ದಲಿತ ಖರ್ಗೆಯನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದ ಮೋದಿಗೆ ಖರ್ಗೆ ಉತ್ತರ
ಕಲಬುರಗಿ, ಮೇ 04: ನಿನ್ನೆ ಕಲಬುರಗಿಯಲ್ಲಿ ಮಾತನಾಡಿದ್ದ ನರೇಂದ್ರ ಮೋದಿ ಅವರ ಭಾಷಣದ ಪ್ರಮುಖ ಅಂಶ ದಲಿತ ಕಾರ್ಡ್. ಕಾಂಗ್ರೆಸ್ ದಲಿತ ವಿರೋಧಿ ಎಂದು ನಿರೂಪಿಸಲು ಅವರು ಬಳಸಿದ್ದ ಅದೇ ಪಕ್ಷದ ಮಲ್ಲಿಕಾರ್ಜುನ ಖರ್ಗೆ ಅವರನ್ನು.
ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆಂದು ಹೇಳಿದ್ದ ಕಾಂಗ್ರೆಸ್ ಕೊನೆಗೆ ಅವರಿಗೆ ಕೈಕೊಟ್ಟಿತು. ಇದು ಅವರ ದಲಿತ ಪ್ರೀತಿ ಎಂದು ಮೋದಿ ಅವರು ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಕಾಲೆಳೆದಿದ್ದರು. ಇಂದು ಮೋದಿ ಅವರ ಮಾತಿಗೆ ಖರ್ಗೆ ಉತ್ತರ ನೀಡಿದ್ದಾರೆ.
ಕಲಬುರಗಿಯ ಕಾಳಗಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಖರ್ಗೆ ಅವರು, ಕಾಂಗ್ರೆಸ್ ಖರ್ಗೆಯನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದಿದ್ದೀರಿ ಅದನ್ನು ಬಿಡಿ, ನೀವು ಮನಸ್ಸು ಮಾಡಿದ್ದರೆ ಖರ್ಗೆಗೆ ಅಧಿಕೃತ ವಿರೋಧ ಪಕ್ಷದ ನಾಯಕ ಸ್ಥಾನವನ್ನು ನೀಡಬಹುದಿತ್ತು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅದು ಅವಶ್ಯಕವೂ ಆಗಿತ್ತು ಆದರೆ ಏಕೆ ನೀವು ಅದನ್ನು ಮಾಡಲಿಲ್ಲ' ಎಂದು ಪ್ರಶ್ನಿಸಿದರು.

'ನಿಮಗೆ ನಿಜವಾಗಿಯೂ ದಲಿತ ಪರ ಕಾಳಜಿ ಇದ್ದಿದ್ದರೆ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ನೀವು ನೀಡಿರುತ್ತಿದ್ದಿರಿ, ನೀವು ಹಾಗೆ ಅಧಿಕೃತ ವಿರೋಧ ಪಕ್ಷದ ಸ್ಥಾನ ನೀಡಿದ್ದರೆ ನಿಜವಾಗಿಯೂ ನಿಮಗೆ ದಲಿತ ಪರ ಕಾಳಜಿ ಇದೆ, ನಮ್ಮ ಪಕ್ಷಕ್ಕೆ ಇಲ್ಲ ಎಂದು ಒಪ್ಪಿಕೊಂಡು ಬಿಡುತ್ತಿದ್ದೆ' ಎಂದು ಖರ್ಗೆ ಪ್ರತ್ಯುತ್ತರ ನೀಡಿದರು.
ಮೋದಿ ಅವರು ತಾನೂ ಕೂಡ ಹಿಂದುಳಿದ ಸಮುದಾಯಕ್ಕೆ ಸೇರಿದವನು ಎಂಬ ಮಾತಿಗೂ ಉತ್ತರಿಸಿದ ಖರ್ಗೆ, 'ನೀವು ಮುಖ್ಯಮಂತ್ರಿ ಆದ ನಂತರ ನಿಮ್ಮ ಸಮುದಾಯ ಹಿಂದುಳಿದ ವರ್ಗಕ್ಕೆ ಸೇರಿತು. ಸರಿ ಅದನ್ನು ಒಪ್ಪಿಕೊಳ್ಳೋಣ ಆದರೆ ನೀವು ಇರುವುದು ಜಾತಿವಾದವನ್ನು ನೀರು ಹಾಕಿ ಬೆಳೆಸುತ್ತಿರುವ, ಆರ್ಎಸ್ಎಸ್, ವಿಎಚ್ಪಿ, ಭಜರಂಗದಳ, ಬಿಜೆಪಿಯ ಕಪಿಮುಷ್ಠಿಯಲ್ಲಿ, ನಿಮ್ಮಿಂದ ಅಲ್ಪಸಂಖ್ಯಾತರ ಅಭಿವೃದ್ಧಿಯನ್ನು ನಿರೀಕ್ಷಿಸುವಂತೆಯೇ ಇಲ್ಲ' ಎಂದರು.












Click it and Unblock the Notifications