ, ಕಲಬುರಗಿ, ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಬ್ಬಿದೆ. ಇನ್ನು ಏಳೆಂಟು ಜನ ಆರೋಪಿಗಳನ್ನು ಹೊರತುಪಡಿಸಿ ಉಳಿದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುತ್ತೇವೆ ಅಂತಾರೆ. ಆದರೆ ಪ್ರಕರಣದಲ್ಲಿ ಈಗಾಗಲೇ ಏಳೆಂಟು ಜನ ಅಭ್ಯರ್ಥಿಗಳ ಬಂಧನವಾಗಿದೆ. ಹಾಗಿದ್ದರೆ ಪ್ರಕರಣದಲ್ಲಿ ಏಳೆಂಟು ಜನ ಅಭ್ಯರ್ಥಿಗಳು ಮಾತ್ರ ಅಕ್ರಮವಾಗಿ ಬರೆದಿದ್ದಾರಾ? ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳು ದುಡುಕಿನ ನಿರ್ಧಾರ ಕೈಗೊಳ್ಳಬಾರದು
ಕೆಲ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ. ಆದರೆ ಅಭ್ಯರ್ಥಿಗಳು ಆತುರ ಪಡಬಾರದು. ಎಲ್ಲಿ ಜಾಸ್ತಿ ಅಕ್ರಮ ನಡೆದಿದೆಯೋ ಅಲ್ಲಿ ಮರುಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ವಿದ್ಯಾರ್ಥಿಗಳು ದುಡುಕಿನ ನಿರ್ಧಾರ ಕೈಗೊಳ್ಳಬಾರದು, ಸಾಧಕ-ಬಾಧಕಗಳ ಕುರಿತು ಮತ್ತು ಕಾನೂನು ಬಗ್ಗೆ ತಿಳಿದುಕೊಂಡು ನಿರ್ಧಾರ ತೆಗೆದುಕೊಳ್ಳಿ ಎಂದು ತಿಳಿಸಿದರು.

ಪ್ರಕರಣದ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ತಾಳಬೇಕು
ದಿವ್ಯಾ ಹಾಗರಗಿ ಬಂಧನದ ದಿನವೇ ಪಿಎಸ್ಐ ಮರುಪರೀಕ್ಷೆಗೆ ಯಾಕೆ ಆದೇಶ ನೀಡಿದ್ದೀರಿ? ಯಾಕೆ ನಿನ್ನೆ ಮೊನ್ನೆ ಮರುಪರೀಕ್ಷೆಗೆ ಆದೇಶ ನೀಡಲು ಯಾಕೆ ಸಾಧ್ಯವಾಗಿಲ್ಲ? ದೈಹಿಕ ಪರೀಕ್ಷೆಯಲ್ಲಿ ಸಹ ಅಕ್ರಮ ನಡೆದಿದೆ. ದೈಹಿಕ ಪರೀಕ್ಷೆಯನ್ನು ಸಹ ಮರು ಪರೀಕ್ಷೆ ನಡೆಸುತ್ತಿರಾ ಅನ್ನುವುದರ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು. ಭ್ರಷ್ಟಾಚಾರ ವಿರುದ್ಧ ಸರ್ಕಾರ ಇದ್ದರೆ ಪ್ರಕರಣದ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ತಾಳಬೇಕು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮೂರನೇ ಸಿಎಂ ಫಿಕ್ಸ್ ಎಂದ ಪ್ರಿಯಾಂಕ್ ಖರ್ಗೆ
ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಸರಕಾರ ಸರಿಯಾದ ತನಿಖೆ ನಡೆಸಿಲ್ಲ, ಒಂದು ವೇಳೆ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದಿದ್ದರೆ ಮೂರನೇ ಸಿಎಂ ಬರುತ್ತಿದ್ದರು ಎಂದಿದ್ದೆ. ಈಗಲೂ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಈಗಲೂ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದರೆ ಮೂರನೇ ಸಿಎಂ ಫಿಕ್ಸ್ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮತ್ತಷ್ಟು ದಾಖಲೆಗಳನ್ನು ಬಹಿರಂಗ
ಇನ್ನು ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಗೃಹ ಸಚಿವರಲ್ಲಿಯೂ ಸೂಕ್ತ ದಾಖಲೆಗಳು ಇಲ್ಲದಿರಬಹುದು. ಈ ಪ್ರಕರಣದ ಹಲವು ಮಹತ್ವದ ದಾಖಲೆಗಳನ್ನು ನಾಶ ಮಾಡುವ ಕೆಲಸ ನಡೆದಿದೆ. ನಿಮ್ಮ ಬಳಿ ಇಲ್ಲದ ದಾಖಲೆಗಳು ನನ್ನ ಹತ್ತಿರ ಇವೆ. ಒಂದೆರಡು ವಾರದೊಳಗೆ ದಾಖಲೆಗಳನ್ನು ಬಹಿರಂಗಪಡಿಸುವೆ ಎಂದು ಪ್ರಿಯಾಂಕ್ ಖರ್ಗೆ ಮತ್ತೊಂದು ಬಾಂಬ್ ಸಿಡಿಸುವ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications