ಯಾರನ್ನೂ ಕೇಳದೆ ಖೇಣಿಯನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ: ಖರ್ಗೆ
ಕಲಬುರಗಿ, ಮಾರ್ಚ್ 11: ಅಶೋಕ್ ಖೇಣಿ ಅವರ ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್ನಲ್ಲೇ ಸಾಕಷ್ಟು ವಿರೋಧದ ಧನಿಗಳು ಕೇಳಿಬಂದಿದ್ದವು, ಆ ದನಿಗಳಿಗೆ ಈಗ ನಾಯಕತ್ವ ದೊರೆತಂತೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಾ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಶೋಕ್ ಖೇಣಿಯನ್ನು ಯಾವ ಕಾರಣಕ್ಕೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಯಾರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೋ ಅವರಿಗೇ ಗೊತ್ತು ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಅಶೋಕ್ ಖೇಣಿ ಸೇರ್ಪಡೆ ಬಗ್ಗೆ ನಮ್ಮ ಜೊತೆ ನೇರವಾಗಿ ಯಾರೂ ಚರ್ಚೆ ನಡೆಸಿಲ್ಲ. ಅವರಿಂದ ಪಕ್ಷಕ್ಕೆ ಯಾವ ಲಾಭವಿದೆ ಅಂತ ಕರೆತಂದವರೇ ಹೇಳಬೇಕು. ಈ ಬಗ್ಗೆ ನಾನೇನೂ ಹೆಚ್ಚಿಗೆ ಹೇಳಲ್ಲ ಅಂತ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'371(ಜೆ)ಗೆ ಗದಗ ಜಿಲ್ಲೆ ಸೇರ್ಪಡೆಗೆ ಒಪ್ಪಿಗೆಯಿಲ್ಲ'
ಹೈ-ಕರ್ನಾಟಕ ವಿಶೇಷ ಸ್ಥಾನಮಾನ 371(ಜೆ) ವಿಧಿಯಡಿ ಗದಗ ಜಿಲ್ಲೆ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, 371(ಜೆ) ಸಂವಿಧಾನ ತಿದ್ದುಪಡಿ ಆದಮೇಲೆ ನಾ ಬರ್ತೀನಿ, ನೀ ಬರ್ತೀನಿ ಅಂತಿದ್ದಾರೆ. ಹೋರಾಟ ಮತ್ತು ಪ್ರಯತ್ನ ಮಾಡಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದೇವೆ. ಆದರೆ ಅದರಲ್ಲೇ ಎಲ್ಲರೂ ಕಿತ್ತುಕೊಂಡು ತಿನ್ನೋದು ಬೇಡ ಎಂದರು.
ಬಹಮನಿ ಆಡಳಿತದ ಮಹಾರಾಷ್ಟ್ರದ ಅಹಮದ್ನಗರ ಮತ್ತು ನಲಗೊಂಡವನ್ನು 371(ಜೆ)ವ್ಯಾಪ್ತಿಗೆ ಸೇರಿಸಲು ಸಾಧ್ಯವೇ? ಅಂತ ಪ್ರಶ್ನಿಸಿದ ಅವರು 371(ಜೆ) ಕಲಂಗೆ ಗದಗ ಜಿಲ್ಲೆ ಸೇರ್ಪಡೆ ಕುರಿತು ವಿಚಾರ ಸದ್ಯ ಕ್ಯಾಬಿನೆಟ್ ಮುಂದಿಲ್ಲ. ಗದಗ ಜಿಲ್ಲೆ ಸೇರ್ಪಡೆ ಬಗ್ಗೆ ಸಿಎಂ ಕೂಡ ಒಪ್ಪೋದಿಲ್ಲ ಅಂತಾ ನನಗೆ ಭರವಸೆ ಇದೆ. ಒಂದು ವೇಳೆ, ಸರ್ಕಾರ ಒಪ್ಪಿದರೂ, ನಾನು ಒಪ್ಪೋದಿಲ್ಲ ಅಂತ ಸ್ಪಷ್ಟಪಡಿಸಿದ್ದರು. ಕೆಲವರು ರಾಜಕೀಯವಾಗಿ ಅಲ್ಲಿನ ಜನರನ್ನ ಓಲೈಸಿಕೊಳ್ಳಲು ಈ ವಿವಾದ ಹುಟ್ಟಿಸಿದ್ದಾರೆ ಅಂತಾನೂ ಖರ್ಗೆ ಬೇಸರ ವ್ಯಕ್ತಪಡಿಸಿದ್ದರು.











Click it and Unblock the Notifications